ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ, ಪ್ರವಾಸಿಗರ ಗುರಿಯಾಗಿಸಿ ನಡೆಯಿತಾ ದಾಳಿ?, ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆ ಕಟ್ಟಡ, ಅಕ್ಕ ಪಕ್ಕದ ಕಟ್ಟಡಗಳು ಬಿರುಗು ಬಿಟ್ಟಿದೆ, ಗಾಜುಗಳು ಪುಡಿ ಪುಡಿಯಾಗಿದೆ.
ಹಿಮಾಚಲ ಪ್ರದೇಶ (ಜ.01) ಭಾರತದ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತ ಮಾಡಿದೆ. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿ ನಡೆದಿತ್ತು. ಈ ಸಂಭ್ರಮದ ನಡುವೆ ಆಘಾತ ಎದುರಾಗಿದೆ. 2026ರ ಮೊದಲ ದಿನವೇ ಸ್ಫೋಟ ಸಂಭವಿಸಿದೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಾಲಘಡ ಬಳಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿಗ ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆ ಇದೆ. ಈ ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆ ಸೇರಿದಂತೆ ಹತ್ತಿರದ ಕಟ್ಟಡಗಳು ಬಿರುಕು ಬಿಟ್ಟಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಡೀ ಅವರಣ ಸುತ್ತುವರಿದಿದ್ದಾರೆ. ಇದೀಗ ತನಿಖೆ ತೀವ್ರಗೊಂಡಿದ್ದು, ಹೊಸ ವರ್ಷದ ಪ್ರಯುಕ್ತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಹಿಮಾಚಲ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಫೊರೆನ್ಸಿಕ್ ತಂಡ, ಪೊಲೀಸರ ತನಿಖೆ
ನಾಲಘಡ ಪೊಲೀಸ್ ಠಾಣೆ ಬಳಿ ಸಂಭವಿಸಿದ ಸ್ಫೋಟದ ಹಿಂದೆ ಭಯೋತ್ಪಾದಕರ ಕೃತ್ಯವೇ ಅಥವಾ ಇನ್ಯಾವುದೇ ಆಕಸ್ಮಿಕ ಘಟನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಬಾಂಬ್ ಸ್ಫೋಟದ ರೀತಿ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿದೆ. ಹಿಮಾಚಲ ಪ್ರದೇಶ ಪೊಲೀಸರು, ಫೊರೆನ್ಸಿಕ್ ತಂಡ ಸೇರಿದಂತೆ ತನಿಖಾ ತಂಡಗಳು ಸ್ಥಳದಲ್ಲಿದೆ. ಇಡೀ ಪ್ರದೇಶ ಸುತ್ತುವರಿದು ತನಿಖೆ ಆರಂಭಿಸಿದೆ. ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಪ್ರವಾಸಿಗರ ಜನದಟ್ಟಣೆ ನಡುವೆ ನಡೆಯಿತಾ ಸ್ಫೋಟ?
ಹಿಮಾಚಲ ಪ್ರದೇಶದಲ್ಲಿ ಹೊಸ ವರ್ಷ ಆಚರಿಸಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಹಿಮಾಚಲ ಪ್ರದೇಶದ ಬಹುತೇಕ ಜಿಲ್ಲೆಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ಹಿಮಾಚಲ ಪ್ರದೇಶದ ಪ್ರವಾಸಿಗರ ಟಾರ್ಗೆಟ್ ಮಾಡಿದ ಕೃತ್ಯವೇ? ಅನ್ನೋ ಅನುಮಾನಗಳು ವ್ಯಕ್ತವಾಗುತ್ತಿದೆ.ಸದ್ಯದ ಮಾಹಿತಿ ಪ್ರಕಾರ ಸ್ಫೋಟ ಎಂದು ಖಚಿತವಾಗಿದೆ. ಆದರೆ ಬಾಂಬ್ ಸ್ಫೋಟದ ಕುರಿತು ಯಾವುದೇ ಪ್ರಾಥಮಿಕ ಮಾಹಿತಿಗಳು ಸ್ಪಷ್ಟಪಡಿಸಿಲ್ಲ. ಈ ಕುರಿತು ಪೊಲೀಸರು ಹಲವು ದಾಖಲೆ ಸಂಗ್ರಹಿಸಿ ಪರಿಶೀಲನೆ ಆರಂಭಿಸಿದ್ದಾರೆ.
ಪ್ರವಾಸಿಗರನ್ನು, ಪ್ರಮುಖ ಧಾರ್ಮಿಕ ಸ್ಥಳ, ಜನನಿಬಿಡಿ ಪ್ರದೇಶಗಳನ್ನು ಟಾರ್ಗೆಟ್ ಮಾಡುವ ಮೂಲಕ ಭಾರತದಲ್ಲಿ ಅಭದ್ರತೆ, ಅಶಾಂತಿ ಸೃಷ್ಟಿಸಲು ಹಲವು ಉಗ್ರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದೆ. ಇವರ ಈ ಪ್ರಯತ್ನಗಳನ್ನು ಭಾರತದ ಭದ್ರತಾ ಪಡೆಗಳು ವಿಫಲಗೊಳಿಸುತ್ತಿದೆ. ಇದರ ನಡುವೆ ಇತ್ತೀಚೆಗೆ ದೆಹಲಿಯಲ್ಲಿ ಕಾರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದರು. ಘಟನೆ ಸಂಬಂಧ ಹಲವು ಉಗ್ರರನ್ನು ಅರೆಸ್ಟ್ ಮಾಡಲಾಗಿದೆ. ತನಿಖೆ ವೇಳೆ ಈ ಉಗ್ರರ ಬಾಂಬ್ ದಾಳಿಯ ಹಿಂದೆ ವೈದ್ಯರ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದಕರ ಇದ್ದಾರೆ ಅನ್ನೋದು ಬಯಲಾಗಿದೆ. ಇದು ಜನನಿಬಿಡಿ ಪ್ರದೇಶವನ್ನು ಟಾರ್ಗೆಟ್ ಮಾಡಿ ನಡೆಸಿದ ಕೃತ್ಯವಾಗಿತ್ತು.
ದೆಹಲಿ ಬ್ಲಾಸ್ಟ್ಗೂ ಮೊದಲು ಭಾರಿ ಆತಂಕ ಸೃಷ್ಟಿಸಿದ ಪೆಹಲ್ಗಾಂ ಉಗ್ರರ ದಾಳಿ ಪ್ರವಾಸಿಗರನ್ನು ಗುರಿಯಾಸಿ ನಡೆದ ದಾಳಿಯಾಗಿದೆ. ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸಿ, ಹಿಂದೂಗಳು, ಇತರ ಮತಗಳ ಜನರು ಕಾಶ್ಮೀರ ತೊರೆಯುವಂತೆ ಮಾಡುವುದು, ಕಾಶ್ಮೀರಕ್ಕೆ ಯಾರೂ ಪ್ರವಾಸ ಬರದಂತೆ ಮಾಡಿ ಸಂಪೂರ್ಣವಾಗಿ ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುವ ಹುನ್ನಾರ ಈ ದಾಳಿ ಹಿಂದೆ ಅಡಗಿತ್ತು. ಪೆಹಲ್ಗಾಂ ದಾಳಿಯಲ್ಲಿ ಉಗ್ರರು ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ್ದರು. ಈ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತರಬೇತಿ ನೆಲೆಗಳನ್ನು ಭಾರತ ಧ್ವಂಸಮಾಡಿತ್ತು. ಇತ್ತ ಪಾಕಿಸ್ತಾನಕ್ಕೆ ನುಗ್ಗಿ ಪಾಕಿಸ್ತಾನದ ಸೇನಾ ನೆಲೆ ಸೇರಿದಂತೆ ಹಲವು ಕ್ಯಾಂಪ್ಗಳನ್ನು ಧ್ವಂಸ ಮಾಡಿತ್ತು.


