ಪಹಲ್ಗಾಂನಲ್ಲಿ 26 ಪ್ರವಾಸಿಗರ ಹತ್ಯೆ ಬಳಿಕ ಉಗ್ರರು ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಎನ್ಐಎ ತನಿಖೆ ಬಹಿರಂಗಪಡಿಸಿದೆ. ಸ್ಥಳೀಯ ಸೇವಾ ಪೂರೈಕೆದಾರರೊಬ್ಬರು ಈ ಮಾಹಿತಿಯನ್ನು ಒದಗಿಸಿದ್ದಾರೆ. ಲಷ್ಕರ್-ಎ-ತೊಯ್ದಾ ಕಮಾಂಡರ್ ಸುಲೈಮಾನ್ ಸೇರಿದಂತೆ ಹಲವು ಉಗ್ರರನ್ನು ಹುಡುಕಲಾಗುತ್ತಿದೆ.

ಶ್ರೀನಗರ: ಏ.22ರಂದು ಪಹಲ್ಲಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಕೊಂದ ಬಳಿಕ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮ ಪಟ್ಟರು ಎಂಬ ಮಾಹಿತಿಯನ್ನು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.

Add Asianetnews Kannada as a Preferred SourcegooglePreferred

ಸ್ಥಳೀಯ ಸೇವಾ ಪೂರೈಕೆದಾರನೊಬ್ಬ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಉಗ್ರರನ್ನು ಎದುರುಗೊಂಡ ಆ ವೇಳೆ ಅವರು ಆಗಸದಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದನ್ನು ಪ್ರತ್ಯಕ್ಷವಾಗಿ ಕಂಡಿದ್ದಾಗಿ ತನಿಖಾ ಸಂಸ್ಥೆಗೆ ಮಾಹಿತಿ ಒದಗಿಸಿದ್ದಾನೆ. ಈಗಾಗಲೇ ಎನ್‌ಐಎ ಬಂಧಿಸಿರುವ ಇಬ್ಬರು ಸ್ಥಳೀಯರು ಉಗ್ರರಿಗೆ ಅಗತ್ಯ ವ್ಯವಸ್ಥೆಗಳ ಮಾಡುತ್ತಿದ್ದರು. ಘಟನೆ ನಡೆಯುವ ವೇಳೆ ಉಗ್ರರ ವಸ್ತುಗಳನ್ನು ಇವರೇ ಕಾಯುತ್ತಿದ್ದರು ಎಂದೂ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾನೆ.

ಪ್ರಕರಣದಲ್ಲಿ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಲಷ್ಕರ್-ಎ-ತೊಯ್ದಾದ ಕಮಾಂಡರ್‌ಸುಲೈಮಾನ್ ಕೂಡ ಸೇರಿದ್ದಾನೆ. ಈತ ಝಡ್ ಮೋರ್ಡ್ ಸುರಂಗ ನಿರ್ಮಾಣ ಸಂಸ್ಥೆಯ ಮೇಲಿನ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಇತರ 3 ಉಗ್ರ ಕೃತ್ಯಗಳ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಹಳೆಯ ಶಸ್ತ್ರಾಸ್ತ್ರಗಳಿಂದ ಇಂದಿನ ಯುದ್ಧ ಗೆಲ್ಲಲಾಗದು: ಸಿಡಿಎಸ್

ನವದೆಹಲಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಸೇನಾ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ನಡುವೆ 'ಹಳೆಯ ಶಸ್ತ್ರಾಸ್ತ್ರಗಳಿಂದ ಆಧುನಿಕ ಯುದ್ಧ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಭವಿಷ್ಯವನ್ನು ಕೇಂದ್ರೀಕರಿಸಿ ಶಸ್ತ್ರಾಸ್ತ್ರ ಸಿದ್ಧಪಡಿಸುವ ಅಗತ್ಯವಿದೆ' ಎಂದು ರಕ್ಷಣಾ ಪಡೆ ಮುಖ್ಯಸ್ಥ ಜ. ಅನಿಲ್ ಚೌಹಾಣ್ ಹೇಳಿದರು. ರಕ್ಷಣಾ ಕಾರ್ಯಗಾರದಲ್ಲಿ ಭಾಗಿಯಾಗಿ ಮಾತನಾಡಿದ ಸಿಡಿಎಸ್, 'ನಿನ್ನೆಯ ಶಸ್ತ್ರಾಸ್ತ್ರಗಳು ಇಂದಿನ ಯುದ್ಧ ಗೆಲ್ಲಿಸುವುದಿಲ್ಲ. ಇಂದಿನ ಯುದ್ಧಕ್ಕೆ ನಾಳಿನ ತಂತ್ರಜ್ಞಾನದ ಅಗತ್ಯವಿದೆ. ನಮ್ಮ ಕಾರ್ಯಾಚರಣೆಗಳಿಗೆ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳ ಅವಲಂಬಿತವಾಗಿರಲು ಸಾಧ್ಯವಿಲ್ಲ. ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆ ನಮ್ಮ ಸಿದ್ದತೆ ದುರ್ಬಲಗೊಳಿಸುತ್ತದೆ' ಎಂದರು.