ಅಧಿಕಾರ ಪತನಗೊಂಡ ಬೆನ್ನಲ್ಲೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಒಂದರ ಮೇಲೊಂದರಂತೆ ಆಘಾತ ಎದುರಾಗಿದೆ. ವಿಚಾರಣೆಗೆ ವಶಕ್ಕೆ ಪಡೆದ ಶಿವಸೇನೆ ಸಂಸದ ಸಂಜಯ್ ರಾವತ್‌ರನ್ನು ತಡ ರಾತ್ರಿ ಬಂಧಿಸಲಾಗಿದೆ. ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತದೆ. ಇತ್ತ ಶಿವಸೇನೆ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.

ಮುಂಬೈ(ಆ.01): ಅಕ್ರಮ ಹಣ ವರ್ಗಾವಣೆ ಹಾಗೂ ಭಾರಿ ಅವ್ಯವಾಹರ ಆರೋಪದಡಿಯಲ್ಲಿ ಶಿವಸೇನೆ ನಾಯಕ, ಸಂಸದ ಸಂಜಯ್ ರಾವತ್ ಅರೆಸ್ಟ್ ಆಗಿದ್ದಾರೆ. ನಿನ್ನೆ(ಜು.31) ಇಡಿ ಅಧಿಕಾರಿಗಳು ಸಂಜಯ್ ರಾವತ್ ಮನೆ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದರು. ಬೆಳಗ್ಗೆಯಿಂದ ಸಂಜೆ ವರೆಗೆ ಪರಿಶೀಲನೆ ನೆಡಿಸಿದ್ದ ಇಡಿ ಅಧಿಕಾರಿಗಳು ಸಂಜೆ ವೇಳೆ ಸಂಜಯ್ ರಾವತ್ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ತಡ ರಾತ್ರಿವರೆಗೆ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಸಂಜಯ್ ರಾವತ್ ಬಂಧಿಸಿದ್ದಾರೆ. ಇಂದು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ಇತ್ತ ಶಿವಸೇನೆ ಮುಂಬೈನಲ್ಲಿ ಕೇಂದ್ರ ಬಿಜೆಪಿ ಹಾಗೂ ಇಡಿ ವಿರುದ್ದ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಕೇಂದ್ರ ಸರ್ಕಾರ ಇಡಿ ಬಳಸಿಕೊಂಡು ಶಿವಸೇನೆ ಮುಗಿಸಲು ಯತ್ನಿಸುತ್ತಿದೆ. ಇಂತಹ ಬೆದರಿಕೆಗೆ ಶಿವಸೇನೇ ಯಾವತ್ತೂ ಬೆದರಿಲ್ಲ. ಇಷ್ಟೇ ಅಲ್ಲ ಸಂಜಯ್ ರಾವತ್ ಯಾವುದೇ ತಪ್ಪು ಮಾಡಿಲ್ಲ, ಅಕ್ರಮ ವ್ಯವಾಹರ, ಅಕ್ರಮ ಹಣ ವರ್ಗಾವಣೆ ಮಾಡಿಲ್ಲ ಎಂದು ಶಿವಸೇನೆ ಹೇಳಿದೆ.

ಬೆಳಗ್ಗೆ 11.30ಕ್ಕೆ ಸಂಜಯ್ ರಾವತ್‌ರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ನಿನ್ನೆ ಇಡಿ ದಾಳಿ ಹಾಗೂ ವಿಚಾರಣೆ ವೇಳೆ ಸರಿಯಾಗಿ ಸ್ಪಂದಿಸಿದ ಸಂಜಯ್ ರಾವತ್‌ರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸಂಜಯ್ ರಾವತ್ ಮನೆಯಲ್ಲಿ ದಾಖಲೆ ಇಲ್ಲದ 11.5 ಲಕ್ಷ ರೂಪಾಯಿಯನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 

ಭೂ ಹಗರಣ ಕೇಸ್‌: ಶಿವಸೇನಾ ನಾಯಕ ಸಂಜಯ್‌ ರಾವುತ್‌ ವಶಕ್ಕೆ ಪಡೆದ ಇಡಿ ಅಧಿಕಾರಿಗಳು

ಸಂಜಯ್ ರಾವತ್ ಇಡಿ ವಶಕ್ಕೆ ಪಡೆದ ಬಳಿಕ ರಾವತ್ ಸಹೋದರ ಸುನಿಲ್ ರಾವತ್, ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಸಂಜಯ್ ರಾವತ್‌ರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇಡಿ ಅಧಿಕಾರಿಗಳನ್ನು ಮುಂದಿಟ್ಟು ಬೆದರಿಸುವ ತಂತ್ರ ಮಾಡುತ್ತಿದೆ. ಬಿಜೆಯ ತಪ್ಪುಗಳನ್ನು, ಹುಳುಕುಗಳನ್ನು ನಿರ್ಭೀತಿಯಿಂದ ಮಾತನಾಡುವ ಸಂಜಯ್ ರಾವತ್ ಅಂದರೆ ಬಿಜೆಪಿಗೆ ಭಯ. ಈ ಕಾರಣಕ್ಕೆ ಬಂಧಿಸಲಾಗಿದೆ ಎಂದು ಸುನಿಲ್ ರಾವತ್ ಹೇಳಿದ್ದಾರೆ. ಬಂಧನ ಕುರಿತು ಯಾವುದೇ ದಾಖಲೆ ನೀಡಿಲ್ಲ. ಇದು ಹೇಗೆ ಸಾಧ್ಯ? ಎಂದು ಸುನಿಲ್ ರಾವತ್ ಪ್ರಶ್ನಿಸಿದ್ದಾರೆ.

ದಾಳಿಯ ಬೆನ್ನಲ್ಲೇ ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ರಾವುತ್‌ ‘ಬಾಳಾಸಾಹೇಬ್‌ ಠಾಕ್ರೆ ಅವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಯಾವುದೇ ಅವ್ಯವಹಾರದಲ್ಲೂ ನನ್ನ ಪಾತ್ರ ಏನೂ ಇಲ್ಲ. ನಾನು ಸಾಯಲು ಬೇಕಾದರೂ ಸಿದ್ಧ. ತಲೆಬಾಗಲ್ಲ, ಬಂಧನಕ್ಕೂ ಹೆದರಲ್ಲ. ಏನೇ ಆದರೂ ಶಿವಸೇನೆ ಬಿಡಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಕೂಡ ದಾಳಿಯನ್ನು ‘ರಾಜಕೀಯ ಸೇಡು’ ಎಂದು ಖಂಡಿಸಿದ್ದಾರೆ. ಈ ನಡುವೆ ದಾಳಿ ಸುದ್ದಿ ತಿಳಿದ ಬೆನ್ನಲ್ಲೇ ರಾವುತ್‌ ಮನೆ ಮುಂದೆ ಜಮಾಯಿಸಿದ ಶಿವಸೇನೆ ಕಾರ್ಯಕರ್ತರು, ಇ.ಡಿ ವಿರುದ್ಧ ಘೋಷಣೆ ಕೂಗಿದರು. ಬಂಧನಕ್ಕೂ ವಿರೋಧಿಸಿದರು.

ಶಿವಸೇನಾ ಸಂಸದ ಸಂಜಯ್‌ ರಾವುತ್‌ ನಿವಾಸದ ಮೇಲೆ ಇಡಿ ದಾಳಿ: ಪರಿಶೀಲನೆ