ಚಂದ್ರಯಾನ ಯಶಸ್ಸಿಗೆ ಭಾರತ ಹೊಗಳಿ, ತಮ್ಮ ದೇಶವನ್ನೇ ಟೀಕಿಸಿದ ಪಾಕ್ ಮಾಧ್ಯಮ!
ಬಾಹ್ಯಾಕಾಶದಲ್ಲಿ ಭಾರತ ಮಾಡಿರುವ ಸಾಧನೆಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಕೊಂಡಾಡುತ್ತಿದೆ. ಇದೀಗ ಪಾಕಿಸ್ತಾನ ಮಾಧ್ಯಮಗಳು ಭಾರತದ ಚಂದ್ರಯಾನ 3 ಯಶಸ್ಸನ್ನು ಕೊಂಡಾಡಿದೆ. ಇದೇ ವೇಳೆ ಪಾಕಿಸ್ತಾನ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇಸ್ಲಾಮಾಬಾದ್(ಆ.27) ಇಸ್ರೋ ವಿಜ್ಞಾನಿಗಳ ಸತತ ಪ್ರಯತ್ನದ ಫಲವಾಗಿ ಭಾರತ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಈಗಾಗಲೇ ಸಂಶೋಧನೆ ಆರಂಭಿಸಿದೆ. ಭಾರತದ ಚಂದ್ರಯಾನ ಯಶಸ್ಸನ್ನು ಹಲವು ದೇಶಗಳು ಕೊಂಡಾಡಿದೆ. ಈಗಾಗಲೇ ಪಾಕಿಸ್ತಾನ ಕೂಡ ಭಾರತಕ್ಕೆ ಅಭಿನಂದನೆ ಸಲ್ಲಿಸಿದೆ. ಇದೀಗ ಪಾಕಿಸ್ತಾನ ಮಾಧ್ಯಮಗಳು ಭಾರತದ ಚಂದ್ರಯಾನವನ್ನು ಹೊಗಳಿದೆ. ಇಂದು ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಎಲ್ಲಿದೆ? ಎಂದು ಪ್ರಶ್ನಿಸಿ ಪಾಕಿಸ್ತಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪಾಕಿಸ್ತಾನದ ಜಿಯೋ ಟಿವಿ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಭಾರತದ ಸಾಧನೆಗೆ ಸಲಾಂ ಹೇಳಿವೆ. ಜಿಯೋ ಟಿವಿಯಲ್ಲಿ ನಿರೂಪಕಿ ಹುಮಾ ಅಮೀರ್ ಶಾ ಹಾಗೂ ಅಬ್ದುಲ್ಲಾ ಸುಲ್ತಾನ್ ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಭಾರತ ಈಗಾಗಲೇ ಚಂದ್ರನ ಅಂಗಳದಲ್ಲಿ ಕಾಲಿಟ್ಟಿದೆ. ಇದು ಸಾಧನೆ, ಇದು ಅಭಿವೃದ್ಧಿ. ಆದರೆ ನಾವೆಲ್ಲಿದ್ದೇವೆ? ಆಂತರಿಕ ಸಂಘರ್ಷ, ಹಣದುಬ್ಬರ, ಸ್ಥಿರ ಸರ್ಕಾರ ವಿಲ್ಲದೇ ದಿವಾಳಿಯತ್ತ ಖಜಾನೆ, ಆಹಾರ ವಸ್ತುಗಳ ಖರೀದಿ ಶಕ್ತಿ ಕಳೆದುಕೊಂಡ ಜನ ಸೇರಿದಂತೆ ಸಮಸ್ಯೆಗಳಲ್ಲೇ ಪಾಕಿಸ್ತಾನ ಮುಳುಗಿದೆ. ಆದರೆ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ವಿಶ್ವದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಸಾಧನೆ ನಮಗೂ ಖುಷಿ ತಂದಿದೆ ಎಂದು ಜಿಯೋ ಟಿವಿ ಹೇಳಿದೆ.
ಇಸ್ರೋ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಮೋದಿ ಭಾವುಕ !
ಅಮೆರಿಕ, ರಷ್ಯಾದಂತ ಬಲಿಷ್ಠ ದೇಶಗಳು ಈ ರೀತಿಯ ಸಾಧನೆ ಮಾಡುತ್ತಿತ್ತು. ಇದೀಗ ಭಾರತ ಇದೇ ಸಾಧನೆ ಮಾಡಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟ 4ನೇ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.ಪಾಕಿಸ್ತಾನ ಈ ರೀತಿ ವಿಷಯಗಳಲ್ಲಿ ಪ್ರತಿಸ್ಪರ್ಧೆ ನೀಡಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾಕಿಸ್ತಾನ ಎಲ್ಲಿದೆ? ಇದನ್ನು ಪಾಕಿಸ್ತಾನ ಆಲೋಚಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಬಹುತೇಕ ಮಾಧ್ಯಮಗಳು ಭಾರತದ ಚಂದ್ರಯಾನವನ್ನು ಹೊಗಳಿದೆ. ಭಾರತದ ಸಾಧನೆ ಪಾಕಿಸ್ತಾನ ಸೇರಿದಂತೆ ಇತರ ಹಲವು ದೇಶಗಳಿಗೆ ಮಾದರಿ ಎಂದಿದೆ. ಪಾಕಿಸ್ತಾನ ಮಾಧ್ಯಮಗಳಲ್ಲಿ ಭಾರತ, ಇಸ್ರೋ, ವಿಜ್ಞಾನಿಗಳ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಂದ್ರಯಾನ -2 ತಲುಪಿದ ಸ್ಥಳ ಇನ್ಮುಂದೆ ತಿರಂಗಾ ಪಾಯಿಂಟ್: ಮೋದಿ ಘೋಷಣೆ
ಚಂದ್ರಯಾನ ಯಶಸ್ಸಿಗೆ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ಮೋದಿ ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಶನಿವಾರ ಪೀಣ್ಯದ ಇಸ್ಟ್ರಾಕ್ ಕೇಂದ್ರದಲ್ಲಿ ಚಂದ್ರಯಾನ-3 ಯಶಸ್ಸಿಗೆ ಕಾರಣವಾದ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಚಂದ್ರಯಾನ-3 ಯಶಸ್ಸಿನ ವೇಳೆ ನಾನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರೂ ನನ್ನ ಮನವು ಪೂರ್ಣ ಪ್ರಮಾಣದಲ್ಲಿ ನಿಮ್ಮ ಕಡೆಗೇ ಇತ್ತು. ಮನಸ್ಸಿನಲ್ಲಿ ಏನೋ ವಿಶೇಷವಾದ ಖುಷಿ, ಒಂಥರಾ ತಳಮಳ. ಇಷ್ಟೊಂದು ತಳಮಳ...’ ಎಂದು ಮಾತಾಡಲಾಗದೆ ತುಸು ಸಮಯ ಮೌನರಾದರು. ಈ ವೇಳೆ ನರೇಂದ್ರ ಮೋದಿ ಗದ್ಗದಿತರಾದರೆ, ಸಭಿಕರಾಗಿದ್ದ ವಿಜ್ಞಾನಿಗಳು ಭಾವುಕರಾದರು.