Asianet Suvarna News Asianet Suvarna News

ರಾಹುಲ್ ಗಾಂಧಿಗೆ ಅಗ್ನಿಪರೀಕ್ಷೆ: ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ; ಶಿಕ್ಷೆಗೆ ತಡೆಯಾದ್ರೆ ಅನರ್ಹತೆ ರದ್ದು..!

ರಾಹುಲ್‌ ಶಿಕ್ಷೆಗೆ ತಡೆ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಿರುವ ಪೂರ್ಣೇಶ್‌ ಮೋದಿ, ರಾಹುಲ್‌ ಗಾಂಧಿ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಮಾನಹಾನಿಯಾಗುವಂತೆ ಮಾತಾನಾಡುವುದನ್ನು ಅವರು ಹವ್ಯಾಸ ಮಾಡಿಕೊಂಡಂತಿದೆ ಎಂದು ಹೇಳಿದ್ದಾರೆ.

modi surname row surat court to decide on rahul gandhis plea for stay on conviction today ash
Author
First Published Apr 13, 2023, 9:03 AM IST

ಸೂರತ್‌ (ಏಪ್ರಿಲ್ 13, 2023): ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೂರತ್‌ ನ್ಯಾಯಾಲಯ ಗುರುವಾರ ನಡೆಸಲಿದೆ. ಅಲ್ಲದೇ ಇದೇ ವೇಳೆ ರಾಹುಲ್‌ ಗಾಂಧಿ ಶಿಕ್ಷೆ ತಡೆಗೆ ಶಾಸಕ ಪೂರ್ಣೇಶ್‌ ಮೋದಿ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸಹ ವಿಚಾರಣೆ ನಡೆಸಲಿದೆ. ಒಂದು ವೇಳೆ ಆಕ್ಷೇಪಣಾ ಅರ್ಜಿ ವಿಚಾರಣೆ ಬಳಿಕ ರಾಹುಲ್‌ ಶಿಕ್ಷೆಗೆ ತಡೆ ನೀಡಿದರೆ, ರಾಹುಲ್‌ ಲೋಕಸಭಾ ಸದಸ್ಯತ್ವದ ಅನರ್ಹತೆಯಿಂದ ತಕ್ಷಣಕ್ಕೆ ಪಾರಾಗುತ್ತಾರೆ. ಹೀಗಾಗಿ ಗುರುವಾರದ ಕೋರ್ಟ್‌ ನಡೆ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಏಪ್ರಿಲ್‌ 13ರವರೆಗೆ ರಾಹುಲ್‌ ಗಾಂಧಿಗೆ ಜಾಮೀನು ನೀಡಲಾಗಿದ್ದು, ಅದನ್ನು ವಿಸ್ತರಿಸುತ್ತದೆಯೋ ಇಲ್ಲವೋ ಎಂಬುದು ಕೂಡಾ ಕುತೂಹಲಕಾರಿಯಾಗಿದೆ.

ಈ ನಡುವೆ ರಾಹುಲ್‌ ಶಿಕ್ಷೆಗೆ ತಡೆ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಿರುವ ಪೂರ್ಣೇಶ್‌ ಮೋದಿ, ರಾಹುಲ್‌ ಗಾಂಧಿ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಮಾನಹಾನಿಯಾಗುವಂತೆ ಮಾತಾನಾಡುವುದನ್ನು ಅವರು ಹವ್ಯಾಸ ಮಾಡಿಕೊಂಡಂತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಸಂಸದ ಸ್ಥಾನದಿಂದ ತೆಗೆದು, ಪ್ರಶ್ನೆ ಕೇಳದಂತೆ ಹೆದರಿಸಲಾಗದು: ರಾಹುಲ್‌ ಗಾಂಧಿ; ನಾಳೆ ಮಾನನಷ್ಟ ಮೊಕದ್ದಮೆ ಕೇಸ್‌ ವಿಚಾರಣೆ

ಅಲ್ಲದೇ ಶಿಕ್ಷೆ ನೀಡುವ ಸಮಯದಲ್ಲಿ ನ್ಯಾಯಾಧೀಶರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವುದಕ್ಕೆ ಕಡಿವಾಣ ಹಾಕಬೇಕು. ಹಾಗಾಗಿ ರಾಹುಲ್‌ ಗಾಂಧಿ ಶಿಕ್ಷೆಗೆ ತಡೆ ನೀಡಬಾರದು ಎಂದು ಕೋರಿದ್ದಾರೆ.

25ಕ್ಕೆ ಬನ್ನಿ: ರಾಹುಲ್‌ ಗಾಂಧಿಗೆ ಪಟನಾ ಕೋರ್ಟ್‌ ಸಮನ್ಸ್‌

ಪಟನಾ: ‘ಮೋದಿ ಎಂಬ ಸರ್‌ನೇಮ್‌ ಉಳ್ಳವರೆಲ್ಲ ಕಳ್ಳರು’ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯ ವಿರುದ್ಧ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಹೂಡಿರುವ ಮಾನನಷ್ಟ ಪ್ರಕರಣದ ವಿಚಾರಣೆಗೆ ಬುಧವಾರ ರಾಹುಲ್‌ ಗಾಂಧಿ ಗೈರಾಗಿದ್ದರು. ಅವರ ವಕೀಲರು ‘ರಾಹುಲ್‌ ಸೂರತ್‌ ಕೋರ್ಟ್‌ ವಿಧಿಸಿದ 2 ವರ್ಷಗಳ ಜೈಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯಲ್ಲಿ ಬ್ಯುಸಿಯಿದ್ದಾರೆ. ಹೀಗಾಗಿ ಇನ್ನೊಂದು ದಿನಾಂಕ ನೀಡಬೇಕು’ ಎಂದು ಕೋರಿದರು. ಅದನ್ನು ಪರಿಗಣಿಸಿದ ಕೋರ್ಟ್‌ ಏಪ್ರಿಲ್‌ 12ಕ್ಕೆ ಹಾಜರಾಗುವಂತೆ ಹೊಸ ಸಮನ್ಸ್‌ ಜಾರಿಗೊಳಿಸಿತು. ಏಪ್ರಿಲ್‌ 25ರಂದು ರಾಹುಲ್‌ ಖುದ್ದಾಗಿ ಹಾಜರಾಗಬೇಕು ಎಂದೂ ಇದೇ ವೇಳೆ ಕೋರ್ಟ್‌ ಸ್ಪಷ್ಟವಾಗಿ ಸೂಚಿಸಿತು.

ಇದನ್ನೂ ಓದಿ: ರಾಹುಲ್ ಗಾಂಧಿ ವಿದೇಶದಲ್ಲಿ ಭೇಟಿಯಾಗೋ ಉದ್ಯಮಿಗಳು ಯಾರು..? ಬಿಜೆಪಿ ಪ್ರಶ್ನೆ

Follow Us:
Download App:
  • android
  • ios