'ಕೊರೋನಾ ವಿರುದ್ಧ ನಾವು ಗೆದ್ದಿದ್ದೇವೆ ಎಂದು ಮೋದಿ ಸುಳ್ಳು ಹೇಳಿದ್ದಾರೆ'
ʼಮೋದಿ ತಮಗೆ ಮುಂದಾಲೋಚನೆ ಮತ್ತು ತಿಳುವಳಿಕೆ ಇಲ್ಲದಿರುವುದನ್ನು ಅಡಗಿಸಲು ಕೋವಿಡ್-19 ರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆʼ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಿಡಿ ಕಾರಿದ್ದಾರೆ. ನಿನ್ನೆ ಪ್ರಧಾನಿ ಮೋದಿ ದೇಶದ ಜನರುನ್ನುದ್ದೇಶಿಸಿ ಮಾತನಾಡಿದ್ದರು. ಇದಕ್ಕೆ ತೀರುಗೇಟು ನೀಡಿರುವ ಪ್ರಶಾಂತ್ ಕೀಶೋರ್ ಟ್ವೀಟ್ ಮೂಲಕ ಮೋದಿ ಸರಕಾರದ ವೈಫಲ್ಯಗಳ ಬಗ್ಗೆ ಹೇಳಿದ್ದಾರೆ.
ಕೊಲ್ಕತ್ತಾ(ಏಪ್ರಿಲ್ 21) : ದೇಶದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿವೆ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಬಹುತೇಕ ರಾಜ್ಯಗಳು ಟಫ್ ರೂಲ್ಸ್ಗಳನ್ನು ಜಾರಿ ಮಾಡಿವೆ. ದೇಶದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೋನಾ ಸ್ಥಿತಿಗತಿಯ ಬಗ್ಗೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದರು. ಕೊರೋನಾ ನಿಯಂತ್ರಿಸುವಲ್ಲಿ ಲಾಕಡೌನ್ ನಮ್ಮ ಕೊನೆಯ ಅಸ್ತ್ರವಾಗಬೇಕು ಎಂದು ಮೋದಿ ಹೇಳಿದ್ದರು. ಜೊತೆಗೆ ದೇಶದ ಯುವಶಕ್ತಿ ಕೈ ಜೋಡಿಸಿದರೆ ಕೊರೋನಾವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು ಎಂದು ಹೇಳಿದ್ದರು.
ಪ್ರಧಾನ ಮಂತ್ರಿಯವರ ಭಾಷಣಕ್ಕೆ ತಿರುಗೇಟು ನೀಡಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ʼ ಮೋದಿ ತಮಗೆ ಮುಂದಾಲೋಚನೆ ಮತ್ತು ತಿಳುವಳಿಕೆ ಇಲ್ಲದಿರುವುದನ್ನು ಅಡಗಿಸಲು ಕೋವಿಡ್-19 ರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆʼ ಎಂದು ಹೇಳಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ತಾವು ಕೊರೊನಾ ವಿರುದ್ಧ ಗೆದ್ದಿದ್ದೇವೆ ಎಂದು ಹೇಳಿ ಜನರನ್ನು ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೇಸ್ನ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಮೋದಿ ಸರಕಾರದ ವೈಫಲ್ಯಗಳನ್ನು ಹೇಳಿದ್ದಾರೆ. ʼಮೋದಿ ಸರಕಾರ ಈ ರೀತಿಯಲ್ಲಿ ಸಂದಿಗ್ಧ ಪರಿಸ್ಥಿತಿ ನಿಭಾಯಿಸುತ್ತದೆ:
'
1. ಮುಂದಾಲೋಚನೆ ಮತ್ತು ತಿಳುವಳಿಕೆ ಇಲ್ಲದಿರುವುದನ್ನು ಅಡಗಿಸಲು ಕೋವಿಡ್-19 ರ ಬಗ್ಗೆ ನಿರ್ಲಕ್ಷ್ಯ
2. ಇದ್ದಕ್ಕಿದ್ದಂತೆ ಪರಿಸ್ಥಿತಿಯನ್ನು ಕೈಗೆತ್ತಿಕೊಂಡು – ಸುಳ್ಳುಗಳನ್ನು ಹೇಳಿ ನಾವು ಗೆದ್ದೇವು ಎನ್ನವುದು
3. ಏನಾದರೂ ತೊಂದರೆಗಳಾದರೆ ಅದರ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹೊರಿಸುವುದು
4. ಪರಿಸ್ಥಿತಿ ಸ್ವಲ್ಪ ಸುಧಾರಿಸದರೆ ತಮ್ಮ ಭಕ್ತರ ಜೊತೆ ಅದರ ಶ್ರೇಯಸ್ಸು ತೊಗೊಳೋದುʼ ಎಂದು ಪ್ರಶಾಂತ್ ಕೀಶೋರ್ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣೆ ಕಣ ರಂಗೇರಿದ್ದು ಎಲ್ಲರ ಚಿತ್ತ ಪಶ್ಚಿಮ ಬಂಗಾಳದತ್ತ ತಿರುಗಿದೆ.ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಈಗಾಗಲೇ 5ನೇ ಹಂತದ ಚುನಾವಣೆ ಮುಕ್ತಾಯವಾಗಿದೆ. 6ನೇ ಹಂತದ ಚುನಾವಣೆಯ ಪ್ರಚಾರದ ಅವಧಿ ಅಂತ್ಯಗೊಂಡಿದ್ದು ನಾಳೆ (ಏಪ್ರಿಲ್ 22) ರಂದು ಪಶ್ಚಿಮ ಬಂಗಾಳದ 43 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ನರೇಂದ್ರ ಮೋದಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಪಾಲ್ಗೊಂಡಿದ್ದಾರೆ. ತೃಣಮೂಲ ಕಾಂಗ್ರೇಸ್ನ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಕೀಶೋರ್ ಈಗ ಬಿಜೆಪಿ ಮತ್ತು ಮೋದಿ ಸರ್ಕಾರದ ವೈಫಲ್ಯದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ. ಕೆಲವು ರಾಜ್ಯಗಳಲ್ಲಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿದ್ದರೆ ಕೆಲವಡೆ ಆಕ್ಸಿಜನ್ ತೀವ್ರ ಕೊರತೆ ಉಂಟಾಗಿದೆ. ಇನ್ನೂ ಕೊರೊನಾದಿಂದ ಮೃತಪಟ್ಟವರ ಶವಗಳ ಅಂತ್ಯಕ್ರಿಯಗಾಗಿ ಚಿತಾಗಾರದ ಬಳಿ ದಿನಗಟ್ಟಲೆ ಜನರು ಕಾಯತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ವರದಿ ಮಾಡಿವೆ. ನಿನ್ನೆ ( ಏಪ್ರಿಲ್ 20) ಭಾರತದಲ್ಲಿ 2,94,355 ಹೊಸ ಪ್ರಕರಣಗಳು ದಾಖಲಾಗಿವೆ. ಪಶ್ಚಿಮ ಬಂಗಾಳದಲ್ಲೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ರಾಜ್ಯದಲ್ಲಿ ನಿನ್ನೆ (ಏಪ್ರಿಲ್ 20) 9,819 ಹೊಸ ಪ್ರಕರಣಗಳು ದಾಖಲಾಗಿದ್ದು 46 ಜನ ಕೊರೊನಾಗೆ ಬಲಿಯಾಗಿದ್ದಾರೆ.