ದ್ವೇಷ ತುಂಬಿದ ಅಸುರ ಶಕ್ತಿ ವಿರುದ್ಧ ನಮ್ಮ ಹೋರಾಟ: ರಾಹುಲ್ ಗಾಂಧಿ
ಶಕ್ತಿ ವಿರುದ್ಧ ಹೋರಾಟ ಕುರಿತ ತಮ್ಮ ಹೇಳಿಕೆಯನ್ನು ಬಿಜೆಪಿ ಪ್ರಮುಖ ಚುನಾವಣಾ ವಿಷಯವಾಗಿ ಬಳಸಿಕೊಂಡ ಬೆನ್ನಲ್ಲೇ, ನಮ್ಮ ಹೋರಾಟ ದ್ವೇಷ ತುಂಬಿದ ಅಸುರ ಶಕ್ತಿ ವಿರುದ್ಧ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ (ಮಾ.22): ಶಕ್ತಿ ವಿರುದ್ಧ ಹೋರಾಟ ಕುರಿತ ತಮ್ಮ ಹೇಳಿಕೆಯನ್ನು ಬಿಜೆಪಿ ಪ್ರಮುಖ ಚುನಾವಣಾ ವಿಷಯವಾಗಿ ಬಳಸಿಕೊಂಡ ಬೆನ್ನಲ್ಲೇ, ನಮ್ಮ ಹೋರಾಟ ದ್ವೇಷ ತುಂಬಿದ ಅಸುರ ಶಕ್ತಿ ವಿರುದ್ಧ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ‘ನಾವು ದ್ವೇಷ ತುಂಬಿದ ರಾಕ್ಷಸ ಶಕ್ತಿ ವಿರುದ್ಧ ಹೋರಾಡುತ್ತಿದ್ದೇವೆ. ನಾನು ಎಲ್ಲೂ ಧಾರ್ಮಿಕ ಶಕ್ತಿಯ ಬಗ್ಗೆ ಮಾತನಾಡಿಲ್ಲ.
ಆದರೆ ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿಯ ಬಗ್ಗೆ ಮಾತನಾಡಿದ್ದೇನೆ’ ಎಂದು ಮುಂಬೈನಲ್ಲಿ ತಾವು ನೀಡಿದ ಹೇಳಿಕೆ ಸಮರ್ಥಿಸಿಕೊಂಡರು. ಅಲ್ಲದೆ ನನ್ನ ಮಾತುಗಳನ್ನು ಪ್ರಧಾನಿ ಮೋದಿ ತಿರುಚಿದ್ದಾರೆ ಎಂದು ಆರೋಪಿಸಿದರು. ಮಾ.19ರಂದು ರಾಹುಲ್ ಗಾಂಧಿ ನಮ್ಮ ಹೋರಾಟ ಶಕ್ತಿ ವಿರುದ್ಧ ಎಂದು ವಿವಾದಾತ್ಮಕ ಹೇಳಿಕೆಗೆ ಪ್ರಧಾನಿ ಮೋದಿ ಕಾಂಗ್ರೆಸ್ ಹಿಂದೂ ಧರ್ಮದ ಶಕ್ತಿಯನ್ನು ಹೊಸಕಿಹಾಲು ಯತ್ನಿಸುತ್ತಿದೆ ಎಂದು ಹೇಳಿದ್ದರು.
ಒಂದು ದೇಶ, ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಬಿಜೆಪಿ ಪ್ರಣಾಳಿಕೆ ಭಾಗ?
ಬಿಜೆಪಿಗೆ ಸಂವಿಧಾನ ಬದಲಿಸುವ ಧೈರ್ಯ ಇಲ್ಲ: ದೇಶದ ಸಂವಿಧಾನವನ್ನು ಬದಲಿಸುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ. ಆದರೂ ಅವರು ಬರೀ ಗದ್ದಲ ಮಾಡುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಸತ್ಯ ಹಾಗೂ ಜನರ ಬೆಂಬಲ ತಮ್ಮ ಪರವಾಗಿ ಇದೆ ಎಂದೂ ಹೇಳಿದ್ದಾರೆ.
ಮಣಿಪುರದಿಂದ ಆರಂಭವಾಗಿದ್ದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಸಮಾರೋಪದ ಅಂಗವಾಗಿ ಮುಂಬೈನ ಮಣಿ ಭವನ (ಮುಂಬೈನ ಮಹಾತ್ಮ ಗಾಂಧಿ ನಿವಾಸ)ದಿಂದ ಆಗಸ್ಟ್ ಕ್ರಾಂತಿ ಮೈದಾನ (1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾದ ಸ್ಥಳ)ದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ಯನ್ನು ರಾಹುಲ್ ಗಾಂಧಿ ಭಾನುವಾರ ನಡೆಸಿದರು. ಈ ವೇಳೆ ಸಂವಿಧಾನ ಬದಲಿಸುವ ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟರು.
ಪ್ರಧಾನಿ ಮೋದಿ ಮಹದಾಯಿ ಗ್ಯಾರಂಟಿ ಕೊಡಲಿ: ಕಾಂಗ್ರೆಸ್
ಇದೇ ವೇಳೆ, ಸದ್ಯ ನಡೆಯುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಸಮರವಲ್ಲ. ಎರಡು ಅಭಿಪ್ರಾಯಗಳ ನಡುವಿನ ಯುದ್ಧ. ದೇಶವನ್ನು ಕೇಂದ್ರೀಕೃತವಾಗಿ ನಡೆಸಬೇಕು, ಒಬ್ಬನೇ ವ್ಯಕ್ತಿ ಎಲ್ಲ ಜ್ಞಾನವನ್ನೂ ಹೊಂದಬೇಕು ಎಂದು ಒಬ್ಬ ವ್ಯಕ್ತಿ ಭಾವಿಸಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ, ಅಧಿಕಾರ ವಿಕೇಂದ್ರೀಕರಣವಾಗಬೇಕು. ಜನರ ದನಿಯನ್ನೂ ಆಲಿಸಬೇಕು ಎಂಬುದು ನಮ್ಮ ಆಲೋಚನೆಯಾಗಿದೆ. ಒಬ್ಬ ವ್ಯಕ್ತಿ ಐಐಟಿ ಪದವಿ ಹೊಂದಿದಾಕ್ಷಣ, ಒಬ್ಬ ರೈತನಿಗಿಂತ ಹೆಚ್ಚಿನ ಜ್ಞಾನವಂತ ಎಂದು ಹೇಳಲಾಗದು ಎಂದರು.