10ನೇ ಸುತ್ತಿನ ಮಾತುಕತೆ; ರೈತರಿಗೆ ಹೊಸ ಆಫರ್ ನೀಡಿದ ಕೇಂದ್ರ ಸರ್ಕಾರ!
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದೀಗ ರೈತರ ಜೊತೆಗೆ ಕೇಂದ್ರ 10ನೇ ಸುತ್ತಿನ ಮಾತುಕತೆ ನಡೆಸಿದೆ. ಈ ಮಾತುಕತೆಯ ಪ್ರಮುಖ ಅಂಶಗಳು ಇಲ್ಲಿವೆ.
ನವದೆಹಲಿ(ಜ.20): ಕೃಷಿ ಕಾಯ್ದೆ ಹಿಂಪಡೆಯಲೇಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಇದರ ಜೊತೆಗೆ ರೈತರ ಜೊತೆಗಿನ ಮಾತುಕತೆ ಕೂಡ ನಡೆಯತ್ತಿದೆ. ಇಂದು(ಜ.20) 10ನೇ ಸುತ್ತಿನ ಮಾತುಕತೆ ನಡೆಸಲಾಗಿದೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರ 1.5 ವರ್ಷಗಳ ಕಾಲ ಕೃಷಿ ಕಾಯ್ದೆ ತಡೆಹಿಡಿಯಲು ಬದ್ಧವಾಗಿದೆ ಎಂದಿದೆ.
ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ : ಫುಲ್ ಟ್ರಾಫಿಕ್ ಜಾಮ್
ರೈತರ ಸಂಘಟನೆಗಳ ಜೊತೆಗಿನ ಮಾತುಕತೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಹೊಸ ಆಫರ್ ನೀಡಿದ್ದಾರೆ. ಕೃಷಿ ಕಾಯ್ದೆ ಜಾರಿಗೆ ತರುವುದನ್ನು ಕೇಂದ್ರ ಒಂದೂವರೆ ವರ್ಷ ತಡೆ ಹಿಡಿಯಲು ಸಿದ್ದವಿದೆ ಎಂದಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ 2 ತಿಂಗಳ ಕಾಲ ಕೃಷಿ ಕಾಯ್ದೆ ಜಾರಿಗೆ ತರುವುದು ಬೇಡ ಎಂದು ಕೇಂದ್ರಕ್ಕೆ ಸೂಚಿಸಿತ್ತು. ಇಷ್ಟೇ ಅಲ್ಲ ಸಮಿತಿ ರಚಿಸಿ, ಕಾಯ್ದೆಯ ಸಾಧಕ ಬಾಧಕ ವರದಿ ನೀಡುವಂತೆ ಸೂಚಿಸಿತ್ತು.
ರೈತರಲ್ಲಿರುವ ಗೊಂದಲ ನಿವಾರಿಸಲು ಕೇಂದ್ರ ಸರ್ಕಾರ 1.5 ವರ್ಷಗಳ ಕಾಲ ಕಾಯ್ದೆ ಜಾರಿಗೆ ತರುವುದನ್ನು ತಡೆ ಹಿಡಿಯಲಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್ಗೆ ಅಫಿದವಿತ್ ಸಲ್ಲಿಸಲಿದೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ ಎಂದು ರೈತ ಸಂಘಟನೆಗಳ ಮುಖಂಡರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಕಾಯ್ದೆ ಹಿಂಪಡೆಯಲು ಸಾಧ್ಯವಿಲ್ಲ, ತಿದ್ದುಪಡಿಗೆ ಕೇಂದ್ರ ಸಿದ್ಧವಿದೆ ಎಂದಿದೆ.
ಮುಂದಿನ ಸುತ್ತಿನ ಮಾತುಕತೆ ಜನವರಿ 22ಕ್ಕೆ ನಿಗದಿ ಪಡಿಸಲಾಗಿದೆ.