ಆರೆಸ್ಸೆಸ್ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ: ನಿತಿನ್ ಗಡ್ಕರಿ
ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೇಶದಲ್ಲಿ ಆರೆಸ್ಸೆಸ್ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ನವದೆಹಲಿ (ಮಾ.31): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಆರೆಸ್ಸೆಸ್ನ ನಿರೀಕ್ಷೆಗಳು ಏನೇ ಇರಲಿ ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವಾರಿ ವಿಚಾರಗಳ ಬಗ್ಗೆ ಮಾತನಾಡಿರುವ ನಿತಿನ್ ಗಡ್ಕರಿ ಅವರಿಗೆ ಆರೆಸ್ಸೆಸ್ ಕುರಿತಾಗಿಯೂ ಪ್ರಶ್ನೆಗಳು ಎದುರಾದವು. ನಾಗ್ಪರ ಆರೆಸ್ಸೆಸ್ನ ಕೇಂದ್ರ ಸ್ಥಾನ. ರಾಮಜನ್ಮಭೂಮಿ, ಜಮ್ಮು ಕಾಶ್ಮೀರ ವಿಶೇಷಾಧಿಕಾರ ರದ್ದು ಸೇರಿದಂತೆ ಆರೆಸ್ಸೆಸ್ನ ಪ್ರಮುಖ ನಿರೀಕ್ಷೆಗಳನ್ನು ಸರ್ಕಾರ ಪೂರ್ತಿ ಮಾಡಿದೆ. ಮುಂದಿನ ವರ್ಷ ಅರೆಸ್ಸೆಸ್ ತನ್ನ ಶತಮಾನೋತ್ಸವವನ್ನೂ ಆಚರಣೆ ಮಾಡಿಕೊಳ್ಳಲಿದೆ. ಹೀಗಿರುವಾಗಿ ಆರೆಸ್ಸೆಸ್ ಆಗಲಿ ನಿಮ್ಮದಾಗಲಿ ಮುಂದಿನ ಅಜೆಂಡಾಗಳೇನು ಎಂದು ಪ್ರಶ್ನೆ ಕೇಳಲಾಗಿದೆ.
ಇದಕ್ಕೆ ಉತ್ತರ ನೀಡಿರುವ ನಿತಿನ್ ಗಡ್ಕರಿ, ನನ್ನ ವೈಯಕ್ತಿಕ ಅಜೆಂಡಾ ನನ್ನ ಕ್ಷೇತ್ರ ನಾಗ್ಪುರ ಮಾತ್ರ. ಇಲ್ಲಿಂದಲೇ ನಾನು ಸಂಸತ್ತಿಗೆ ಆಯ್ಕೆಯಾಗಿದ್ದೇನೆ. ಆರೆಸ್ಸೆಸ್ನ ಅಜೆಂಡಾಗಳೇನು ಅನ್ನೋದನ್ನು ಆರೆಸ್ಸೆಸ್ ತಿಳಿಸುತ್ತದೆ. ಆದರೆ, ಒಬ್ಬ ಸ್ವಯಂಸೇವಕನಾಗಿ ಅವರ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದು ಉತ್ತರ ನೀಡಿದ್ದಾರೆ.
ಭಾರತಕ್ಕೆ ವಿಶ್ವದ 2ನೇ ಅತಿದೊಡ್ಡ ರಸ್ತೆ ಜಾಲದ ಹೆಗ್ಗಳಿಕೆ, 9 ವರ್ಷದಲ್ಲಿ ಶೇ. 59ರಷ್ಟು ಏರಿಕೆ!
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎನ್ನುವ ವಿಚಾರದಲ್ಲಿಯೂ ಪ್ರತಿಕ್ರಿಯೆ ನೀಡಿರುವ ಅವರು, 'ಈ ವಿಚಾರದಲ್ಲಿ ಪ್ರತಿ ರಾಜ್ಯಗಳ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಈ ಬಾರಿ ನಾವು ದಕ್ಷಿಣದಲ್ಲಿಯೂ ಯಶಸ್ಸಿನ ಸವಿ ಪಡೆಯಲಿದ್ದೇವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ನಾವು ದಕ್ಷಿಣ ಮತ್ತು ಈಶಾನ್ಯದಲ್ಲಿ ಮಾಡಿದ ಕೆಲಸಗಳ ಫಲಿತಾಂಶವನ್ನು ನಾವು ಪಡೆಯಲಾರಂಭಿಸಿದ್ದೇವೆ.ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನಾವು ಶ್ರಮಿಸಿದ್ದೇವೆ. ಈ ರಾಜ್ಯಗಳಲ್ಲಿ ನಾವು ಬಹಳ ಕಡಿಮೆ ಅಸ್ತಿತ್ವವನ್ನು ಹೊಂದಿದ್ದೇವೆ. ಈ ಬಾರಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉತ್ತಮ ಸಾಧನೆ ಮಾಡುತ್ತೇವೆ. ಉತ್ತರ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಹಾಗಾಗಿ, ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಎನ್ಡಿಎ 400 ದಾಟಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.