* ಸ್ಥಳೀಯವಾಗಿ ಅಲ್ಲಲ್ಲಿ ಸೋಂಕಿನ ಪ್ರಮಾಣ ಹೆಚ್ಚಳ* ದೇಶಾದ್ಯಂತ ಏಕರೂಪ ಸೋಂಕು ಪ್ರಮಾಣ ಏರಿಲ್ಲ* ದೇಶದಲ್ಲಿ 4ನೇ ಅಲೆ ಬಂದಿಲ್ಲ: ಐಸಿಎಂಆರ್‌

ಪುಣೆ(ಮೇ.02): ದೇಶದಲ್ಲಿ ಕೋವಿಡ್‌ 4ನೇ ಅಲೆ ಭೀತಿ ಸೃಷ್ಟಿಯಾಗಿರುವಾಗಲೇ, ಸದ್ಯ ದೇಶದಲ್ಲಿ ಅಂಥ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಕೆಲವು ರಾಜ್ಯಗಳ, ಕೆಲವು ಜಿಲ್ಲೆಗಳಲ್ಲಿ ಮಾತ್ರ ಸ್ಥಳೀಯ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

‘ದೇಶದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆಯೇ ಹೊರತಾಗಿ ಕೋವಿಡ್‌ನ ಹೊಸ ರೂಪಾಂತರಿಯಿಂದ ಹೊಸ ಅಲೆ ಸೃಷ್ಟಿಯಾಗಿಲ್ಲ. ಕೆಲವು ವಲಯಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡುಬಂದಿದ್ದು, ಟೆಸ್ಟಿಂಗ್‌ ಕಡಿಮೆ ಮಾಡಿದ್ದು ಇದಕ್ಕೆ ಒಂದು ಕಾರಣವಾಗಿರಬಹುದು. ಉದಾಹರಣೆಗೆ ಕೋವಿಡ್‌ ಟೆಸ್ಟಿಂಗ್‌ ಪ್ರಮಾಣದಲ್ಲಿ ಏರಿಕೆಯಾದಂತೆ ದೆಹಲಿಯಲ್ಲಿ ಪಾಸಿಟಿವಿಟಿ ದರವು ಶೇ.7 ರಿಂದ ಶೇ.5ಕ್ಕೆ ಕುಸಿದಿದೆ. ಹೀಗಾಗಿ ಜಿಲ್ಲೆ ಅಥವಾ ರಾಜ್ಯಗಳಲ್ಲಿ ನಿರ್ದಿಷ್ಟಮಟ್ಟದಲ್ಲಿ ಕೋವಿಡ್‌ ಟೆಸ್ಟಿಂಗ್‌ ನಡೆಸಿದಾಗಲೇ ಪಾಸಿಟಿವಿಟಿ ಪ್ರಮಾಣವನ್ನು ಲೆಕ್ಕಾಚಾರ ಮಾಡಬಹುದು’ ಎಂದು ಐಸಿಎಂಆರ್‌ ತಿಳಿಸಿದೆ.

ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ದೇಶಾದ್ಯಂತ ಏಕರೂಪವಾಗಿ ಸೋಂಕಿನ ಪ್ರೊಮಾಣದಲ್ಲಿ ಏರಿಕೆ ಕಂಡುಬಂದಿಲ್ಲ. ಹೀಗಾಗಿ ನಾಲ್ಕನೇ ಅಲೆಯಿನ್ನೂ ಆರಂಭವಾಗಿಲ್ಲ ಎಂದು ಐಸಿಎಂಆರ್‌ ಸ್ಪಷ್ಟಪಡಿಸಿದೆ.

ಮಾಲ್‌, ಥಿಯೇಟರ್‌ ಪ್ರವೇಶಕ್ಕೆ ಡಬಲ್‌ ಡೋಸ್‌ ಕಡ್ಡಾಯ

ಕೊರೋನಾ 4ನೇ ಅಲೆ ಭೀತಿ ಹಾಗೂ ಸೋಂಕಿನ ಪ್ರಮಾಣ ಗಣನೀಯ ಏರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿನಿಮಾ ಹಾಲ್‌, ಮಾಲ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ ಪ್ರವೇಶಕ್ಕೆ ಡಬಲ್‌ ಡೋಸ್‌ (1ನೇ ಮತ್ತು 2ನೇ ಸುತ್ತಿನ) ವ್ಯಾಕ್ಸಿನೇಷನ್‌ ಕಡ್ಡಾಯಕ್ಕೆ ಬಿಬಿಎಂಪಿ ಸೂಚನೆ ನೀಡಿದೆ.

ಶುಕ್ರವಾರ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್‌ಚಂದ್ರ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನರ್ಸಿಂಗ್‌ ಹೋಮ್ಸ್‌ ಅಸೋಸಿಯೇಷನ್‌, ಹೋಟೆಲ್‌, ಮಾಲ್‌, ಚಿತ್ರಮಂದಿರ, ರೆಸ್ಟೋರೆಂಟ್‌ ಮಾಲೀಕರೊಂದಿಗೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.

ಸಿನಿಮಾ ಹಾಲ್‌, ಮಾಲ್‌, ರೆಸ್ಟೋರೆಂಟ್‌, ಹೋಟೆಲ್‌ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಗೆ ಮಾಸ್‌್ಕ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಆಗುವಂತೆ ನಿಗಾ ವಹಿಸಬೇಕು. ಪ್ರವೇಶ ದ್ವಾರಗಳಲ್ಲಿ ತಾಪಮಾನ ತಪಾಸಣೆ ನಡೆಸಬೇಕು. ಸಿಬ್ಬಂದಿ ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಆಗಾಗ್ಗೆ ಸಿಬ್ಬಂದಿಯ ಆರೋಗ್ಯ ಪರೀಕ್ಷೆಗೆ ಒಳಪಡಿಸುವುದು. ಕೊರೋನಾ ಹೆಚ್ಚಿನ ಪ್ರಕರಣಗಳಿರುವ ಪ್ರದೇಶಗಳಿಂದ ಬರುವವರ, ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳಿಗೆ ಆಗಮಿಸುವ ಹೊರ ರೋಗಿಗಳಿಗೆ ಐಎಲ್‌ಐ ಹಾಗೂ ಸಾರಿ ಪರೀಕ್ಷೆ ಹಾಗೂ ಒಳರೋಗಿಗಳಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಬೇಕು. ಐಸಿಎಂಆರ್‌ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿ ಪರೀಕ್ಷಾ ವಿವರಗಳನ್ನು ದಾಖಲಿಸಬೇಕು. ಸಿಟಿ ವ್ಯಾಲ್ಯು 30 ಕ್ಕಿಂತ ಕಡಿಮೆ ಇರುವ ಪಾಸಿಟಿವ್‌ ಪ್ರಕರಣಗಳನ್ನು ಜೀನೋಮಿಕ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು. ಕೇಂದ್ರ ಸರ್ಕಾರ ಈ ಹಿಂದೆ ನೀಡಿದ ಆದೇಶದಂತೆ ಶೇ.10 ರಷ್ಟುಹಾಸಿಗೆಯನ್ನು ಖಾಸಗಿ ಆಸ್ಪತ್ರೆಗಳು ಮೀಸಲಿಡಬೇಕು. ಹಾಸಿಗೆ ಲಭ್ಯದ ಬಗ್ಗೆ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಕೊರೋನಾ ನಿಯಂತ್ರಣ ಕಾರ್ಯಕ್ಕೆ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಸಹಕಾರ ನೀಡಬೇಕು. ಬೂಸ್ಟರ್‌ ಡೋಸ್‌ ಹಾಗೂ ಮಕ್ಕಳ ವ್ಯಾಕ್ಸಿನೇಷನ್‌ ಬಗ್ಗೆ ಜಾಗೃತಿ ಮೂಡಿಸಬೇಕು. ಶಿಬಿರಗಳನ್ನು ಆಯೋಜನೆ ಮಾಡುವ ಮೊದಲು ಭಾಗವಹಿಸುವ ಎಲ್ಲರೂ ಶೇ.100 ರಷ್ಟುಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.