ಲೈಂಗಿಕ ಕಿರುಕುಳ ಕೇಸಲ್ಲಿ ಚಾಂಡಿ, ವೇಣುಗೋಪಾಲ್ಗೆ ತನಿಖೆ ಬಿಸಿ!
* ಸೋಲಾರ್ ಹಗರಣ ಪ್ರಕರಣ
* ಲೈಂಗಿಕ ಕಿರುಕುಳ ಕೇಸಲ್ಲಿ ಚಾಂಡಿ, ವೇಣುಗೋಪಾಲ್ಗೆ ತನಿಖೆ ಬಿಸಿ
* ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಸೌರಶಕ್ತಿ ಹಗರಣ
ನವದೆಹಲಿ(ಆ.18): ಕೇರಳದ ಬಹುಕೋಟಿ ಸೌರಶಕ್ತಿ (ಸೋಲಾರ್) ಹಗರಣದ ಪ್ರಮುಖ ಆರೋಪಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಸಂಬಂಧದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಇನ್ನಿತರ ರಾಜಕೀಯ ನಾಯಕರಿಗೆ ಸಂಕಷ್ಟಎದುರಾಗಿದೆ.
ಕೇರಳದಲ್ಲಿ ಊಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಸೌರಶಕ್ತಿ ಹಗರಣದ ಪ್ರಮುಖ ರೂವಾರಿ ಮಹಿಳೆಯು 2012ರಲ್ಲಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿ ಆಗಿನ ಮುಖ್ಯಮಂತ್ರಿ ಚಾಂಡಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದರು.
ಈ ಸಂಬಂಧ ಪಿಣರಾಯಿ ವಿಜಯನ್ ಸರ್ಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೊಂಡಿದೆ.