ಲಿವರ್ ಕೊಡಲು ಒಪ್ಪಿದ ಅಪ್ರಾಪ್ತ ಮಗ, ಕೋರ್ಟ್ನಲ್ಲಿ ವಿಚಾರಣೆಗೂ ಮುನ್ನವೇ ಸಾವು ಕಂಡ ತಂದೆ!
ಉತ್ತರ ಪ್ರದೇಶದ ಅಪ್ರಾಪ್ತ ಬಾಲಕನೊಬ್ಬ ತೀವ್ರವಾಗಿ ಅಸ್ವಸ್ಥರಾಗಿದ್ದ ತನ್ನ ತಂದೆಗೆ ಲಿವರ್ ದಾನ ಮಾಡಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಆದರೆ ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ನ ಆದೇಶದ ಮೊದಲು ಅಪ್ರಾಪ್ತ ಬಾಲಕನ ತಂದೆ ಸಾವು ಕಂಡಿದ್ದಾರೆ. ಈ ಪ್ರಕರಣವು ಜೀವಂತ ಅಪ್ರಾಪ್ತ ವಯಸ್ಕರು ಅಂಗಾಂಗಗಳನ್ನು ದಾನ ಮಾಡಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಚರ್ಚೆಯನ್ನು ಸಹ ಹುಟ್ಟುಹಾಕಿದೆ.
ನವದೆಹಲಿ (ಸೆ.15): ನನ್ನ ತಂದೆ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ತುರ್ತಾಗಿ ಅವರಿಗೆ ಲಿವರ್ ಜೋಡಣೆ ಆಗಬೇಕಿದೆ. ನನ್ನ ಲಿವರ್ ಅನ್ನು ತಂದೆಗೆ ನೀಡಲು ಸಿದ್ಧನಿದ್ದೇನೆ. ಆದರೆ, ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ ಎಂದು ನಿಯಮವಿದೆ. ಆದಷ್ಟು ಶೀಘ್ರವಾಗಿ ಅನುಮತಿ ನೀಡಿ ಎಂದು ಇತ್ತೀಚೆಗಷ್ಟೇ ಅಪ್ರಾಪ್ತ ಬಾಲಕನೊಬ್ಬ ಸುಪ್ರೀ ಕೋರ್ಟ್ ಕದ ತಟ್ಟಿದ್ದ. ಆದರೆ, ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸ ತೀರ್ಪು ನೀಡುವ ಮುನ್ನವೇ ಅವರ ತಂದೆ ಸಾವು ಕಂಡಿದ್ದಾರೆ. ಇದರ ನಡುವೆಯೇ ಜೀವಂತ ಅಪ್ರಾಪ್ತ ವಯಸ್ಕರು ಅಂಗಾಂಗಗಳನ್ನು ದಾನ ಮಾಡಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಚರ್ಚೆಯನ್ನು ಸಹ ಆರಂಭವಾಗಿದೆ. ಈ ಸಂಬಂಧ ಬುಧವಾರ ಸುಪ್ರೀಂ ಕೋರ್ಟ್ಗೂ ಮಾಹಿತಿ ನೀಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ, ಪ್ರಕರಣದ ವಿಚಾರಣೆ ಮಾಡುತ್ತಿದ್ದ ನ್ಯಾಯಮಮೂರ್ತಿ ಕೌಲ್ ಹಾಗೂ ಅಭಯ್ ಓಕಾ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ. ಅಪ್ರಾಪ್ತ ಬಾಲಕ ಶುಕ್ರವಾರ ಈ ವಿಚಾರವಾಗಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದ. ತಕ್ಷಣವೇ ಇದನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಿಲಿತ್ ಅವರ ಗಮನಕ್ಕೆ ತರಲಾಗಿತ್ತು. ಸಾವು-ಬದುಕಿನ ಪ್ರಶ್ನೆ ಆಗಿದ್ದ ಕಾರಣಕ್ಕೆ ವಿಷಯದ ಗಂಭೀರತೆ ಅರಿತು ತಕ್ಷಣವೇ ಈ ಪ್ರಕರಣವನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದರು.
ತಂದೆಗೆ ತನ್ನ ಯಕೃತ್ತನ್ನು ದಾನ ಮಾಡುವ ಇಚ್ಛೆಯನ್ನು ಮಗ ಸ್ವಯಂಪ್ರೇರಣೆಯಿಂದ ವ್ಯಕ್ತಪಡಿಸಿದ್ದಾನೆ ಎಂದು ಪೀಠ ಹೇಳಿತ್ತು. ಆದರೆ ಆತ ಅಪ್ರಾಪ್ತನಾಗಿರುವುದರಿಂದ ಸಂಬಂಧಿತ ಕಾನೂನಿನಡಿಯಲ್ಲಿ ಹಾಗೆ ಮಾಡಲು ಅವಕಾಶವಿಲ್ಲ. ಈ ವಿಚಾರದಲ್ಲಿ ನ್ಯಾಯಾಲಯ ಯುಪಿ ಸರ್ಕಾರಕ್ಕೆ (Uttar Pradesh) ನೋಟಿಸ್ ಜಾರಿ ಮಾಡಿದ್ದು, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಏತನ್ಮಧ್ಯೆ, ಲಿವರ್ ದಾನ ಮಾಡಬಹುದೇ ಎಂದು ನೋಡಲು ಅಪ್ರಾಪ್ತ ಬಾಲಕನ ಪ್ರಾಥಮಿಕ ಪರೀಕ್ಷೆಯನ್ನು ಸಂಬಂಧಪಟ್ಟ ಆಸ್ಪತ್ರೆಯಲ್ಲಿ ನಡೆಸಬೇಕು ಎಂದು ನ್ಯಾಯಾಲಯ ಹೇಳಿತ್ತು. ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ತಾಯಿ ಕೂಡ ಯಕೃತ್ತು ನೀಡಲು ಸಿದ್ಧರಾಗಿದ್ದರು ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಯಕೃತ್ತು ದಾನ ಮಾಡಲು ಯೋಗ್ಯವಾಗಿಲ್ಲ ಎಂದು ಬಂದಿತ್ತು.
ಭೂಮಿ ಮೇಲೆ ಬದುಕಿದ್ದು ಬರೀ 16 ತಿಂಗಳು, ಅಂಗಾಂಗ ದಾನದಿಂದ ಇಬ್ಬರ ಬಾಳಿಗೆ ಬೆಳಕಾಯ್ತು!
ಅಪ್ರಾಪ್ತರ ಅಂಗಾಂಗ ದಾನದ ಬಗ್ಗೆ ಚರ್ಚೆ: ಈ ಪ್ರಕರಣವು ಜೀವಂತ ಅಪ್ರಾಪ್ತ ಬಾಲಕರು ಅಂಗಾಂಗಗಳನ್ನು ದಾನ ಮಾಡಲು ಅನುಮತಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಸ್ತುತ ಭಾರತದಕಾನೂನಿನ ಪ್ರಕಾರ, ಯಾವುದೇ ಅಪ್ರಾಪ್ತ ವಯಸ್ಕನು ಸಾಯುವ ಮೊದಲು ತನ್ನ ದೇಹದ ಅಥವಾ ಅಂಗಾಂಶದ ಯಾವುದೇ ಭಾಗವನ್ನು ದಾನ ಮಾಡುವಂತಿಲ್ಲ. ಆದರೆ, 17 ವರ್ಷದ ಬಾಲಕ ಈ ವಿಚಾರವಾಗಿಯೇ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದ. ನನ್ನ ತಂದೆಯ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಆದಷ್ಟು ಶೀಘ್ರವಾಗಿ ಲಿವರ್ (Liver Transplant) ಮರು ಜೋಡಣೆಯ ಶಸ್ತ್ರಚಿಕಿತ್ಸೆ ಆಗಬೇಕಿದೆ. ನನ್ನ ತಂದೆಗೆ ಲಿವರ್ ನೀಡಲು ನಾನು ಸಿದ್ಧನಿದ್ದೇನೆ. ಈ ವಿಚಾರವಾಗಿ ಕೋರ್ಟ್ ನನಗೆ ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಬರೆದಿದ್ದ.
ಅಂಗಾಂಗ ದಾನ ಮಾಡಿದ ಮೊದಲ ಸಿಎಂ ಬೊಮ್ಮಾಯಿ: ದೇಶಕ್ಕೆ ಮಾದರಿಯಾದ ನಡೆ
ಅನುಮತಿ ನಿರಾಕರಿಸಿತ್ತು ಬಾಂಬೆ ಹೈಕೋರ್ಟ್: ಕೆಲ ವರ್ಷಗಳ ಹಿಂದೆ ಬಾಂಬೆ ಹೈಕೋರ್ಟ್ನಲ್ಲೂ (Bombay High Court) ಇದೇ ರೀತಿಯ ಪ್ರಕರಣ ವಿಚಾರಣೆಗೆ ಬಂದಿತ್ತು. ಅಂದು 16 ವರ್ಷದ ಬಾಲಕಿಯೊಬ್ಬಳು ಕೋರ್ಟ್ ಮೆಟ್ಟಿಲೇರಿದ್ದಳು. ತಂದೆಗೆ ಲಿವರ್ನ ಸಮಸ್ಯೆ ಕಾಡುತ್ತಿದೆ. ನನ್ನ ಲಿವರ್ನ ಒಂದು ಪಾರ್ಟ್ಅನ್ನು ಅವರಿಗೆ ನೀಡಲು ನಾನು ಸಿದ್ಧನಿದ್ದೇನೆ. ಆದರೆ, ನಾನು ಅಪ್ರಾಪ್ತೆ ಎನ್ನುವ ಕಾರಣಕ್ಕೆ ವೈದ್ಯರು ನನ್ನ ಲಿವರ್ಅನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಈ ಬಗ್ಗೆ ನಾವು ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸರ್ಕಾರವೇ ತನ್ನ ನಿರ್ಧಾರ ಮಾಡಲಿ ಎಂದು ಹೇಳಿ ನಿರಾಕರಣೆ ಮಾಡಿತ್ತು.