ಅವಿಶ್ವಾಸ ಸೋತ ವಿಪಕ್ಷಕ್ಕೆ ಮತ್ತೊಂದು ಶಾಕ್, ಕಾಂಗ್ರೆಸ್ ನಾಯಕ ಅಧೀರ್ರಂಜನ್ ಅಮಾನತು!
ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷ ಹಿನ್ನಡೆ ಅನುಭವಿಸಿದೆ. ಇದರ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿಯನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ
ನವದೆಹಲಿ(ಆ.10) ಕೇಂದ್ರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿ ಸೋತ ವಿಪಕ್ಷಗಳಿಗೆ ಮತ್ತೊಂದು ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಪಕ್ಷದ ಅಧೀರ್ ರಂಜನ್ ಚೌಧರಿಯನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಸದನದಲ್ಲಿ ಪದೇ ಪದೆ ಶಿಸ್ತು ಮೀರುತ್ತಿದ್ದಾರೆ. ದುರ್ವತನೆ ತೋರುತ್ತಾ, ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದನ್ನೇ ಹವ್ಯಾಸ ಮಾಡಿಕೊಂಡಿರುವ ಕಾರಣ ಅಧೀರ್ ರಂಜನ್ ಚೌಧರಿಯನ್ನು ಅಮಾನತು ಮಾಡಲಾಗುತ್ತಿದೆ ಎಂದು ಸಂಸದೀಯ ವ್ಯವಾಹರ ಸಚಿವ ಪ್ರಹ್ಲಾದ್ ಜೋಶಿ ಪ್ರಸ್ತಾವನೆ ಮಂಡಿಸಿದರು.
ಶಾಸನ ಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಪದೇ ಪದೇ ದುಂಡಾವರ್ತನೆ ಮಾಡಿದ್ದಾರೆ. ಇತ್ತೀಚೆಗೆ ವಿಪಕ್ಷ ನಾಯಕರು ಇದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನ ಹಕ್ಕು ಭಾದ್ಯತಾ ಸಮಿತಿಗೆ ವಹಿಸಬೇಕು. ಸಮಿತಿಯ ವರದಿ ಬರುವವರೆಗೂ ಅಧೀರ್ ರಂಜನ್ ಚೌಧರಿಯನ್ನು ಅಮಾನತ್ತಿನಲ್ಲಿಡಬೇಕು ಎಂದು ಪ್ರಹ್ಲಾದ್ ಜೋಶಿ ಪ್ರಸ್ತಾವನೆ ಮಂಡಿಸಿದರು.
ಬೆಂಗಳೂರಿನಲ್ಲಿ UPA ಅಂತ್ಯಕ್ರಿಯೆ ಮಾಡಿ ಹೊಸ ಪೈಂಟ್ ಬಳಿದ ಕಾಂಗ್ರೆಸ್, ವಿಪಕ್ಷ ಒಕ್ಕೂಟ ತಿವಿದ ಮೋದಿ!
ಲೋಕಸಭಾ ಸ್ಪೀಕರ್ ಒಂ ಬಿರ್ಲಾ ಈ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಲೋಕಸಭೆಯಲ್ಲಿ ಎನ್ಡಿಎ ಒಕ್ಕೂಟಕ್ಕೆ ಹೆಚ್ಚಿನ ಸಂಖ್ಯಾ ಬಲದ ಕಾರಣ ಯಾವುದೇ ಅಡೆತಡೆ ಇಲ್ಲದೆ ಈ ಪ್ರಸ್ತಾವನೆ ಅಂಗೀಕಾರಗೊಂಡಿತು. ಇದೀಗ ಅದೀರ್ ರಂಜನ್ ಚೌಧರಿ ಅಮಾನತುಗೊಂಡಿದ್ದಾರೆ.
ಅಧೀರ್ ರಂಜನ್ ಚೌಧರಿ ತಮ್ಮ ಭಾಷಣದ ವೇಳೆ ಶಿಸ್ತು ಮೀರಿದ್ದರು. ಮಣಿಪುರ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ ಮಹಾಭಾರತದ ಧೃತರಾಷ್ಟ್ರ ಕುರುಡನಾಗಿದ್ದ. ಹೀಗಾಗಿ ಕುರುಡ ರಾಜನ ಮುಂದೆ ದ್ರೌಪದಿಯ ವಸ್ತ್ರಾಪಹರಣ ನಡೆಯಿತು. ಮಣಿಪುರ ವಿಚಾರದಲ್ಲಿ ರಾಜ ಕುರುಡನಾಗಿದ್ದಾರೆ. ಹೀಗಾಗಿ ಮಹಿಳೆಯರ ಮೇಲೆ ಅಮಾನುಷ ಕೃತ್ಯ ನಡೆದರೂ, ಮಣಿಪುರ ಹೊತ್ತಿ ಉರಿದರೂ ರಾಜ ಮೌನವಾಗಿದ್ದಾರೆ. ಹಸ್ತಿನಾಪುರಕ್ಕೂ ಮಣಿಪುರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದರು.
ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರ ಮಾತು ಆರಂಭಿಸುತ್ತಿದ್ದಂತೆ ಸದನದಿಂದ ಹೊರನಡೆದ ವಿಪಕ್ಷ!
ಇನ್ನು ಮಣಿಪುರ ವಿಚಾರದಲ್ಲಿ ಪ್ರಧಾನಿ ಮೋದಿ ಮೌನವಹಿಸಿರುವ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ ಅಧೀರ್ ರಂಜನ್ ಚೌಧರಿ, ನೀರವ್ ಮೋದಿ ಭಾರತದಿಂದ ಪಲಾಯನ ಮಾಡಿದ್ದಾರೆ. ಸರ್ಕಾರಕ್ಕೆ ವಂಚಕ ನೀರವ್ ಮೋದಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ವಿದೇಶದಿಂದ ಕರೆತರಲು ಸಾಧ್ಯವಾಗಲಿಲ್ಲ. ಇದೀಗ ಪ್ರಧಾನಿ ಮೋದಿ ಮಣಿಪುರ ವಿಚಾರದಲ್ಲೂ ಪಲಾಯನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಗೂ ನೀರವ್ ಮೋದಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಶಿಸ್ತು ಮೀರಿದ ಈ ಮಾತುಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇಷ್ಟೇ ಅಲ್ಲ ಕ್ಷಮೆಗೆ ಆಗ್ರಹಿಸಿತು. ಬಳಿಕ ಲೋಕಸಭಾ ಸ್ಪೀಕರ್ ಅಧೀರ್ ರಂಜನ್ ಚೌಧರಿ ಮಾತುಗಳನ್ನು ಕಡತದಿಂದ ತೆಗೆದುಹಾಕಿದರು.