Padma Awards 2025: ರಾಜ್ಯದ ವೆಂಕಪ್ಪ ಅಂಬಾಜಿ, ಭೀಮವ್ವ, ವಿಜಯಲಕ್ಷ್ಮಿ ದೇಶಮಾನೆಗೆ ಪದ್ಮಶ್ರೀ ಗೌರವ

ಗಣರಾಜ್ಯೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು 2025ರ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಕರ್ನಾಟಕದ ಗೊಂಧಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಾಟೆಕರ್‌ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ.

Padma awardees of 2025 unsung Heros of India And Karnataka san

ನವದೆಹಲಿ (ಜ.25): ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು 2025ರ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತೆರೆಮರೆಯ ಸಾಧಕರಿಗೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಭಾರತ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಪರಂಪರೆಯಲ್ಲಿ ಸಾಧನೆ ಮಾಡಿದ ಹೀರೋಗಳಿಗೆ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಪ್ರಕಟವಾಗಲಿದ್ದು, ಮೊದಲ ಹಂತವಾಗಿ ಪದ್ಮಶ್ರೀ ಪ್ರಶಸ್ತಿ ಪಡೆದವರ ಲಿಸ್ಟ್‌ ಬಹಿರಂಗವಾಗಿದೆ. ಇದರಲ್ಲಿ ಗೊಂದಲಿ ಜಾನಪದ ಕಲೆಯಲ್ಲಿ ಪ್ರಸಿದ್ಧ ಹೆಸರಾಗಿರುವ ಕರ್ನಾಟಕದ ಬಾಗಲೋಕಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಪದ್ಮಶ್ರೀ ಗೌರವ ಲಭಿಸಿದೆ. ಅದರೊಂದಿಗೆ ಕೊಪ್ಪಳದ ತೊಗಲು ಗೊಂಬೆ ಕಲಾವಿದೆ ಭೀಮವ್ವ  ಶಿಳ್ಳೇಕ್ಯಾತ ಹಾಗೂ  ಔಷಧ ವಿಭಾಗದಲ್ಲಿ ಕಲಬುರಗಿಯ ವಿಜಯಲಕ್ಷ್ಮೀ ದೇಶಮಾನೆ ಕೂಡ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳ ಘೋಷಣೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ, ಮೂರು ಗ್ರ್ಯಾಮಿ ಪ್ರಶಸ್ತಿಗಳ ವಿಜೇತ ರಿಕ್ಕಿ ಕೇಜ್ಹಾ, ಹಾಸನ ರಘು ಅವರುಗಳಿಗೂ ಸಹ ಕಲಾ ವಿಭಾಗದಲ್ಲಿ ಪದ್ಮಶ್ರೀ ಘೋಷಿಸಲಾಗಿದೆ.

ವೆಂಕಪ್ಪ ಸಂಬಾಜಿ ಸುಗತೇಕರ್‌ ಅವರ ಬಗ್ಗೆ: ಎಂದಿಗೂ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದೇ ಇದ್ದರೂ, ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿ ಕಟ್ಟುತ್ತಿದ್ದ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ 110ನೇ ಮನ್‌ ಕೀ ಬಾತ್‌ ರೇಡಿಯೋ ಸರಣಿಯಲ್ಲೂ ಗುಣಗಾನ ಮಾಡಿದ್ದರು. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು‌ ಸಾವಿರಕ್ಕೂ ಅಧಿಕ ಜನಪದ (ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದರು. ಇಷ್ಟು ಮಾತ್ರವಲ್ಲದೆ ಒಂದು ರೂಪಾಯಿ ಕೂಡ ಪಡೆಯದೇ ಸಾವಿರಾರು ಜನರಿಗೆ ಅವರು ಗೊಂದಲಿ ಹಾಡುವುದನ್ನು ಕಲಿಸಿದ್ದಾರೆ. 81 ವರ್ಷದ ವೆಂಕಪ್ಪ ಅಂಬಾಜಿ, ಕಳೆದ 71 ವರ್ಷಗಳಿಂದ ಪದ ಹಾಡುತ್ತಿದ್ದಾರೆ. 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರ. ಕರ್ನಾಟಕ ಸರ್ಕಾರ 2022ರಲ್ಲಿ ಗೊಂದಲಿ ಪದ ಸೇವೆಗೆ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಕೂಡ ಪ್ರದಾನ ಮಾಡಿತ್ತು. ರಾಜ್ಯ ಸರಕಾರದಿಂದ ಈ ಹಿಂದೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ವೆಂಕಪ್ಪ ಅವರನ್ನು ಅರಸಿ ಬಂದಿವೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ, ಪರರಾಜ್ಯದಲ್ಲೂ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ.

Padma Awards 2024: ಚಿರಂಜೀವಿ, ವೈಜಯಂತಿಮಾಲಾ ಸೇರಿ ಐವರು ಕನ್ನಡಿಗರಿಗೆ ರಾಷ್ಟ್ರಪತಿಯಿಂದ ಪದ್ಮ ಪ್ರಶಸ್ತಿ ಪ್ರದಾನ

ಭೀಮವ್ವ ಶಿಳ್ಳೇಕ್ಯಾತ ಕುರಿತು: ಕೊಪ್ಪಳದ ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದವರಾಗಿದ್ದು ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪರದೆಯ ಹಿಂದೆ ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ  ಭೀಮವ್ವ ದೊಡ್ಡಬಾಳಪ್ಪ ಅವರು ದೇಶ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಇಳಿ ವಯಸ್ಸಿನಲ್ಲಿಯೂ ತೊಗಲುಗೊಂಬೆಯಾಟವನ್ನು ಮನಮುಟ್ಟುವಂತೆ ಪ್ರದರ್ಶಿಸುವ ಭೀಮವ್ವ ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್ ಮೊದಲಾದ ಭಾರತದ ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುವ ತಂಡಗಳಲ್ಲಿ ಪ್ರಮುಖ ಸದಸ್ಯೆಯಾಗಿದ್ದ ಭೀಮವ್ವ ತನ್ನ ಮಾತಿನ ಚಾಕಚಕ್ಯತೆಯಿಂದ ಹಾಗೂ ಸಮಯೋಚಿತ ಸಂಭಾಷಣೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

Padma Awards 2024: ವೆಂಕಯ್ಯನಾಯ್ಡು, ನಟ ಮಿಥುನ್‌ ಚಕ್ರವರ್ತಿ, ಗಾಯಕಿ ಉಷಾ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

ಕೊಪ್ಪಳ ತಾಲೂಕಿನ‌ ಮೊರನಾಳ ಗ್ರಾಮದ ಭೀಮವ್ವ ದೊಡ್ಡಬಾಲಪ್ಪ ಶಿಳ್ಳೇಕ್ಯಾತ ಅವರಿಗೆ ಈಗ 96 ವರ್ಷ. 14ನೇ ವರ್ಷದಿಂದಲೇ ತೊಗಲುಗೊಂಬೆಯಾಟ ಪ್ರದರ್ಶನ ಆರಂಭ ಮಾಡಿದ್ದ ಭೀಮವ್ವ, ರಾಮಾಯಣ ಮಹಾಭಾರತದ ಮಹಾಕಾವ್ಯವನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡುತ್ತಾ  ಬಂದಿದ್ದಾರೆ. ವಿದೇಶದಲ್ಲಿಯೂ ಅವರು ತೊಗಲುಗೊಂಬೆಯಾಟದ ಪ್ರದರ್ಶನ ನೀಡಿದ್ದಾರೆ. 2014 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಭೀಮವ್ವ ಶಿಳ್ಳೇಕ್ಯಾತರ್, ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಹಿರಿಯ ನಾಗಿರಕರ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ವಿಜಯಲಕ್ಷ್ಮೀ ದೇಶಮಾನೆ ಕುರಿತಾಗಿ: ಸುಮಾರು ಎರಡು ದಶಕಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗನಿವಾರಣೆಗಾಗಿ ಶ್ರಮಿಸುತ್ತಿರುವವರು ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು. ಗುಲ್ಬರ್ಗಾ ಜಿಲ್ಲೆಯಲ್ಲಿ ಜನಿಸಿದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ). ಎಫ್.ಎ.ಐ.ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಜಯಲಕ್ಷ್ಮಿ ದೇಶಮಾನೆ ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಹಲವು ಸಂಸ್ಥೆಗಳು ಕಲಶ ಪ್ರಶಸ್ತಿ, ರಾಷ್ಟ್ರೀಯ ರತ್ನ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, 1999ರ ವರ್ಷದ ಮಹಿಳಾ ಪ್ರಶಸ್ತಿಯನ್ನು ಇತ್ತು ಗೌರವಿಸಿವೆ. ಇಂಟರ್ನ್ಯಾಷನಲ್ ಸ್ಟಡಿ ಸರ್ಕಲ್ 2003 ಹಾಗೂ 2004ರಲ್ಲಿ ಚಿನ್ನದ ಪದಕ ನೀಡಿ ಗೌರವಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು, ಕ್ಯಾನ್ಸರ್ ರೋಗಕ್ಕೆ ತುತ್ತಾದ ದುರ್ದೈವಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ವೈದ್ಯೆ ವಿಜಯಲಕ್ಷ್ಮಿ ಮಾನೆ ಅವರು.

ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಇತರರು..
ನರೇನ್ ಗುರುಂಗ್ (ಜಾನಪದ ಗಾಯಕ) - ನೇಪಾಳ
ಹರಿಮನ್ ಶರ್ಮಾ (ಸೇಬು ಬೆಳೆಗಾರ) - ಹಿಮಾಚಲ ಪ್ರದೇಶ
ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಸಾಮಾಜಿಕ ಕಾರ್ಯಕರ್ತ) - ಅರುಣಾಚಲ ಪ್ರದೇಶ
ವಿಲಾಸ್ ಡಾಂಗ್ರೆ (ಹೋಮಿಯೋಪತಿ ವೈದ್ಯ) - ಮಹಾರಾಷ್ಟ್ರ
ಜೋನಾಸ್ ಮಾಸೆಟ್ಟಿ (ವೇದಾಂತ ಗುರು) ಬ್ರೆಜಿಲ್
ಹರ್ವಿಂದರ್ ಸಿಂಗ್ (ಪ್ಯಾರಾಲಿಂಪಿಯನ್ ಚಿನ್ನದ ಪದಕ ವಿಜೇತ) ಹರಿಯಾಣ
ಭೀಮ್ ಸಿಂಗ್ ಭಾವೇಶ್ (ಸಮಾಜ ಕೆಲಸ) ಬಿಹಾರ
ಪಿ.ದಕ್ಷಿಣ ಮೂರ್ತಿ (ಡೋಲು ಕಲಾವಿದ) ಪುದುಚೇರಿ
ಎಲ್. ಹ್ಯಾಂಗ್‌ಥಿಂಗ್ (ಕೃಷಿ-ಹಣ್ಣುಗಳು) ನಾಗಾಲ್ಯಾಂಡ್
ಬೇರು ಸಿಂಗ್ ಚೌಹಾಣ್ (ಜಾನಪದ ಗಾಯಕ) - ಮಧ್ಯಪ್ರದೇಶ
ಶೇಖಾ ಎ.ಜೆ. ಅಲ್ ಸಬಾಹ್ (ಯೋಗ) - ಕುವೈತ್ 

ಶೀಘ್ರದಲ್ಲೇ ಪದ್ಮಶ್ರೀ ಪುರಸ್ಕಾರದ ಪೂರ್ಣಪಟ್ಟಿ ಅಪ್‌ಡೇಟ್‌ ಆಗಲಿದೆ.

Padma awardees of 2025 unsung Heros of India And Karnataka san

Padma awardees of 2025 unsung Heros of India And Karnataka san

Padma awardees of 2025 unsung Heros of India And Karnataka san

Latest Videos
Follow Us:
Download App:
  • android
  • ios