ಯುವಕ ಸಂಗ್ರಹಿಸಿದ ಆಕ್ಸಿಜನ್ ಸಿಲಿಂಡರ್ ಕಸಿದ ಯುಪಿ ಪೊಲೀಸ್; ಆಮ್ಲಜನಕ ಸಿಗದೆ ತಾಯಿ ಸಾವು!
ಕೊರೋನಾ ಸಂಕಷ್ಟ ಕಾಲದಲ್ಲಿ ಹಲವು ಕಣ್ಣೀರ ಕತೆಗಳು ಪ್ರತಿ ದಿನ ನಮ್ಮ ಮನ ಕಲುಕುತ್ತಿದೆ. ಆಕ್ಸಿಜನ್ ಸಿಗದೆ ಸಾವು, ಚಿಕಿತ್ಸೆ ಸಿಗದೆ ಸಾವು, ತಬ್ಬಲಿಯಾದ ಮಕ್ಕಳು, ಮಕ್ಕಳ ಕಳೆದುಕೊಂಡ ಪೋಷಕರು ಹೀಗೆ ಒಂದೆರಡಲ್ಲ. ಆದರೆ ಇಲ್ಲೊಂದು ಘಟನೆ ನಡೆದಿದೆ. ಇದು ಅತ್ಯಂತ ಘನಘೋರ. ಪೊಲೀಸರ ತಪ್ಪಿನಿಂದ ಅಮಾಯಕ ಜೀವವೊಂದು ಬಲಿಯಾಗಿದೆ
ಆಗ್ರಾ(ಏ.30): ಕೊರೋನಾ 2ನೇ ಅಲೆಯಲ್ಲಿ ಕರುಣಾಜನಕ ಕತೆಗಳನ್ನು ಕೇಳಲು ತೀವ್ರ ಸಂಕಟವಾಗುತ್ತದೆ. ಆದರೆ ಪ್ರತಿ ದಿನ ದೇಶದ ಹಲವು ಭಾಗಗಳಲ್ಲಿ ಈ ರೀತಿಯ ಕಣ್ಣೀರ ಕತೆಗಳು ಮರುಕಳಿಸುತ್ತಲೇ ಇದೆ. ಪ್ರಾಣ ಉಳಿಸಲು ಕುಟುಂಬಸ್ಥರು ಹೋರಾಟ, ಸೋಂಕಿತರ ನರಳಾದ ನಡುವೆ ಉತ್ತರ ಪ್ರದೇಶದ ಪೊಲೀಸರ ಅಮಾನವೀಯ ನಡೆಗೆ ಕೋವಿಡ್ ಸೋಂಕಿತ ಜೀವವೊಂದು ಬಲಿಯಾಗಿದೆ.
ಆಂಬುಲೆನ್ಸ್ ಇಲ್ಲ: ಸೋಂಕಿತೆಯ ಮೃತದೇಹ ಬೈಕಲ್ಲಿ ಒಯ್ದ ಮಗ
ಉತ್ತರ ಪ್ರದೇಶದ ಆಗ್ರಾದಲ್ಲಿ ಯುವಕನೋರ್ವ ಆಕ್ಸಿಜನ್ ಕೊರತೆ ನಡುವೆ ತನ್ನ ತಾಯಿಯನ್ನು ಉಳಿಸಲು ಹಲವರ ಬಳಿ ಮನವಿ ಮಾಡಿ ಆಕ್ಸಿಜನ್ ಸಿಲಿಂಡರ್ ಸಂಗ್ರಹ ಮಾಡಿದ್ದ. ಇದನ್ನು ಆರಿತ ಆಗ್ರಾ ಪೊಲೀಸರು ನೇರವಾಗಿ ಬಂದು ಆ ಯುವಕನ ಬಳಿಯಿಂದ ಆಕ್ಸಿಜನ್ ಸಿಲಿಂಡರ್ ಕಸಿದುಕೊಂಡು ತಮ್ಮ ವಾಹನದಲ್ಲಿ ಹಾಕಿ ಹೋಗಿದ್ದಾರೆ.
ಯುಪಿ ಪೊಲೀಸರು ಯುವಕನಿಂದ ಆಕ್ಸಿಜನ್ ಕಸಿದುಕೊಳ್ಳುವ ವೇಳೆ ಯುವ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ಕಾಲಿಗೆ ಬಿದ್ದು ದಯವಿಟ್ಟು ತಾಯಿಯ ಜೀವ ಉಳಿಸಲು ಸಹಕರಿಸಿ ಎಂದು ಬೇಡಿಕೊಂಡಿದ್ದಾರೆ. ಕೈಮುಗಿದು ಬೇಡಿಕೊಂಡರು ಪೊಲೀಸರ ಕಲ್ಲು ಹೃದಯ ಕರಗಲಿಲ್ಲ. ಪರಿಣಾಮ, ಯುವಕನ ತಾಯಿ ಆಮ್ಲಜನಕ ಸಿಗದೆ ಸಾವನ್ನಪ್ಪಿದ್ದಾರೆ. ಈ ವಿಡಿಯೋ ಮನಕಲುಕುವಂತಿದೆ. ಯೂಥ್ ಕಾಂಗ್ರೆಸ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ವಿಡಿಯೋ ಹಂಚಿಕೊಂಡು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆಕ್ಸಿಜನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಯಾರೋ ಕದ್ದೊಯ್ದಿದ್ದಾರೆ ಅನ್ನೋ ಸುದ್ದಿಗಳು ಕೇಳುತ್ತಲೇ ಇದೆ. ಆದರೆ ಉತ್ತರ ಪ್ರದೇಶ ಪೊಲೀಸರೇ ಈ ರೀತಿ ವರ್ತಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.