ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ 50ಕ್ಕೂ ಹೆಚ್ಚು ವಾಹನಗಳ ಟಯರ್‌ಗಳು ನಿಗೂಢವಾಗಿ ಪಂಕ್ಚರ್‌ ಆಗಿವೆ. ರಸ್ತೆಯ ಮೇಲಿನ ಕಬ್ಬಿಣದ ಬೋರ್ಡ್ ಕಾರಣ ಎಂದು ಶಂಕಿಸಲಾಗಿದ್ದು, ಉದ್ದೇಶಪೂರ್ವಕ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. 

ಕೆಲವು ಸ್ಥಳಗಳಲ್ಲಿ ರಸ್ತೆಯಲ್ಲಿ ಮೊಳೆ ಹೊಡೆದು ಬಳಿಕ ವಾಹನ ಪಂಚರ್ ಆದ ನಂತರ ಸಹಾಯ ಮಾಡುವಂತೆ ನಟಿಸಿ ಅಪರಿಚಿತ ಪ್ರಯಾಣಿಕರ ಜೇಬಿಗೆ ಬರೆ ಹಾಕುವಂತಹ ದೃಶ್ಯಗಳನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ. ಆದರೆ ರಿಯಲ್ ಆಗಿಯೂ ಇಂತಹದೊಂದು ಘಟನೆ ಮುಂಬೈ ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ನಡೆದಿದೆ. ಈ ಮುಂಬೈ ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ಸಾಗಿದ 50ಕ್ಕೂ ಹೆಚ್ಚು ವಾಹನಗಳ ಟಯರ್ ಇದ್ದಕ್ಕಿದ್ದಂತೆ ಪಂಕ್ಚರ್ ಆಗಿದೆ. ಇದರಿಂದ ವಾಹನ ಸವಾರರು ನಡುರಸ್ತೆಯಲ್ಲಿ ಸಿಲುಕಿಕೊಂಡು ಪರದಾಡಿದ್ದಾರೆ.

ಡಿಸೆಂಬರ್‌ 29ರ ರಾತ್ರಿ 10 ಗಂಟೆ ಸುಮಾರಿಗೆ ವಾಶಿಂ ಜಿಲ್ಲೆಯ ಮಾಲೆಗಾಂವ್ ಹಾಗೂ ವನೋಜ್ ಟೋಲ್‌ ಪ್ಲಾಝಾ ಬಳಿ ಈ ಘಟನೆ ನಡೆದಿದ್ದು, ಹಲವು ನಾಲ್ಕು ಚಕ್ರದ ವಾಹನಗಳು ಹಾಗೂ ಟ್ರಕ್‌ಗಳು ಪಂಕ್ಚರ್ ಆಗಿ ಸಂಕಷ್ಟಕ್ಕೊಳಗಾದವು ಇದರಿಂದ ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿತಿದ್ದು, ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿದ್ದವು. ಹೀಗೆ ಇಷ್ಟೊಂದು ವಾಹನಗಳು ಪಂಕ್ಚರ್ ಆಗಿರಲು ಕಾರಣ ಏನಿರಬಹುದು ಎಂದು ಪರಿಶೀಲಿಸಿದಾಗ ಇದಕ್ಕೆ ರಸ್ತೆಯ ಮೇಲಿದ್ದ ಒಂದು ಕಬ್ಬಿಣದ ಬೋರ್ಡ್‌ ಎಂದು ತಿಳಿದು ಬಂದಿದೆ. ಈ ಕಬ್ಬಿಣದ ಬೋರ್ಡ್‌ನ ಮೇಲೆ ಸಾಗಿದ ವಾಹನಗಳೆಲ್ಲವವೂ ಪಂಕ್ಚರ್ ಆಗಿದ್ದವು. ಹೀಗೆ ವಾಹನಗಳು ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಪಂಕ್ಚರ್ ಆಗಿದ್ದರಿಂದ ಹೆದ್ದಾರಿಯಲ್ಲಿ ತಕ್ಷಣಕ್ಕೆ ಅಲ್ಲದಿದ್ದರೂ ಬಹಳ ಹೊತ್ತಿನವರೆಗೆ ಯಾರೊಬ್ಬರೂ ಕೂಡ ಪಂಕ್ಚರ್ ಹಾಕುವವರು ಸಿಗದೇ ವಾಹನ ಸವಾರರು ನಡುರಸ್ತೆಯಲ್ಲಿ ಸಿಲುಕಿ ಸಂಕಷ್ಟಕ್ಕೀಡಾಗಿದ್ದರು.

ಹೀಗೆ ಹಲವು ವಾಹನಗಳು ಪಂಕ್ಚರ್‌ ಆಗುವುದಕ್ಕೆ ಕಾರಣವಾದ ಈ ಕಬ್ಬಿಣದ ಬೋರ್ಡ್‌ನ್ನು ಯಾರಾದರೂ ಉದ್ದೇಶಪೂರ್ವಕವಾಗಿಯೇ ಹಾಕಿದ್ರಾ ಅಥವಾ ಅದು ಅಚಾನಕ್ ಆಗಿ ರಸ್ತೆ ಮೇಲೆ ಬಿದ್ದಿತ್ತ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. 

ಹೈಸ್ಪೀಡ್ ಕಾರಿಡಾರ್‌ ಇದಾಗಿದ್ದು, ಇಲ್ಲಿ ಸುರಕ್ಷತೆಯು ಪ್ರಶ್ನಾರ್ಹವಾಗಿರುವ ಸಮಯದಲ್ಲೇ ಇದೊಂದು ಹೊಸ ಘಟನೆ ನಡೆದಿದೆ. ಜೂನ್‌ನಲ್ಲಿ, ಜಲ್ನಾ ಜಿಲ್ಲೆಯ ಸಮೃದ್ಧಿ ಹೆದ್ದಾರಿಯ ಕಡ್ವಾಂಚಿ ಗ್ರಾಮದ ಬಳಿ ಸಮೃದ್ಧಿ ಮಹಾಮಾರ್ಗ್‌ನಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ಆರು ಜನರು ಸಾವನ್ನಪ್ಪಿದರು ಮತ್ತು ನಾಲ್ವರು ಗಾಯಗೊಂಡಿದ್ದರು. ಈ ಸಮೃದ್ಧಿ ಮಹಾಮಾರ್ಗ್ ಮಹಾರಾಷ್ಟ್ರದಲ್ಲಿ ಆರು ಲೇನ್‌ಗಳ 701 ಕಿಮೀ ಉದ್ದದ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಮುಂಬೈ ಮತ್ತು ರಾಜ್ಯದ ಮೂರನೇ ಅತಿ ದೊಡ್ಡ ನಗರ ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ. 55,000 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.