ಖಾಸಗಿ ಸಂಸ್ಥೆಗಳಿಗೆ ಚುನಾವಣೆ ಕೆಲಸ ಇಲ್ಲ, ಕರ್ನಾಟಕದ ಚಿಲುಮೆ ಪ್ರಕರಣದ ಹಿನ್ನೆಲೆಯಲ್ಲಿ ಆಯೋಗ ಸ್ಪಷ್ಟನೆ
ಖಾಸಗಿ ಸಂಸ್ಥೆಗಳಿಗೆ ಇನ್ನು ಚುನಾವಣೆ ಕೆಲಸ ಇಲ್ಲ: ಆಯೋಗ- ಕರ್ನಾಟಕದ ಚಿಲುಮೆ ಪ್ರಕರಣದ ಹಿನ್ನೆಲೆಯಲ್ಲಿ ಚು.ಆಯೋಗ ಸ್ಪಷ್ಟನೆ

ನವದೆಹಲಿ (ಅ.10): ಚುನಾವಣೆಗೆ ಸಂಬಂಧಿಸಿದ ಯಾವುದೆ ಕೆಲಸಗಳನ್ನು ಖಾಸಗಿ ಸಂಸ್ಥೆಗಳಿಗೆ ಹೊರ ಗುತ್ತಿಗೆ ನೀಡುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಚಿಲುಮೆ ಎಂಬ ಖಾಸಗಿ ಸಂಸ್ಥೆಯೊಂದು ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಪಡೆದ ವಿಷಯ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಮತದಾರರ ಪಟ್ಟಿಯನ್ನು ಬೆಂಗಳೂರಿನ ಕೆಲವು ಕ್ಷೇತ್ರಗಳಲ್ಲಿ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ, ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಣೆ ವೇಳೆ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ರಾಜೀವ್ ಕುಮಾರ್, ‘ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕೇವಲ ಸರ್ಕಾರಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳು ಮಾತ್ರವೇ ನಿರ್ವಹಿಸಲಿದ್ದಾರೆ. ಮತದಾರರಿಗೆ ಅರಿವು ಮೂಡಿಸುವ ನಾಗರಿಕ ಸಮಾಜ ಸಂಸ್ಥೆಗಳು ಕೂಡಾ ಇಂಥ ಕೆಲಸ ನಿರ್ವಹಿಸುವಂತಿಲ್ಲ’ ಎಂದು ಹೇಳಿದರು.
3 ರಾಜ್ಯಗಳಲ್ಲಿ ಟಿಕೆಟ್ ಘೋಷಣೆ ಮಾಡಿದ ಬಿಜೆಪಿ: ರಾಜಸ್ಥಾನದಲ್ಲಿ 7 ಮಂದಿ ಸಂಸದರು ಕಣಕ್ಕೆ
2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ನ.7ರಿಂದ 30ರವರೆಗೆ ಚುನಾವಣೆ ನಡೆಯಲಿದ್ದು, ಡಿ.3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇಂಡಿಯಾ ಮೈತ್ರಿಕೂಟ ರಚನೆಯಾದ ಬಳಿಕ ಅತಿದೊಡ್ಡ ಚುನಾವಣೆ ಮತ್ತು ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರಲು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಹಣಾಹಣಿಗೆ ಈ ಚುನಾವಣೆ ವೇದಿಕೆಯಾಗಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿದೆ.
2009ರಲ್ಲಿ ಜಾತಿ ಕೇಳಲ್ಲ, 2023ರಲ್ಲಿ ಎಲ್ಲರ ಜಾತಿ ಗೊತ್ತಾಗಬೇಕು
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಮಿಜೋರಂ ರಾಜ್ಯಗಳ ಚುನಾವಣೆಯ ದಿನಾಂಕ ಪ್ರಕಟಿಸಿದರು. 5 ರಾಜ್ಯಗಳಲ್ಲಿ ಒಟ್ಟು 16 ಕೋಟಿ ಮತದಾರರು ಮತ ಚಲಾವಣೆಯ ಹಕ್ಕು ಹೊಂದಿರಲಿದ್ದಾರೆ.
ಹಾಲಿ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಭಾರತ ರಾಷ್ಟ್ರೀಯ ಸಮಿತಿ ಮತ್ತು ಮಿಜೋರಂನಲ್ಲಿ ಎನ್ಡಿಎ ಮಿತ್ರಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ.