ನ್ಯಾಷನಲ್ ಹೆರಾಲ್ಡ್ ಕೇಸ್, ಕಾಂಗ್ರೆಸ್ ನಾಯಕ ಪವನ್ ಬನ್ಸಾಲ್ ವಿಚಾರಣೆ ನಡೆಸಿದ ಇಡಿ!
ಪ್ರತಿಷ್ಠಿತ ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಬುಧವಾರ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ಪವನ್ ಭನ್ಸಾಲ್ ಅವರ ವಿಚಾರಣೆ ನಡೆಸಿದೆ.

ನವದೆಹಲಿ (ನ.8): ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ರೈಲ್ವೆ ಸಚಿವ ಪವನ್ ಬನ್ಸಾಲ್ ಅವರನ್ನು ಬುಧವಾರ ವಿಚಾರಣೆ ನಡೆಸಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಿಂದಾಗಿ ಬನ್ಸಾಲ್ ಅವರನ್ನು ಪ್ರಶ್ನೆ ಮಾಡಲಾಗಿದೆ. ಅವರು ಬುಧವಾರ ಮಧ್ಯಾಹ್ನ 12 ಗಂಟೆಗೆ ಇಡಿ ದೆಹಲಿ ಕಚೇರಿಯನ್ನು ತಲುಪಿದರು. ಈ ವಿಚಾರದಲ್ಲಿ ಬನ್ಸಾಲ್ ಅವರನ್ನು ಮಂಗಳವಾರ ನವೆಂಬರ್ 7 ರಂದು ಸಮನ್ಸ್ ನೀಡಲಾಗಿತ್ತು. ಇದೇ ವೇಳೆ ಬುಧವಾರ ಕೇರಳದ ತಿರುವನಂತಪುರಂನಲ್ಲಿ ಇಡಿ ದಾಳಿ ನಡೆಸಿದೆ. ಕಂದಲ ಸರ್ವಿಸ್ ಕಾರ್ಪೊರೇಟ್ ಬ್ಯಾಂಕ್ ಅಧ್ಯಕ್ಷ ಬಸುರಂಗನ್ ಮನೆ ಮೇಲೆ ಇಡಿ ಶೋಧ ನಡೆಸುತ್ತಿದೆ. 2013ರಲ್ಲಿ ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ದೆಹಲಿಯ ವಿಚಾರಣಾ ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಯ ತನಿಖೆಯನ್ನು ಗಮನಕ್ಕೆ ತೆಗೆದುಕೊಂಡ ನಂತರ ಎರಡು ವರ್ಷಗಳ ಹಿಂದೆ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್ ನಾಯಕರ ವಿರುದ್ಧ ಇಡಿ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.
ಪ್ರಕರಣದ ದಾಖಲಾತಿಯ ನಂತರ, ಇಡಿ ಕಳೆದ ವರ್ಷ ಮೊದಲ ಬಾರಿಗೆ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (ವೈಐಎಲ್) ನ ಬಹುಪಾಲು ಷೇರುದಾರರಾಗಿರುವ ಗಾಂಧಿ ಕುಟುಂಬ ಸದಸ್ಯರಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಪ್ರಶ್ನೆ ಮಾಡಿತ್ತು. ಈ ಹಿಂದೆಯೂ ಇಡಿ ಮಲ್ಲಿಕಾರ್ಜುನ ಖರ್ಗೆ, ಬನ್ಸಾಲ್ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿತ್ತು.