ಶಾರ್ಟ್‌ಕಟ್ ಸಾವು, ಮಾರ್ಗ ಬದಲಿಸಿ ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ಅಪಘಾತಕ್ಕೆ ಬಲಿ, ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುತ್ತೆ ಎಂದು ಶಾರ್ಟ್‌ಕಟ್ ರಸ್ತೆಯಲ್ಲಿ ಸಾಗಿದ ಕುಟುಂಬ ದುರಂತ ಅಂತ್ಯಕಂಡಿದೆ.

ಮುಂಬೈ (ಏ.07) ಕಾರ್ಯಕ್ರಮ ಮುಗಿಸಿ 10 ಕಿಲೋಮೀಟರ್ ದೂರದಲ್ಲಿರುವ ಮನೆಗೆ ಮರಳಲಿ ಮುಖ್ಯ ರಸ್ತೆ ಬದಲು ಶಾರ್ಟ್‌ಕಟ್ ರಸ್ತೆ ಮೂಲಕ ಕಾರಿನಲ್ಲಿ ತೆರಳಿದ್ದಾರೆ. ಒಂದೇ ಕುಟುಂಬ 6 ಮಕ್ಕಳು ಸೇರಿ 9 ಮಂದಿ ಮಾರುತಿ ಎಕ್ಸ್ಎಲ್ 6 ಕಾರಿನ ಮೂಲಕ ಪ್ರಯಾಣ ಆರಂಭಿಸಿದ್ದರು. ಆದರೆ ಮುಖ್ಯರಸ್ತೆಯಲ್ಲೇ ತೆರಳಿದ್ದರೇ ಈ ಕುಟುಂಬ ಸುರಕ್ಷಿತವಾಗಿ ಮನೆಗೆ ತಲಪುತ್ತಿತ್ತು. ದುರಂತ ಅಂದರೆ ಶಾರ್ಟ್‌ಕಟ್ ರಸ್ತೆ ಮೂಲಕ ಸಾಗುವಾಗ ಕಾರು ಬಾವಿ ರೀತಿ ಇರುವ ಕೆರೆಗೆ ಬಿದ್ದಿದೆ. ಪರಿಣಾಮ 9 ಮಂದಿ ದುರಂತ ಅಂತ್ಯಕಂಡ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ.

ಒಂದೇ ಕುಟುಂಬದ 9 ಮಂದಿ ದಾರುಣ ಸಾವು

ದರ್ಗುಡೆ ಕುಟುಂಬದ ಸುನಿಲ್ ದರ್ಗುಡೆ (32) ಪತ್ನಿ ರೇಶ್ಮಾ(27) , ಪುತ್ರಿ ಗುಣವತಿ (11), ಸುನಿಲ್ ಸಂಬಂಧಿ ಅಶಾ (32) ಆಕೆಯ ಮಕ್ಕಳಾದ ಶ್ರೇಯಸ್ (11) ಶ್ರಾವಣಿ (11), ಶ್ರದ್ಧಾ (13) ಸೃಷ್ಟಿ (14) ಹಾಗೂ ಮತ್ತೊರ್ವ ಸಂಬಂಧಘಿ ಸಮದ್ಧಿ (7) ಅಪಘಾತದಲ್ಲಿ ಬಲಿಯಾಗಿದ್ದಾರೆ. ಸುನಿಲ್ ದರ್ಗುಡೆ ಕಾರು ಡ್ರೈವಿಂಗ್ ಮಾಡುತ್ತಿದ್ದರು. ಕುಟುಂಬ ಸದಸ್ಯರು ಸಂಭ್ರಮದಿಂದ ಮರಳುತ್ತಿರುವಾಗ ಕ್ಷಣಾರ್ಧದಲ್ಲಿ ಈ ಘಟನೆ ನಡೆದಿದೆ.

ದಿಂಡೊರಿಯಲ್ಲಿ ಕೋಚಿಂಗ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ದರ್ಗುಡೆ ಕುಟುಂಬ ಹಾಜರಾಗಿತ್ತು. ಕತ್ತಲಾಗುತ್ತಿದ್ದಂತೆ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಬಾವಿಯ ತಡೆ ಗೋಡೆಗೆ ಡಿಕ್ಕಿಯಾಗಿ ಬಾವಿಯೊಳಕ್ಕೆ ಬಿದ್ದಿದೆ. ಅತೀ ದೊಡ್ಡ ಬಾವಿ ಇದಾಗಿದ್ದು, ಇಡೀ ಗ್ರಾಮಕ್ಕೆ ನೀರುಣಿಸುವಷ್ಟು ನೀರು ಇಧರಲ್ಲಿತ್ತು. ಬರೋಬ್ಬರಿ 40 ಅಡಿ ನೀರಿದ್ದ ಈ ಬಾವಿಗೆ ಕಾರು ಬಿದ್ದಿದೆ. ಸ್ಥಳೀಯರ ಶಬ್ದ ಕೇಳಿ ಓಡಿ ಬಂದಿದ್ದಾರೆ. ತಕ್ಷಣ ರಕ್ಷಣಾ ತಂಡಗಳಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳೀಯರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆಧರೆ ಹೆಚ್ಚಿನ ನೀರು, ಆಳ ಹಾಗೂ ರಾತ್ರಿಯಾಗಿದ್ದ ಕಾರಣ ಸ್ಥಳೀಯರಿಗೆ ತಕ್ಷಣಕ್ಕೆ ಯಾರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತ್ತು. ಈಜುಗಾರರು ಬಾವಿಗೆ ಹಾರಿದ್ದಾರೆ. ಆದರೆ ಅಷ್ಟರಲ್ಲೇ ಸಮಯ ಮೀರಿತ್ತು. ಕುಟುಂಬದ 9 ಮಂದಿ ಮೃತಪಟ್ಟಿದ್ದರು. ಈ ಪೈಕಿ ಒರ್ವ ಮಗುವಿನ ಮೃತದೇಹ ಕಾರಿನಿಂದ ಹೊರಗಿತ್ತು. ಇನ್ನುಳಿದ 8 ಮಂದಿ ಮೃತದೇಹ ಕಾರಿನ ಒಳಗಿತ್ತು. ಇತ್ತ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಗಿದೆ. ಈ ಸಂಬಂಧ ಎರಡು ಪ್ರಕರಣ ದಾಖಲಾಗಿದೆ. ಒಂದು ಕಾರು ವೇಗವಾಗಿ ಹಾಗೂ ಅಜಾಗರೂಕತೆ ಚಾಲನೆ ಪ್ರಕರಣ ದಾಖಲಾಗಿದೆ. ರಸ್ತೆ ಪಕ್ಕದಲ್ಲೇ ಬಾವಿ ಇದ್ದರೂ ಸರಿಯಾದ ತಡೆಗೋಡೆ, ಸೂಚನಾ ಫಲಕಗಳನ್ನು ಹಾಕಿಲ್ಲ. ಕತ್ತಲಲ್ಲಿ ರಸ್ತೆ ಪಕ್ಕದಲ್ಲಿ ಬಾವಿ ಇದೆ ಅನ್ನೋದೇ ಗೊತ್ತಾಗುತ್ತಿಲ್ಲ. ಹೀಗಾಗಿ ನಿರ್ಲಕ್ಷ್ಯವಹಿಸಿದ ಬಾವಿ ಮಾಲೀಕ ರಾಜೇಂದ್ರ ರಾಜೆ ವಿರುದ್ಧವೂ ಕೇಸ್ ದಾಖಲಾಗಿದೆ.