ಮೋದಿ ಪ್ರತಿಮೆಗೆ ಬೆಂಕಿ, ಗಾಂಧೀ ಕುಟುಂಬದ ವಿರುದ್ಧ ಗುಡುಗಿದ ನಡ್ಡಾ!
ಪಿಎಂ ಮೋದಿ ಪ್ರತಿಮೆಯನ್ನು ಸುಟ್ಟಿರುವ ವಿಚಾರ| ಗಾಮಧಿ ಕುಟುಂಬ ಟೀಕಿಸಿದ ಜೆ. ಪಿ. ನಡ್ಡಾ| ಮಹಿಷಾಸುರನ ಪ್ರತಿಮೆ ಬದಲು ಮೋದಿ ಪ್ರತಿಮೆ ಸುಟ್ಟು ಹಾಕಿದ ಪಂಜಾಬ್ ರೈತರು
ನವದೆಹಲಿ(ಅ. 26): ಪಿಎಂ ಮೋದಿ ಪ್ರತಿಮೆಯನ್ನು ಸುಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪ್ರತಿಕ್ರಿಯಿಸಿದ್ದು, ಇದೊಂದು ನಾಚಿಕೆಗೇಡಿನ ಕೆಲಸ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಎಲ್ಲೆಡೆ ಮಹಿಷಾಸುರನ ಪ್ರತಿಕೃತಿ ದಹಿಸಿ ಸಂಭ್ರಮಿಸುವುದು ವಾಡಿಕೆ. ಆದರೆ, ಕೇಂದ್ರದ ಇತ್ತೀಚಿನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ದೇಶಾದ್ಯಂತ ಉಗ್ರ ಹೋರಾಟ ನಡೆಸುತ್ತಿರುವ ಹಿನ್ನೆಲೆ, ಪಂಜಾಬ್ನಲ್ಲಿ ನಿನ್ನೆ ದಸರಾ ಹಬ್ಬದ ಆಚರಣೆ ವೇಳೆ ಮಹಿಷಾಸುರನ ಪ್ರತಿಮೆ ಬದಲು ಮೋದಿ ಪ್ರತಿಮೆ ಸುಡಲಾಗಿತ್ತು. ಈ ಘಟನೆ ಇದೀಗ ರಾಷ್ಟ್ರಾದ್ಯಂತ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಪಂಜಾಬ್ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ಹಿಂದಿನಿಂದಲೂ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿತ್ತು. ಹೀಗಾಗಿ ಕಾಂಗ್ರೆಸ್ ನಾಯಕರೇ ಮುಂದೆ ನಿಂತು ಈ ಹೀಗೆ ಮಾಡಿದ್ದಾರೆಂಬುವುದು ಬಿಜೆಪಿ ನಾಯಕರ ಆರೋಪ. ಈ ಸಂಬಂಧ ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಜೆ.ಪಿ. ನಡ್ಡಾ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ವಿರುದ್ಧ ಕಿಡಿಕಾರಿದ್ದಾರೆ.
ಈ ಘಟನೆ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರಿ 'ಪ್ರಜಾಪ್ರಭುತ್ವದಲ್ಲಿ ನಿರಾಶೆ ಮತ್ತು ನಾಚಿಕೆಗೇಡು ತನದ ಸಂಯೋಜನೆ ನಿಜಕ್ಕೂ ಅಪಾಯಕಾರಿ. ಒಂದೆಡೆ ತಾಯಿ ಸಭ್ಯತೆ ಪ್ರಜಾಪ್ರಭುತ್ವದ ಮಹತ್ವ ಎಂದು ಖಾಲಿ ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಮಗ ದ್ವೇಷ, ಕೋಪ, ಸುಳ್ಳು, ಮತ್ತು ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈ ಡಬಲ್ ಸ್ಟ್ಯಾಂಡರ್ಡ್ಸ್ ಸಮೃದ್ಧವಾಗಿದೆ!' ಎಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.