ಮುಂಬೈನಲ್ಲಿ ಸೋಮವಾರ ಮುಂಜಾನೆ ಲೋಕಲ್ ಟ್ರೇನ್ನಿಂದ ಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ದುರ್ಘಟನೆ ಸಂಭವಿಸಿದೆ.
ಮುಂಬೈ (ಜೂ.9): ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸೋಮವಾರ ಮುಂಜಾನೆ ದಾರುಣ ಘಟನೆ ನಡೆದಿದ್ದು, ಜನದಟ್ಟಣೆಯಿಂದ ತುಂಬಿದ್ದ ಲೋಕಲ್ ಟ್ರೇನ್ನಿಂದ ಐವರು ಪ್ರಯಾಣಿಕರು ಜಾರಿ ಬಿದ್ದು ಸಾವು ಕಂಡಿದ್ದಾರೆ. ಇನ್ನೂ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.ಕೇಂದ್ರ ರೈಲ್ವೆಯ ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಕಡೆಗೆ ಹೋಗುತ್ತಿದ್ದ ಲೋಕಲ್ ಟ್ರೇನ್ನಿಂದ ಕನಿಷ್ಠ 10-12 ಪ್ರಯಾಣಿಕರು ಬೋಗಿಗಳಿಂದ ಕೆಳಗೆ ಬಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ರೈಲು ತುಂಬಾ ಜನದಟ್ಟಣೆಯಿಂದ ತುಂಬಿತ್ತು ಮತ್ತು ಘಟನೆ ಸಂಭವಿಸಿದಾಗ ಪ್ರಯಾಣಿಕರು ರೈಲಿನ ಬಾಗಿಲಿನಲ್ಲಿ ನೇತಾಡುತ್ತಿದ್ದರು. ಗಾಯಾಳುಗಳನ್ನು ರೈಲ್ವೆ ಹಳಿಗಳಿಂದ ಹೊರತೆಗೆದು ಕಲ್ವಾ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಮೃತ ಪ್ರಯಾಣಿಕರು 30–35 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ. ಅವರನ್ನು ಗುರುತಿಸುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಈ ನಡುವೆ, ಮುಂಬೈ ಉಪನಗರ ರೈಲ್ವೆಗಾಗಿ ತಯಾರಿಸಲಾಗುತ್ತಿರುವ ಎಲ್ಲಾ ರೇಕ್ಗಳು ಸ್ವಯಂಚಾಲಿತ ಬಾಗಿಲು ಮುಚ್ಚುವ ಸೌಲಭ್ಯಗಳನ್ನು ಹೊಂದಿರುತ್ತವೆ ಎಂದು ರೈಲ್ವೆ ಮಂಡಳಿ ಸೋಮವಾರ ಘೋಷಿಸಿದೆ. ಸೇವೆಯಲ್ಲಿರುವ ಎಲ್ಲಾ ರೇಕ್ಗಳನ್ನು ಮರುವಿನ್ಯಾಸಗೊಳಿಸಲಾಗುವುದು ಮತ್ತು ಅವುಗಳೆಲ್ಲದರಲ್ಲೂ ಬಾಗಿಲು ಮುಚ್ಚುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಂಡಳಿಯು ಘೋಷಿಸಿದೆ.
ಸೋಮವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಸಾವು ಕಂಡವರಲ್ಲಿ 3 ಮಂದಿ ಮಹಿಳೆಯರಾಗಿದ್ದರೆ, ಇಬ್ಬರು ಪುರುಷರಾಗಿದ್ದಾರೆ. ಪ್ರಯಾಣಿಕರು ರೈಲು ಹಳಿಗಳ ಮೇಲೆ ಬಿದ್ದಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥಾಣೆಯ ಮುಂಬ್ರಾ ರೈಲು ನಿಲ್ದಾಣದ ಬಳಿ ಸಿಎಸ್ಎಂಟಿಗೆ ಹೋಗುತ್ತಿದ್ದ ಹಲವಾರು ಪ್ರಯಾಣಿಕರು ರೈಲಿನಿಂದ ಬಿದ್ದಿದ್ದಾರೆ ಎಂದು ವರದಿಯಾಗಿದೆ. ರೈಲಿನಲ್ಲಿ ಜನದಟ್ಟಣೆ ಹೆಚ್ಚಾಗಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳುಗಳನ್ನು ಸಾಗಿಸಲಾಗುತ್ತಿದೆ.
ಘಟನೆಯ ಕುರಿತು ಕೇಂದ್ರ ರೈಲ್ವೆ ಹೇಳಿಕೆ ನೀಡಿದೆ. ಎಎನ್ಐಗೆ ನೀಡಿದ ಹೇಳಿಕೆಯಲ್ಲಿ, ಸಿಆರ್, "ಥಾಣೆಯ ಮುಂಬ್ರಾ ರೈಲು ನಿಲ್ದಾಣದಲ್ಲಿ ಸಿಎಸ್ಎಂಟಿ ಕಡೆಗೆ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರು ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ರೈಲಿನಲ್ಲಿ ಅತಿಯಾದ ಜನಸಂದಣಿಯೇ ಅಪಘಾತಕ್ಕೆ ಕಾರಣ ಎಂದು ನಂಬಲಾಗಿದೆ. ರೈಲ್ವೆ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಅಪಘಾತದ ತನಿಖೆ ಆರಂಭವಾಗಿದೆ. ಘಟನೆಯಿಂದ ಸ್ಥಳೀಯ ಸೇವೆಗಳ ಮೇಲೂ ಪರಿಣಾಮ ಬೀರಿದೆ" ಎಂದು ತಿಳಿಸಿದೆ.
ಸಿಆರ್ಪಿಒ ಸ್ವಪ್ನಿಲ್ ಧನರಾಜ್ ನಿಲಾ ಅವರ ಇತ್ತೀಚಿನ ಅಪ್ಡೇಟ್ಗಳ ಪ್ರಕಾರ, ಎಂಟು ಸ್ಥಳೀಯ ರೈಲು ಪ್ರಯಾಣಿಕರು ಡೌನ್/ಫಾಸ್ಟ್ ಲೈನ್ನಲ್ಲಿ ಮುಂಬ್ರಾ ಮತ್ತು ದಿವಾ ನಿಲ್ದಾಣಗಳ ನಡುವೆ ಬಿದ್ದಿದ್ದರಿಂದ ಅಪಘಾತ ಸಂಭವಿಸಿದೆ. ಸ್ಥಳೀಯ ರೈಲಿನ ಸಿಬ್ಬಂದಿಯೊಬ್ಬರು ಈ ಘಟನೆಯನ್ನು ವರದಿ ಮಾಡಿದ್ದಾರೆ ಎಂದು ಸಿಪಿಆರ್ಒ ಸ್ವಪ್ನಿಲ್ ಧನರಾಜ್ ನಿಲಾ ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಿಆರ್ಪಿಒ ಹೇಳಿಕೆಯ ಪ್ರಕಾರ, ಕಸರಾಗೆ ಪ್ರಯಾಣಿಸುತ್ತಿದ್ದ ರೈಲಿನ ಫುಟ್ಬೋರ್ಡ್ನಲ್ಲಿದ್ದ ವ್ಯಕ್ತಿಗಳು ಮತ್ತು ಸಿಎಸ್ಎಂಟಿಗೆ ಹೋಗುವ ರೈಲಿನ ಫುಟ್ಬೋರ್ಡ್ನಲ್ಲಿದ್ದ ವ್ಯಕ್ತಿಗಳ ನಡುವೆ ಘರ್ಷಣೆ ಸಂಭವಿಸಿದ್ದು, ಇದರ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ.
