ದೆಹಲಿಯಲ್ಲಿ ಎಲ್ಲಾ ತರಹದ ಪಟಾಕಿ ಮಾರಾಟ ಬ್ಯಾನ್| ಬ್ಯಾನ್ ಮಾಡಿ ಆದೇಶಿಸಿದ ಎನ್ ಜಿ ಟಿ| ನವೆಂಬರ್ 9 ಮಧ್ಯರಾತ್ರಿ ಯಿಂದ ನವೆಂಬರ್ 30 ರ ಮಧ್ಯರಾತ್ರಿಯ ತನಕ ಬ್ಯಾನ್

ನವದೆಹಲಿ(ನ. 09): ಪಟಾಕಿ ಬಳಿಕೆ ಹಾಗೂ ಮಾರಾಟ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮಹತ್ವದ ಆದೇಶ ಹೊರಡಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನವೆಂಬರ್ 9ರ ಮಧ್ಯರಾತ್ರಿಯಿಂದ ಎಲ್ಲಾ ರೀತಿಯ ಪಟಾಕಿಗಳ ನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 30ರವರೆಗೂ ಪಟಾಕಿಗಳಿಗೆ ನಿಷೇಧ ಹೇರಲಾಗಿದ್ದು, ದೆಹಲಿ ಹೊರತುಪಡಿಸಿ ದೇಶದ ಯಾವ್ಯಾವ ರಾಜ್ಯ ಅಥವಾ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ ಅಂತಹ ನಗರಗಳಿಗೂ ಈ ನಿರ್ಬಂಧ ಅನ್ವಯವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಯಾವ ನಗರಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, ವಾಯು ಮಾಲಿನ್ಯ ಕಡಿಮೆ ಇರುವುದೋ ಅಂತಹ ನಗರಗಳಲ್ಲಿ ಪಟಾಕಿ ಮಾರಾಟ ಮಾಡಬಹುದೆಂದು ಈ ಆದೇಶದಲ್ಲಿ ತಿಳಿಸಲಾಗಿದೆ.

ಇದರ ಅನ್ವಯ ಕರ್ನಾಟಕ ಸೇರಿ ಇತರೆ ನಗರ, ಪಟ್ಟಣಗಳಲ್ಲಿ ಹಸಿರುಪಟಾಕಿ ಜೊತೆ ಕೆಲ ಷರತ್ತುಗಳೊಂದಿಗೆ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಅಲ್ಲದೇ ಹಬ್ಬದ ವೇಳೆ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ, ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. 

ಕಳೆದ ಕೆಲವು ದಿನಗಳಿಂದ ವಾಯುಮಾಲಿನ್ಯ ದಿಂದಾಗಿ ದೆಹಲಿ, ಎನ್‌ಸಿಆರ್‌ನಲ್ಲಿ ಜನರ ಸ್ಥಿತಿ ಗಂಭೀರವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ ಸೋಮವಾರ ದೆಹಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣಿಸಿದೆ. ದೆಹಲಿಯ ಆನಂದ್ ಇಲಾಖೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 484 ಎಕ್ಯೂಐ, ಮುಂಡಕಾದಲ್ಲಿ 470, ಓಖ್ಲಾದಲ್ಲಿ 465, ವಾಜಿರ್‌ಪುರದಲ್ಲಿ 468 ಎಕ್ಯೂಐ ಇದೆ. ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ವಾಯುಗುಣಮಟ್ಟ ಅತ್ಯಂತ ಕಳಪೆಮಟ್ಟಕ್ಕೆ ಬಂದು ತಲುಪಿದೆ. ಸೋಮವಾರ ಬೆಳಗ್ಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಜನರು ಹೈರಾಣಾಗಿದ್ದಾರೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾದರು ಪರಿಸ್ಥಿತಿಯನ್ನು ತಹಬದಿಗೆ ತರುವ ಸರಕಾರದ ಪ್ರಯತ್ನ ಫಲ ನೀಡುತ್ತಿಲ್ಲ.