ಮಂತ್ರವಾದಿ ಮಾತಿನಿಂದ ನಾಪತ್ತೆ ಮಗನ ತಿಥಿ ಮಾಡಿದ ಪೋಷಕರು, 7 ವರ್ಷದ ಬಳಿಕ ಮಡಿಲು ಸೇರಿದ ಪುತ್ರ!
ಇದ್ದಕ್ಕಿದ್ದಂತೆ ಮಗ ನಾಪತ್ತೆಯಾಗಿದ್ದ.ಹುಡುಕಾಟ, ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕೊನೆಗೆ ಮಂತ್ರವಾದಿ ಕರೆಸಲಾಗಿತ್ತು. ಮಂತ್ರವಾದಿ ಮಗ ಸತ್ತಿದ್ದಾನೆ ಎಂದಿದ್ದಾರೆ. ಮಂತ್ರವಾದಿ ಸೂಚನೆಯಂತೆ ಮಗನ ತಿಥಿ ಮಾಡಲಾಗಿತ್ತು. ಇದಾದ 7 ವರ್ಷದ ಬಳಿಕ ಮಗ ಮನೆಗೆ ವಾಪಸ್ ಆಗಿದ್ದಾನೆ.
ಪಾಟ್ನಾ(ಆ.01): ಪತ್ನಿಯ ಹಠಾತ್ ನಿಧನದಿಂದ ಮನನೊಂದಿದ್ದ ಪುತ್ರ ದಿಢೀರ್ ನಾಪತ್ತೆಯಾಗಿದ್ದ. ವಯಸ್ಸಾದ ಪೋಷಕರು ದೂರು ನೀಡಿ ತಾವು ಬಸ್ ಹತ್ತಿ ಹತ್ತಿರದ ಊರಿಗೆ ತೆರಳಿ ಹುಡುಕಾಟ ನಡೆಸಿ ಸೋತಿದ್ದಾರೆ. ಮಂತ್ರವಾದಿ ಕೈಯಿಂದಲೂ ಹುಡುಕಾಡಿದ್ದಾರೆ. ಮಂತ್ರದ ಮೂಲಕ ನೋಡಿದ ಮಂತ್ರವಾದಿ ನಿಮ್ಮ ಮಗ ಸತ್ತಿದ್ದಾನೆ. ತಿಥಿ ಮಾಡಿ ಎಂದು ಸೂಚನೆಯಿಂದ ಪೋಷಕರು ಮತ್ತಷ್ಟು ಕಂಗಾಲಾಗಿದ್ದಾರೆ. ಮನೆಯಿಂದ ನಾಪತ್ತೆಯಾಗಿ ಮೃತಪಟ್ಟಿರುವ ಮಗನ ತಿಥಿ ಸೂಕ್ತವಾಗಿ ಮಾಡಬೇಕು. ಯಾವುದೇ ಅಪಚಾರವಾಗಬಾರದು. ಸಣ್ಣ ತಪ್ಪಾದರೂ ಮಗನ ಆತ್ಮ ಇಲ್ಲೇ ಅಲೆದಾಡುತ್ತದೆ ಎಂದು ಬೆದರಿಸಿದ ಮಂತ್ರವಾದಿ ಹಣ ಪಡೆದು ತಿಥಿ ಮಾಡಿದ್ದಾರೆ. ಇದಾದ 7 ವರ್ಷದ ಬಳಿಕ ಇದೀಗ ಸತ್ತಿದ್ದಾನೆ ಎಂದು ನಂಬಿದ್ದ ಮಗ ಮನೆಗೆ ಮರಳಿದ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾದಿಂದ ಕೆಲ ದೂರದಲ್ಲಿರುವ ಗ್ರಾಮದ ಬಿಹಾರಿ ರೈ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಪೋಷಕರು, ಹೆಂಡತಿ ಜೊತೆಗಿನ ಸಂಸಾರ ಯಾವುದೇ ಸಮಸ್ಯೆಗಳಿಲ್ಲದ ಸಾಗಿತ್ತು. ಆದರೆ ದಿಢೀರ್ ಬಿಹಾರಿ ರೈ ಪತ್ನಿ ಮೃತಪಟ್ಟಿದ್ದಾಳೆ. ಇದು ಬಿಹಾರಿ ರೈಗೆ ತೀವ್ರ ಆಘಾತ ತಂದಿದೆ. ಇತ್ತ ಕೆಲಸಕ್ಕೂ ಹೋಗದೆ ಮನೆಯಲ್ಲೇ ಕಾಲಕಳೆಯಲು ಆರಂಭಿಸಿದ. ಇತ್ತ ವಯಸ್ಸಾದ ಪೋಷಕರು ಸಣ್ಣ ಪುಟ್ಟ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು. ತೀವ್ರವಾಗಿ ಮನನೊಂದ ಬಿಹಾರಿ ರೈ, ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ತೆರಳಿದ್ದಾನೆ. ಆದರೆ ಮರಳಿ ಮನೆಗೆ ಬರಲೇ ಇಲ್ಲ.ಅಂದು ಬಿಹಾರಿ ವಯಸ್ಸು 30.
10 ವರ್ಷಗಳ ಬಳಿಕ ಪತಿಯನ್ನು ಮನೆಗೆ ಕರೆತಂದ ಪತ್ನಿ, ಪುನರ್ಮಿಲದ ಬೆನ್ನಲ್ಲೇ ಕಾದಿತ್ತು ಶಾಕ್!
ಕೆಲಸಕ್ಕೆ ಹೋದವ ಮರಳಿ ಬಾರದಾಗ ಪೋಷಕರ ಆತಂಕ ಹೆಚ್ಚಾಗಿತ್ತು. ಮೊದಲ ದಿನ ಬಾರದಾಗ, ಮರುದಿನ ಬರುತ್ತಾನೆ ಎಂದು ನಂಬಿದ್ದರು. ಇದು ದಿನಗಳೇ ಉರುಳಿತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಿಂಗಳು ಉರುಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಪೋಷಕರೇ ಬಸ್ಸು ಹತ್ತಿ ಹಲವು ಗ್ರಾಮಗಳು, ಪಟ್ಟಣಗಳಿಗೆ ತೆರಳಿ ತಮ್ಮ ಮಗನಿಗಾಗಿ ಹುಡುಕಾಟ ಆರಂಭಿಸಿದ್ದರು.
ಎಲ್ಲಾ ಪ್ರಯತ್ನದ ಬಳಿಕ ಮಂತ್ರವಾದಿಯನ್ನು ಮನೆಗೆ ಕರೆಸಿ ನೋಡಿದ್ದಾರೆ. ಈ ವೇಳೆ ಮಂತ್ರವಾದಿ, ನಿಮ್ಮ ಮಗ ಸತ್ತಿದ್ದಾನೆ ಎಂಬ ಆಘಾತಕಾರಿ ಸುದ್ದಿ ನೀಡಿದ್ದ. ಕೊನೆಗೆ ಆತನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ಹೀಗಾಗಿ ನಾನು ಸೂಚಿಸುವಂತೆ ತಿಥಿ ಮಾಡಬೇಕು ಎಂದಿದ್ದಾರೆ. ಇದಕ್ಕಾಗಿ ಒಂದಿಷ್ಟು ಹಣ ಖರ್ಚಾಗುತ್ತೆ ಎಂದಿದ್ದಾನೆ. ಬೇರೆ ದಾರಿ ಇಲ್ಲದೆ ಹಣ ನೀಡಿ ಮಗನ ಪುಣ್ಯತಿಥಿ ಮಾಡಿದ್ದಾರೆ.
ಬಾಲ್ಯದಲ್ಲಿ ನಾಪತ್ತೆಯಾದ ಬಾಲಕ 20 ವರ್ಷದ ಬಳಿಕ ಮರಳಿ ಪೋಷಕರ ಮಡಿಲಿಗೆ
ಮಗನ ನೋವಿನಲ್ಲೇ ದಿನದೂಡುತ್ತಿದ್ದ ಪೋಷಕರು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಿದ್ದಂತೆ ಗ್ರಾಮ ಪಂಚಾಯಿತ್ ಅಧ್ಯಕ್ಷನಿಗೆ ದೆಹಲಿಯಿಂದ ಕರೆಯೊಂದು ಬಂದಿದೆ. ಕಾರಣ ಈ ನಾಪತ್ತೆಯಾಗಿದ್ದ ವ್ಯಕ್ತಿ ಇತ್ತೀಚೆಗೆ ದೆಹಲಿಯ ಹೊರವಲಯದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಯಾರು ಇಲ್ಲದ ಈತನನ್ನು ಚೇತರಿಕೆ ಕಂಡ ಬೆನ್ನಲ್ಲೇ ಅನಾಥಾಶ್ರಮ ಸಂಸ್ಥೆಗೆ ಕಳುಹಿಸಲಾಗಿದೆ. ಅನಾಥಾಶ್ರಮದಲ್ಲಿ ಹಲವು ಮಾಹಿತಿ ಕೇಳಿದ್ದಾರೆ. ಆದರೆ ಯಾವುದಕ್ಕೂ ಉತ್ತರ ನೀಡಿಲ್ಲ. ಕೊನೆಗೆ ತನ್ನ ಗ್ರಾಮದ ಹೆಸರನ್ನು ಹೇಳಿದ್ದಾನೆ. ಹೀಗಾಗಿ ಗ್ರಾಮದ ಪಂಚಾಯತ್ ಅಧ್ಯಕ್ಷರಿಗೆ ಕರೆ ಮಾಡಿ ಪೋಟೋ ಹಂಚಿಕೊಂಡಿದ್ದಾರೆ. ಇದು ನಾಪತ್ತೆಯಾಗಿರುವ ಗ್ರಾಮದ ಬಿಹಾರಿ ರೈ ಎಂದು ಅಧ್ಯಕ್ಷನಿಗೆ ಮನವರಿಕೆ ಆಗಿದೆ. ತಕ್ಷಣವೇ ಬಿಹಾರಿ ರೈ ಮನೆಗೆ ಬಂದ ಅಧ್ಯಕ್ಷ, ಸಿಹಿ ಸುದ್ದಿ ನೀಡಿದ್ದಾರೆ. ನಿಮ್ಮ ಮಗ ಬದುಕಿದ್ದಾನೆ. ಇದು ಆತನ ಫೋಟೋ, ಗುರುತು ಹಿಡಿಯಲು ಸಾಧ್ಯವೇ ಎಂದು ಕೇಳಿದ್ದಾನೆ. ಅಧ್ಯಕ್ಷನ ಮೊಬೈಲ್ನಲ್ಲಿನ ಫೋಟೋ ನೋಡಿ ಪೋಷಕರ ಕಣ್ಣೀರಿಟ್ಟಿದ್ದಾರೆ. ಇದೇ ನಮ್ಮ ಮಗ ಎಂದು ಖಚಿತಪಡಿಸಿದ್ದಾರೆ.
ಅಧ್ಯಕ್ಷ ಸ್ವಂತ ಹಣದಿಂದ ಬಿಹಾರಿ ರೈಯನ್ನು ದೆಹಲಿಯಿಂದ ಮರಳಿ ಮನೆಗೆ ಕರೆಯಿಸಿಕೊಂಡಿದ್ದಾರೆ. ಪಂಚಾಯತ್ ಅಧ್ಯಕ್ಷನ ಮುಂದಾಳತ್ವದಲ್ಲಿ ಇದೀಗ 7 ವರ್ಷದ ಬಳಿಕ ಮಗ ಪೋಷಕರ ಮಡಿಲು ಸೇರಿದ್ದಾನೆ.