ಸಚಿವರಿಗೆ ಕೊಕ್?: ಸಚಿವರ ರಾಜೀನಾಮೆಗೆ ಕಾರಣಗಳೇನು?
* ಪ್ರಧಾನಿ ಮೋದಿ ನೂತನ ತಂಡ
* ರಾಜೀನಾಮೆ ನೀಡಿದ ಸಚಿವರು ಮತ್ತು ಕಾರಣಗಳು
* ಬದಲಾಯ್ತು ಹಲವರ ಖಾತೆ
ನವದೆಹಲಿ(ಜು.08): ಬಹುನಿರೀಕ್ಷಿತ ಕೇಂದ್ರ ಮಂತ್ರಿ ಮಂಡಲದ ವಿಸ್ತರಣೆ ಮತ್ತು ಪುನಾರಚನೆ ಬುಧವಾರ ಭರ್ಜರಿಯಾಗಿಯೇ ನೆರವೇರಿದೆ. 2019ರಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ತಮ್ಮ ಮಂತ್ರಿ ಮಂಡಲಕ್ಕೆ ಭರ್ಜರಿ ಸರ್ಜರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, 43 ನೂತನ ಸಚಿವರನ್ನು ತಮ್ಮ ಮಂತ್ರಿ ಬಳಗಕ್ಕೆ ಸೇರಿಸಿಕೊಂಡಿದ್ದಾರೆ. ಈ ಪೈಕಿ 36 ಜನರು ಹೊಸದಾಗಿ ಸಂಪುಟ ಸೇರಿದ್ದರೆ, 7 ಸಚಿವರಿಗೆ ಪದನ್ನೋತಿ ನೀಡಲಾಗಿದೆ. ಈ ಪುನಾರಚನೆ ವೇಳೆ ಕರ್ನಾಟಕದ ಒಬ್ಬ ಸಚಿವರನ್ನು ಕೈಬಿಟ್ಟು, ಹೊಸದಾಗಿ ನಾಲ್ವರಿಗೆ ಅವಕಾಶ ಮಾಡಿಕೊಡುವ ಮೂಲಕ, 25 ಸಂಸದರನ್ನು ಆರಿಸಿ ಕಳಿಸಿದ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ.
ಮತ್ತೊಂದೆಡೆ ಮಂತ್ರಿಮಂಡಲ ಪುನಾರಚನೆಗೂ ಮುನ್ನ ಅತ್ಯಂತ ಅಚ್ಚರಿಯ ರೀತಿಯಲ್ಲಿ 12 ಹಿರಿ-ಕಿರಿಯ ಸಚಿವರ ರಾಜೀನಾಮೆಯನ್ನೂ ಪಡೆದುಕೊಳ್ಳುವ ಮೂಲಕ, ಕೆಲಸ ಮಾಡುವವರಿಗೆ ಮಾತ್ರವೇ ಸರ್ಕಾರದಲ್ಲಿ ಅವಕಾಶ ಎಂಬ ಸಂದೇಶ ರವಾನಿಸಿದ್ದಾರೆ.
ಸಚಿವರ ರಾಜೀನಾಮೆಗೆ ಕಾರಣಗಳೇನು?
- ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಥಾವರ್ ಚಂಚ್ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ
- ಕೊರೋನಾ ಅಲೆ ಸಮರ್ಥವಾಗಿ ನಿಭಾಯಿಸಲು ವಿಫಲವಾದ ಕಾರಣಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರಿಂದ ರಾಜೀನಾಮೆ.
- ಕೊರೋನಾ ಸಾಂಕ್ರಾಮಿಕದ ವೇಳೆ ಕಾರ್ಮಿಕರ ವಲಸೆ ಮತ್ತು ನಿರುದ್ಯೋಗ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದ ಕಾರಣಕ್ಕೆ ಸಂತೋಷ್ ಗಂಗ್ವಾರ್ ಅವರ ತಲೆದಂಡವಾಗಿದೆ.
- ರಮೇಶ್ ಪೋಖ್ರಿಯಲ್ ಏಪ್ರಿಲ್ನಲ್ಲಿ ಕೋವಿಡ್ ಸೋಂಕಿತರಾಗಿದ್ದರು. ಅನಾರೋಗ್ಯದ ಕಾರಣ ನೀಡಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
- ರವಿಶಂಕರ್ ಪ್ರಸಾದ್ ನೂತನ ಐಟಿ ನಿಯಮ ಜಾರಿ ಆದಾಗಿನಿಂದಲೂ ಟ್ವೀಟರ್ ಹಾಗೂ ಇತರ ತಂತ್ರಜ್ಞಾನ ಸಂಸ್ಥೆಗಳ ಜೊತೆ ಸಂಘರ್ಷ ನಡೆಸುತ್ತಿದ್ದಾರೆ. ಇದು ಅವರ ರಾಜೀನಾಮೆಗೆ ಕಾರಣ ಇದ್ದಿರಬಹುದು ಎನ್ನಲಾಗಿದೆ.
- ಪ್ರಕಾಶ್ ಜಾವಡೇಕರ್ ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಅವರು ಸರ್ಕಾರದ ವಕ್ತಾರರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿರಬಹುದು ಎನ್ನಲಾಗಿದೆ.
- ಕಳಪೆ ಪ್ರದರ್ಶ ತೋರಿದ ಇನ್ನು ಕೆಲವು ಸಚಿವರನ್ನು ಸಂಪಟದಿಂದ ಕೈಬಿಟ್ಟು ಅವರ ಜಾಗಕ್ಕೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.