ಕೇರಳದ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣನ್ ಅವರ ಮೊಬೈಲ್ ಸಂಖ್ಯೆ ಬಳಸಿ 'ಮಲ್ಲು ಹಿಂದೂ ಆಫೀಸರ್ಸ್' ಮತ್ತು 'ಮಲ್ಲು ಮುಸ್ಲಿಂ ಆಫೀಸರ್ಸ್' ಎಂಬ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಗೋಪಾಲಕೃಷ್ಣನ್ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

ತಿರುವನಂತಪುರ: ಕೇರಳದ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣನ್ ಅವರ ಮೊಬೈಲ್ ವಾಟಾಪ್ ನಂಬರ್ ಬಳಸಿಕೊಂಡು, ಹಿಂದೂ ಐಎಎಸ್ ಮತ್ತು ಮುಸ್ಲಿಂ ಐಎಎಸ್ ಅಧಿಕಾರಿಗಳ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಿರುವ ವಿಷಯ ಬೆಳಕಿಗೆ ಬಂದಿದೆ. 'ಮಲ್ಲು ಹಿಂದೂ ಆಫೀಸರ್ಸ್' ಮತ್ತು 'ಮಲ್ಲು ಮುಸ್ಲಿಂ ಆಫೀಸರ್ಸ್' ಎಂಬುವೇ ಆ ವಾಟ್ಸಾಪ್ ಗ್ರೂಪ್‌ಗಳು. ಆದರೆ ಈ ಕುರಿತು ನನಗೇ ಮಾಹಿತಿ ಇಲ್ಲ. ಇಂಥ ಗ್ರೂಪ್ ರಚನೆ ಹಿಂದೆ ನನ್ನ ಕೈವಾಡವೂ ಇಲ್ಲ. ಮೊಬೈಲ್ ನಂಬರನ್ನು ಯಾರೋ ಹ್ಯಾಕ್
ಮಾಡಿರುವ ಶಂಕೆ ಇದೆ ಎಂದು ಸ್ಪಷ್ಟಪಡಿಸಿರುವ ಗೋಪಾಲಕೃಷ್ಣನ್, ಈ ಕುರಿತು ತನಿಖೆ ಕೋರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಈ ಕೃತ್ಯದ ಹಿಂದಿನ ಶಕ್ತಿಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆ ಐಎಎಸ್ ಅಧಿಕಾರಿ ವಲಯದಲ್ಲಿ ಸಾಕಷ್ಟು ಸಕ್ರಿಯ ವಾಟ್ಸಾಪ್ ಗ್ರೂಪ್‌ಗಳು ಇವೆಯಾದರೂ, ಧರ್ಮದ ಆಧಾರದಲ್ಲಿ ಗ್ರೂಪ್ ರಚನೆ ಇದೇ ಮೊದಲು. ಇದು ಆತಂಕಕಾರಿ ಬೆಳವಣಿಗೆ. ಈ ಕುರಿತು ಸರ್ಕಾರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕೇರಳ ಸಚಿವ ಪಿ.ರಾಜೀವ್ ಹೇಳಿದ್ದಾರೆ.

ಏನಿದು ಪ್ರಕರಣ?
3 ದಿನಗಳ ಹಿಂದೆ ಗೋಪಾಲಕೃಷ್ಣನ್ ಅವರ ವಾಟ್ಸಾಪ್ ಮೊಬೈಲ್ ನಂಬರ್ ಬಳಸಿಕೊಂಡು, 'ಮಲ್ಲು ಹಿಂದೂ ಆಫೀಸರ್ಸ್' ಮತ್ತು 'ಮಲ್ಲು ಮುಸ್ಲಿಂ ಆಫೀಸರ್ಸ್' ಹೆಸರಲ್ಲಿ ವಾಟ್ಸಾಪ್ ಗ್ರೂಪ್ ಸೃಷ್ಟಿಯಾಗಿದೆ. ಎರಡೂ ಗುಂಪುಗಳಿಗೂ ಗೋಪಾಲಕೃಷ್ಣನ್ ಅವರೇ ಅಡ್ಮಿನ್ ಎಂದು ತೋರಿಸಲಾಗಿದೆ. ಈ ಬಗ್ಗೆ ಅನ್ಯರು ದೂರಿದಾಗ ವಿಷಯ ಅವರ ಗಮನಕ್ಕೆ ಬಂದಿದೆ.