No flats to Rohingyas: ಮಯನ್ಮಾರ್‌ ನಿರಾಶ್ರಿತ ರೊಹಿಂಗ್ಯಾ ಮುಸ್ಲಿಮರಿಗೆ ದೆಹಲಿಯಲ್ಲಿ ಆಶ್ರಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂಬ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿಕೆ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ. ರೊಹಿಂಗ್ಯಾಗಳಿಗೆ ಆಶ್ರಯ ನೀಡುತ್ತಿಲ್ಲ, ಅವರನ್ನು ಮಯನ್ಮಾರಿಗೆ ವಾಪಸ್‌ ಕಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ನವದೆಹಲಿ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಕೆಲ ಗಂಟೆಗಳ ಹಿಂದಷ್ಟೇ ರೊಹಿಂಗ್ಯಾಗಳಿಗೆ ದೆಹಲಿಯಲ್ಲಿ ಫ್ಲಾಟ್‌ ನೀಡಲು ಸರ್ಕಾರ ನಿರ್ಧರಿಸಿದೆ, ಇದೊಂದು ಐತಿಹಾಸಿಕ ನಿರ್ಣಯ ಎಂದು ಟ್ವೀಟ್‌ ಮಾಡಿದ್ದರು. ಇದೀಗ ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು ರೊಹಿಂಗ್ಯಾಗಳನ್ನು ಕಾನೂನಾತ್ಮಕವಾಗಿ ಅವರ ದೇಶಕ್ಕೆ ವಾಪಸ್‌ ಕಳಿಸಲಾಗುವುದು. ಅಲ್ಲಿಯವರೆಗೂ ಅವರನ್ನು ಡಿಟೆನ್ಷನ್‌ ಸೆಂಟರ್‌ನಲ್ಲಿ ಇಡಲಾಗುವುದು ಎಂದು ಹೇಳಿದೆ. ಈ ಮೂಲಕ ಹರ್ದೀಪ್‌ ಸಿಂಗ್‌ ಪುರಿ ಟ್ವೀಟ್‌ಗೆ ತದ್ವಿರುದ್ಧವಾದ ಪ್ರತಿಕ್ರಿಯೆ ಕೇಂದ್ರದಿಂದ ಬಂದಂತಾಗಿದೆ. ಭಾರತ ನಿರಾಶ್ರಿತರಿಗೆ ಯಾವಾಗಲೂ ಆಶ್ರಯವನ್ನು ಕೊಟ್ಟಿದೆ. ಈಗ ರೊಹಿಂಗ್ಯಾಗಳಿಗೆ ಆಶ್ರಯ ಕೊಡಲು ನಿರ್ಧರಿಸಲಾಗಿದೆ. ಈ ಮೂಲಕ ಸಿಎಎ ಹೆಸರಲ್ಲಿ ಸುಳ್ಳು ಹೇಳಿಕೊಂಡು ಬಂದವರ ಬಾಯಿಗೆ ಬೀಗ ಹಾಕಿದಂತಾಗಿದೆ ಎಂದು ಪುರಿ ಟ್ವೀಟ್‌ ಮಾಡಿದ್ದರು. ಆದರೆ ಅವರಿಗೆ ಮುಜುಗರವಾಗುವಂತೆ ಗೃಹ ಇಲಾಖೆ ಸ್ಪಷ್ಟೀಕರಣ ಬಂದಿದೆ.

Add Asianetnews Kannada as a Preferred SourcegooglePreferred

ಸಚಿವ ಪುರಿ ಹೇಳಿದ್ದೇನು?:

ಕೇಂದ್ರ ಸರ್ಕಾರ ಮಯನ್ಮಾರ್‌ ದೇಶದ ರೊಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಆಶ್ರಯ ಕೊಡುವ ನಿರ್ಧಾರ ಮಾಡಿದೆ. ದೆಹಲಿಯ ಬಕ್ಕರ್ವಾಲಾ ಪ್ರದೇಶದಲ್ಲಿ ಸೆಕ್ಯುರಿಟಿ ಸಮೇತ ಫ್ಲಾಟ್‌ಗಳನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದ್ದು, ಇದೊಂದು ಐತಿಹಾಸಿಕ ನಿರ್ಣಯ ಎಂದು ಕರೆದಿದ್ದಾರೆ. "ಭಾರತ ಯಾವಾಗಲೂ ನಿರಾಶ್ರಿತರಿಗೆ ಆಶ್ರಯ ಕೊಟ್ಟಿದೆ. ಬೇರೆ ದೇಶಗಳಿಂದ ಆಶ್ರಯ ಅರಸಿ ಬಂದವರನ್ನು ಸ್ವಾಗತಿಸಿದೆ. ರೊಹಿಂಗ್ಯಾ ನಿರಾಶ್ರಿತರಿಗೆ ಫ್ಲಾಟ್‌ ಕೊಡಲು ನಿರ್ಧರಿಸಿದ್ದೇವೆ. ಇದೊಂದು ಐತಿಹಾಸಿಕ ನಿರ್ಣಯ," ಎಂದು ಸಚಿವ ಪುರಿ ಹೇಳಿದ್ದಾರೆ.

ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ ಎಂದು ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ಧಾರೆ. ಉದ್ದೇಶಪೂರ್ವಕವಾಗಿ ಸಿಎಎ ಮತ್ತು ನಿರಾಶ್ರಿತರ ಯೋಜನೆಯನ್ನು ಲಿಂಕ್‌ ಮಾಡಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ, ಎಂದವರು ಹೇಳಿದ್ದಾರೆ. 
ರೊಹಿಂಗ್ಯಾಗಳಿಗೆ ದೇಶದ ರಾಜಧಾನಿಯಲ್ಲಿ ಆಶ್ರಯ ವ್ಯವಸ್ಥೆ ಕಲ್ಪಿಸುವ ಕುರಿತಾಗಿ ದೆಹಲಿ ಮುಖ್ಯ ಕಾರ್ಯದರ್ಶಿ, ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಸಚಿವಾಲಯ ಸಭೆ ನಡೆಸಿತ್ತು. ಸಭೆಯಲ್ಲಿ ಈ ತೀರ್ಮಾನ ಹೊರಬಂದಿದೆ. ಈ ಮೂಲಕ ದೇಶದ ವಿವಿಧೆಡೆ ಚದುರಿ ಹೋಗಿರುವ ರೊಹಿಂಗ್ಯಾಗಳಿಗೆ ದೆಹಲಿಯಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು, ಎಂದು ಪುರಿ ಹೇಳಿದ್ದರು. 

ರೊಹಿಂಗ್ಯಾಗಳ ಬಗ್ಗೆ ಕೇಂದ್ರದ ನಿಲುವೇನು?:

ಮಯನ್ಮಾರಿನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿತ್ತು. 

ರೋಹಿಂಗ್ಯಾ ನಿರಾಶ್ರಿತರು ಪಾಕಿಸ್ತಾನದ ಐಸಿಎಸ್ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ. ಅವರು ಇಲ್ಲಿರುವುದು ಕೂಡಾ ಅಕ್ರಮ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಇದನ್ನೂ ಓದಿ: ರೊಹಿಂಗ್ಯಾ ವಿಚಾರದಲ್ಲಿ ಕೇಂದ್ರ ಯೂಟರ್ನ್‌; ನಿರಾಶ್ರಿತರಿಗೆ ದೆಹಲಿಯಲ್ಲಿ ಪ್ಲಾಟ್‌ ನೀಡಲು ನಿರ್ಧಾರ

ಸರ್ಕಾರ ಈಗಾಗಲೇ ಗೌಪ್ಯ ವರದಿಯನ್ನು ತಯಾರಿಸಿಕೊಂಡಿದ್ದು, ಕೋರ್ಟ್ ಬಯಸಿದರೆ ಅದನ್ನು ಅ.03, 2018ರಂದು ಸಲ್ಲಿಸುತ್ತದೆ ಎಂದು ಸರ್ಕಾರ ತಿಳಿಸಿತ್ತು. ಫಾಲಿ ನಾರಿಮನ್ ಹಾಗೂ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.

ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ!

ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಅವಕಾಶ ಕೊಡದಿರಲು ಈ ಹಿಂದೆ ಕೇಂದ್ರ ನೀಡಿದ್ದ ಕಾರಣಗಳು:

  • ಭಾರತದಲ್ಲಿ ಉಳಿದುಕೊಂಡಿರುವ ಸುಮಾರು 40 ಸಾವಿರ ರೋಹಿಂಗ್ಯಾಗಳು ದೇಶದ ಭದ್ರತೆಗೆ ಕಂಟಕವಾಗಲಿದ್ದಾರೆ.
  • ರೋಹಿಂಗ್ಯಾಗಳು ಐಸಿಎಸ್ ಹಾಗೂ ಇತರೆ ಸಂಘಟನೆಗಳೊಂದಿಗೆ ಸಂಬಂಧವನ್ನು ಹೊಂದಿದ್ದು ಭಾರತದಲ್ಲಿ ಕೋಮುವಾದವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ.
  • ಇವರು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ಹವಾಲಾ ಮೂಲಕ ಹಣ ಪಡೆಯುತ್ತಾರೆ.