NCSC ಆಯೋಗಕ್ಕೆ ಜಾತಿ ಪ್ರಮಾಣ ಪತ್ರ ದಾಖಲೆ ಸಲ್ಲಿಸಿದ ಸಮೀರ್ ವಾಂಖೆಡೆ; ತನಿಖೆ ಚುರುಕು!
- NCB ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಜಾತಿ ದುರುಪಯೋಗ ಆರೋಪ
- ವಾಂಖೆಡೆ ವಿರುದ್ಧ ಆರೋಪ ಮಾಡಿದ್ದ NCP ನಾಯಕ ನವಾಬ್ ಮಲಿಕ್
- ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗಕ್ಕೆ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ವಾಂಖೆಡೆ
ಮುಂಬೈ(ನ.01): ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ(Bollywood Drugs Case) ಜೈಲು ಸೇರಿದ್ದ ಆರೋಪಿಗಳು ಜಾಮೀನು(Bail) ಮೇಲೆ ಬಿಡುಗಡೆಗೊಂಡಿದ್ದಾರೆ. ಆದರೆ ಡ್ರಗ್ಸ್ ಪ್ರಕರಣ ಬೆಳಕಿಗೆ ತಂದ NCB ಮುಖ್ಯಸ್ಥ ಸಮೀರ್ ವಾಂಖೆಡೆ(Sameer Wankhede) ಸಂಕಷ್ಟ ಇನ್ನು ಮುಗಿದಿಲ್ಲ. ಲಂಚ ಆರೋಪ, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಆರೋಪ ಹೊತ್ತಿರುವ ಸಮೀರ್ ವಾಂಖೆಡೆ ವಿರುದ್ಧ ತನಿಖೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಸಮೀರ್ ವಾಂಖೆಡೆ ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗ(NCSC)ಭೇಟಿ ಮಾಡಿದ್ದು, ತಮ್ಮ ಒರಿಜಿನಲ್ ಜಾತಿ ಪ್ರಮಾಣ ಪತ್ರ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಕೊನೆಗೂ ಆರ್ಯನ್ ಖಾನ್ಗೆ ಸಿಕ್ತು ಜಾಮೀನು
NCSC ಮುಖ್ಯಸ್ಥ ವಿಜಯ್ ಸಂಪ್ಲ ಭೇಟಿಯಾದ ಸಮೀರ್ ವಾಂಖೆಡೆ, ತಾವು ದಲಿತ ಎಂದು ಸಾಬೀತು ಪಡಿಸಲು ದಾಖಲೆ ಪತ್ರಗಳನ್ನು(Cast Cetificate) ಸಲ್ಲಿಸಿದ್ದಾರೆ. ದಾಖಲೆ ಸ್ವೀಕರಿಸಿದ ಬಳಿಕ ಮಾತನಾಡಿದ ವಿಜಯ್ ಸಂಪ್ಲ, ಸಮೀರ್ ವಾಂಖೆಡೆ ಸಲ್ಲಿಸಿದ ದಾಖಲೆಗಳು ಸರಿಯಾಗಿದ್ದಲ್ಲಿ ಸಮೀರ್ ವಿರುದ್ಧ ಆರೋಪಗಳು ನಿರಾಧಾರವಾಗಲಿದೆ. ಇಷ್ಟೇ ಅಲ್ಲ ಸಮೀರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಸಮೀರ್ ತಾವು ದಲಿತ ಅನ್ನೋದನ್ನು ಸಾಬೀತು ಪಡಿಸಲು ವಿಫಲವಾದರೆ, ಕಾನೂನು ಕ್ರಮ ಎದುರಿಸಬೇಕು ಎಂದು ವಿಜಯ್ ಸಂಪ್ಲ ಹೇಳಿದ್ದಾರೆ.
ಸಮೀರ್ ವಾಂಖೆಡೆ ದಾಖಲೆಗಳನ್ನ ಮಹಾರಾಷ್ಟ್ರ ಸರ್ಕಾರ(Maharastra Government) ಪರಿಶೀಲನೆ ಮಾಡಲಿದೆ. ಹೀಗಾಗಿ ಸಮೀರ್ ದಾಖಲೆ ಪತ್ರ ಪರಿಶೀಲನೆ, ತನಿಖೆ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ವಿಜಯ್ ಸಂಪ್ಲ ಹೇಳಿದ್ದಾರೆ. ಜಾತಿ ಪ್ರಮಾಣ ಪತ್ರ ದಾಖಲೆ ಜೊತೆಗೆ ಸಮೀರ್ ವಾಂಖೆಡೆ ತಮ್ಮ ಮೊದಲ ಮದುವೆ ವಿಚ್ಚೇದನ ಪ್ರಮಾಣ ಪತ್ರ ಸೇರಿದಂತೆ ಇತರ ದಾಖಲೆಗಳನ್ನು ಸಲ್ಲಿಸಿದ್ದಾರೆ.
Drugs Case: 4 ಗಂಟೆ ಅಫೀಸರ್ ವಾಂಖೆಡೆ ವಿಚಾರಣೆ, ಡ್ರಗ್ಸ್ ಪಾರ್ಟಿ ತನಿಖೆ ಕಥೆ ಏನು ?
ಬಾಲಿವುಡ್ ಡ್ರಗ್ಸ್ ಪ್ರಕರಣದ ತನಿಖೆ ಮಾಡುತ್ತಿರುವ ಸಮೀರ್ ವಾಂಖೆಡೆ ಹಲವು ಅಡೆ ತಡೆ ಎದುರಿಸುತ್ತಿದ್ದಾರೆ. NCP ನಾಯಕ ನವಾಬ್ ಮಲಿಕ್(Nawab Malik) ಸತತ ಆರೋಪಗಳನ್ನು ಮಾಡಿದ್ದಾರೆ. ಇದರಲ್ಲಿ ಜಾತಿ ಪ್ರಮಾಣ ಪತ್ರವೂ ಪ್ರಮುಖವಾಗಿದೆ. ಸಮೀರ್ ವಾಂಖೆಡೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಲು ಪರಿಶಿಷ್ಠ ಜಾತಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆ. ತಾನು ದಲಿತ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸಮೀರ್ ವಾಂಖೆಡೆ ಮುಸ್ಲಿಂನಾಗಿ ಹುಟ್ಟಿ ದಲಿತ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಸಮೀರ್ ವಾಂಖೆಡೆ ಮೇಲೆ ಆರೋಪಗಳು ಬರುತ್ತಿದೆ. ಆರ್ಯನ್ ಖಾನ್ ಪ್ರಕರಣ ಮುಚ್ಚಿಹಾಕಲು 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು. ಇದೀಗ ನವಾಬ್ ಮಲಿಕ್ ಗಂಭೀರ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.
ವಿವಾದದ ಮಧ್ಯೆ ಸಮೀರ್ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!
ಸದ್ಯ ಡ್ರಗ್ಸ್ ಪ್ರಕರಣ ತನಿಖೆಯನ್ನು ಸಮೀರ್ ವಾಂಖೆಡೆ ಮುಂದುವರಿಸಲಿದ್ದಾರೆ. ಆದರೆ ನವಾಬ್ ಮಲಿಕ್ ಆರೋಪಗಳು ಸಾಬೀತಾದರೆ ಎನ್ಸಿಬಿ ಮುಖ್ಯಸ್ಥ ವಾಂಖೆಡೆಗೆ ಕಾನೂನು ಸಂಕಷ್ಟ ಎದುರಾಗಲಿದೆ.
ಸಮೀರ್ ವಾಂಖೆಡೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಎನ್ಸಿಬಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಆದರೆ ನವಾಬ್ ಮಲಿಕ್ ವೈಯುಕ್ತಿಕ ದಾಳಿ ಮೂಲಕ ಡ್ರಗ್ಸ್ ಪ್ರಕರಣ ಹಾದಿ ತಪ್ಪಿಸುತ್ತಿದ್ದಾರೆ. ಸಮೀರ್ ವಾಂಖೆಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗ ಉಪಾಧ್ಯಕ್ಷ ಅರುಣ್ ಹಾಲ್ದರ್ ಹೇಳಿದ್ದರು. ಈ ಮೂಲಕ ತನಿಖೆ ಪೂರ್ಣಗೊಳ್ಳುವ ಮೊದಲು ಸಮೀರ್ ವಾಂಖೆಡೆ NCSC ಉಪಾಧ್ಯಕ್ಷ ಕ್ಲೀನ್ ಚಿಟ್ ನೀಡಿದ್ದರು.