ಬರಕ್ಕಿಂತ, ಭಾರೀ ಮಳೆಗೆ ಹೆಚ್ಚಿನ ರೈತರ ಆತ್ಮಹತ್ಯೆ| ಅತಿವೃಷ್ಟಿಸಮಯದಲ್ಲೇ ಹೆಚ್ಚಿನ ರೈತರ ಆತ್ಮಹತ್ಯೆ ದಾಖಲು| ಮಳೆ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚಿನ ಸಾವು| ಕೊಲಂಬಿಯಾ ವಿವಿ ಸೇರಿ ಹಲವು ಸಂಸ್ಥೆಗಳಿಂದ ಸಮೀಕ್ಷೆ

ನವದೆಹಲಿ(ಸೆ.12) : ಬರಗಾಲದಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ ಎನ್ನುವ ನಂಬಿಕೆಯನ್ನು ಸಂಶೋಧನೆಯೊಂದು ಸುಳ್ಳು ಮಾಡಿದೆ. ಬರಗಾಲಕ್ಕಿಂತ, ಹೆಚ್ಚಿನ ಮಳೆಯಾದ ವೇಳೆಯಲ್ಲಿಯೇ ಅತೀ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಕೊಲಂಬಿಯಾ ವಿವಿ ಸಹಿತ ಹಲವು ಸಂಸ್ಥೆಗಳು ನಡೆಸಿದ ಜಂಟಿ ಸಂಶೋಧನೆಯಿಂದ ಗೊತ್ತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2001-2013ರ ಅವಧಿಯಲ್ಲಿ ದೇಶದ ಗ್ರಾಮೀಣ ಭಾಗಗಳಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 9,456 ಪ್ರಕರಣಗಳನ್ನು ಸಂಶೋಧಕರ ತಂಡ ಅಧ್ಯಯನ ನಡೆಸಿತ್ತು. ಈ ವೇಳೆ ಸಾಮಾನ್ಯ ಬಿತ್ತನೆ ಸಮಯಕ್ಕಿಂತ ಹೆಚ್ಚಿನ ಮಳೆ ಬಂದ ವರ್ಷಗಳಲ್ಲಿ ರೈತರ ಆತ್ಮಹತ್ಯೆಯಲ್ಲಿ ಶೇ.18.7ರಷ್ಟುಹೆಚ್ಚಾಗಿದ್ದರೆ, ಅತ್ಯಂತ ಕಡಿಮೆ ಮಳೆ ಬಿದ್ದ ವರ್ಷಗಳಲ್ಲಿ ಸಾವಿನ ಪ್ರಮಾಣದಲ್ಲಿ ಶೇ.3.6ರಷ್ಟುಮಾತ್ರವೇ ಹೆಚ್ಚಳವಾಗಿದೆ.

5000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ, ಪ್ರತೀ ಚದರ ಮೈಲಿಗೆ 1000ಕ್ಕಿಂತ ಕಡಿಮೆ ಜನಸಾಂದ್ರತೆ ಇರುವ ಹಾಗೂ ಶೇ.25ಕ್ಕಿಂತ ಹೆಚ್ಚು ಪುರುಷರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಗ್ರಾಮವನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು.

ಕಾರಣ ಏನು?:

ಭಾರೀ ಮಳೆ ಸುರಿದರೆ ಅದನ್ನು ನಿರ್ವಹಣೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಬೆಳೆಗಳು ನಾಶವಾಗುತ್ತವೆ. ಬರ ಉಂಟಾದರೆ ಸೂಕ್ತ ನೀರಾವರಿ ವ್ಯವಸ್ಥೆಯಿಂದ ತಡೆಯಬಹುದು. ಹಾಗಾಗಿ ಮಳೆಗಾಲದಲ್ಲಿ ಹೆಚ್ಚಿನ ರೈತರು ಪ್ರಾಣ ಬಿಡುತ್ತಿದ್ದಾರೆ ಎಂದು ಸಮೀಕ್ಷೆ ಷರಾ ಬರೆದಿದೆ.

ಹೇಗೆ ಸಾವು?:

ಆತ್ಮಹತ್ಯೆ ಮಾಡಿಕೊಂಡಿರುವವರ ಪೈಕಿ ಶೇ.40ರಷ್ಟುರೈತರು ವಿಷ ಕುಡಿದು, ಶೇ.37ರಷ್ಟುಮಂದಿ ನೇಣು ಹಾಕಿಕೊಂಡು, ಶೇ.10ರಷ್ಟುರೈತರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.