G20 ಶೃಂಗಸಭೆ ಯಶಸ್ವಿಯಾಗಿ ಅಂತ್ಯ: ಬ್ರೆಜಿಲ್ ಅಧ್ಯಕ್ಷರಿಗೆ ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ
ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಂತ್ಯಗೊಂಡಿದ್ದು, ಬ್ರೆಜಿಲ್ ಅಧ್ಯಕ್ಷರಿಗೆ ಅಧ್ಯಕ್ಷತೆಯ ಬ್ಯಾಟನ್ ಅನ್ನು ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ.

ನವದೆಹಲಿ (ಸೆಪ್ಟೆಂಬರ್ 10, 2023): ಭಾರತದಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಬ್ರೆಜಿಲ್ ಅಧ್ಯಕ್ಷರಿಗೆ ಜಿ20 ಅಧ್ಯಕ್ಷತೆಯ ಬ್ಯಾಟನ್ ಅನ್ನು ಹಸ್ತಾಂತರಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಜಿ20 ಶೃಂಗಸಭೆ ವೇಳೆ ಜಾಗತಿಕ ನಾಯಕರು ಹಲವು ಪ್ರಮುಖ ನಿರ್ಧಾರಗಳನ್ನು ಘೋಷಣೆ ಮಾಡಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
'ಒಂದು ಭವಿಷ್ಯ' ಎಂಬ ಶೀರ್ಷಿಕೆಯ G20ಯ ಅಂತಿಮ ಅಧಿವೇಶನದಲ್ಲಿ, ಪ್ರಧಾನಿ ಮೋದಿ ಭಾರತದ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಪ್ರಧಾನಮಂತ್ರಿಯವರು ಸಾಮಾನ್ಯ ವಿಧಿಯ ಅಂಗವಾಗಿ ಬ್ರೆಜಿಲ್ ಅಧ್ಯಕ್ಷರಿಗೆ ಬ್ಯಾಟನ್ ಅನ್ನು ಹಸ್ತಾಂತರಿಸಿದರು. ಇನ್ನು, "ಜಿ 20 ಬಣವನ್ನು ಸಮರ್ಥವಾಗಿ ಮುನ್ನಡೆಸಿದ್ದಕ್ಕಾಗಿ ಮತ್ತು ಈ ಶೃಂಗಸಭೆಯಲ್ಲಿ ಅತ್ಯುತ್ತಮ ಕಾರ್ಯನಿರತವಾಗಿದ್ದಕ್ಕಾಗಿ" ಪ್ರಧಾನಿ ಮೋದಿಯನ್ನು ಬ್ರೆಜಿಲ್ ಅಧ್ಯಕ್ಷರು ಅಭಿನಂದಿಸಿದ್ದಾರೆ. ಉದಯೋನ್ಮುಖ ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡಿದ್ದಕ್ಕಾಗಿಯೂ ಅವರು ಭಾರತವನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿ: ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ ಭೇಟಿ: ಭಾರತದ ಸಂಸ್ಕೃತಿಗೆ ಮೆಚ್ಚುಗೆ
ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದ್ದ ಜಿ20 ಶೃಂಗಸಭೆ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಮುಂದಿನ ವರ್ಷ ಜಿ20 ಶೃಂಗಸಭೆ ಬ್ರೆಜಿಲ್ನಲ್ಲಿ ನಡೆಯಲಿದೆ. ಬ್ರೆಜಿಲ್ ನಂತರ, ದಕ್ಷಿಣ ಆಫ್ರಿಕಾವು 2025 ರಲ್ಲಿ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸುತ್ತದೆ. ಬಳಿಕ, ಯುನೈಟೆಡ್ ಸ್ಟೇಟ್ಸ್ 2026 ರಲ್ಲಿ ಜಿ20 ಅಧ್ಯಕ್ಷತೆ ವಹಿಸಿಕೊಳ್ಳುತ್ತದೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ, ಪ್ರಧಾನಿ ಮೋದಿ ಜಿ 20 ನಾಯಕರು ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ರಿಷಿ ಸುನಕ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ, ಕೊಮೊರೊಸ್ ಒಕ್ಕೂಟದ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ (ಎಯು) ಅಧ್ಯಕ್ಷ ಅಜಲಿ ಅಸ್ಸೌಮಾನಿ, ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು, ಸ್ಪೇನ್ನ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ, ಯುನೈಟೆಡ್ ಮೆಕ್ಸಿಕನ್ ಸ್ಟೇಟ್ಸ್ ಆರ್ಥಿಕ ಸಚಿವ ರಾಕ್ವೆಲ್ ಬ್ಯೂನ್ರೊಸ್ಟ್ರೋ ಸ್ಯಾಂಚೆಜ್ ಅವರು ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸಿದರು ಮತ್ತು ಪುಷ್ಪ ನಮನ ಸಲ್ಲಿಸಲಾಯ್ತು.
ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲೂ ವಿಜೃಂಭಿಸಿದ ‘ಭಾರತ’: ಮೋದಿ ಸರ್ಕಾರದ ಉದ್ದೇಶ ಮತ್ತಷ್ಟು ದೃಢ!
ಗಾಂಧಿ ಆಶ್ರಮದ ಕಟೌಟ್ ಒಳಗೊಂಡ ಖಾದಿ ಶಾಲು ಹೊದಿಸಿ ನಾಯಕರನ್ನು ಪ್ರಧಾನಿ ಸ್ವಾಗತಿಸಿದರು. ರಾಜ್ಘಾಟ್ನಲ್ಲಿ ಸಸಿಗಳನ್ನು ನೆಟ್ಟ ನಂತರ ಭಾರತ ಮಂಟಪದಲ್ಲಿ "ಒಂದು ಭವಿಷ್ಯ" ಎಂದು ಕರೆಯಲ್ಪಡುವ ಜಿ 20 ಶೃಂಗಸಭೆಯ ಮೂರನೇ ಅಧಿವೇಶನದಲ್ಲಿ ಜಾಗತಿಕ ನಾಯಕರು ಭಾಗಿಯಾಗಿದ್ರು.
ಭಾರತವು ಆಯೋಜಿಸುತ್ತಿರುವ ಈ ವರ್ಷದ ಜಿ20 ಶೃಂಗಸಭೆಯ ಘೋಷವಾಕ್ಯವು "ವಸುಧೈವ ಕುಟುಂಬಕಂ" ಆಗಿದೆ, ಇದಕ್ಕೆ "ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ" ಎಂದರ್ಥ. ಕಳೆದ ವರ್ಷ ಡಿಸೆಂಬರ್ 1 ರಂದು ಭಾರತವು G20 ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿತ್ತು..
ಇದನ್ನೂ ಓದಿ: ಒಡಿಶಾ ಕೋನಾರ್ಕ್ ಚಕ್ರದ ಮುಂದೆಯೇ ವಿಶ್ವದ ನಾಯಕರಿಗೆ ಪ್ರಧಾನಿ ಮೋದಿ ಸ್ವಾಗತ: ಕಾಲ ಚಕ್ರದ ಮಹಿಮೆ ಹೀಗಿದೆ ನೋಡಿ..