ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಚುರುಕು ನೀಡುತ್ತಿದ್ದಂತೆ, ತಮಿಳುನಾಡು ಸರ್ಕಾರವು ಕಾನೂನು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಈ ವಿಚಾರವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಚೆನ್ನೈ: ಅತ್ತ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಗೆ ಜಾರಿಗೆ ಚುರುಕು ನೀಡಿರುವ ಹೊತ್ತಿನಲ್ಲೇ, ಇತ್ತ ಯೋಜನೆ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್, ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪ ಎತ್ತುವಂತಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಡಿಎಂಕೆ ನಾಯಕ ಕೆ.ಎನ್. ನೆಹರು ‘ಡಿಕೆಶಿ ನೀಡಿರುವ ಹೇಳಿಕೆ ಅವರ ದುರಂಹಕಾರದ ಮನೋಭಾವ ತೋರಿಸುತ್ತದೆ. ತಮಿಳುನಾಡಿನಲ್ಲಿ ದುರ್ಬಲ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕೂಡ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದರಿಂದ ಯಾವುದೇ ವಿರೋಧ ಇರುವುದಿಲ್ಲ ಎಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.
ಅದರ ಬೆನ್ನಲ್ಲೇ ಸೋಮವಾರ ಸಚಿವರು, ಹಿರಿಯ ಅಧಿಕಾರಿಗಳು, ವಕೀಲರ ಜೊತೆಗೆ ಸಭೆ ನಡೆಸಿದ ವಿಜಯ್, ಕರ್ನಾಟದಕ ಪ್ರಸ್ತಾವದ ಬಗ್ಗೆ ವಿಸ್ತೃತ ಸಮಾಲೋಚನೆ ಬಳಿಕ ಕಾನೂನು ಹೋರಾಟ ಚುರುಕುಗೊಳಿಸಲುನಿರ್ದೇಶನ ನೀಡಿದರು.
ವಿರೋಧ ಏಕೆ:
ಕರ್ನಾಟಕವು ಕುಡಿಯುವ ನೀರಿನ ಉದ್ದೇಶಕ್ಕೆ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಲು ಮುಂದಾಗಿದೆ. ತಮಿಳುನಾಡು ಈ ಯೋಜನೆಗೆ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದು, ಇದರಿಂದ ತನ್ನ ರೈತರಿಗೆ ಸಮಸ್ಯೆಯಾಗಲಿದೆ ಎಂದು ವಾದಿಸುತ್ತಾ ಬಂದಿತ್ತು.
ಮೇಕೆದಾಟು ಯೋಜನೆ ವಿಚಾರದಲ್ಲಿ ಡಿಎಂಕೆ ಕೀಳು ರಾಜಕೀಯ: ಕಾಂಗ್ರೆಸ್
ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರವೇ ಇದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ವಿಚಾರವಾಗಿ ಅಹಂಕಾರದ ಹೇಳಿಕೆ ನೀಡುತ್ತಿದ್ದಾರೆಂಬ ಡಿಎಂಕೆ ಆರೋಪಕ್ಕೆ ಕಾಂಗ್ರೆಸ್ ಸಂಸದ ಬಿ.ಮಾಣಿಕಂ ಠಾಗೋರ್ ಕಿಡಿಕಾರಿದ್ದಾರೆ. ಮೇಕೆದಾಟು ವಿಚಾರದಲ್ಲಿ ಡಿಎಂಕೆ ಕೀಳು ರಾಜಕೀಯ ಮಾಡುತ್ತಿದೆ. ನಾವು 20 ದಿನದ ಹಿಂದೆ ಡಿಎಂಕೆ ಜತೆಗೇ ಇದ್ದೆವು. ಆಗ ಯಾವುದೇ ಆರೋಪಗಳಿರಲಿಲ್ಲ. ಇದೀಗ ದಿಢೀರ್ ಆಗಿ ಕಾಂಗ್ರೆಸ್ ವಿರುದ್ಧ ಟೀಕೆ ಆರಂಭಿಸಿದೆ. ಇದು ಕೀಳುಮಟ್ಟದ ರಾಜಕೀಯ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ನಾಯಕರು ಅವರ ಜನರಿಗಾಗಿ ಹೋರಾಟ ನಡೆಸುತ್ತಿದ್ದಾರೆ, ತಮಿಳುನಾಡು ಕಾಂಗ್ರೆಸ್ ಯಾವತ್ತಿಗೂ ರಾಜ್ಯದ ರೈತರ ಪರ ನಿಲ್ಲಲಿದೆ. ಕಾವೇರಿ ಹಕ್ಕು ರಕ್ಷಿಸಲು ಏನೇನು ಮಾಡಬೇಕೋ ಅದನ್ನೆಲ್ಲಾ ನಾವು ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.


