ಮಾಜಿ ಉಗ್ರಗಾಮಿ ಎನ್ಕೌಂಟರ್: ಮೇಘಾಲಯ ಉದ್ವಿಗ್ನ, ಗೃಹ ಸಚಿವ ರಾಜೀನಾಮೆ!
* ಸ್ವಾತಂತ್ರ್ಯ ದಿನಾಚರಣೆಯ ದಿನ ಮೇಘಾಲಯದಲ್ಲಿ ಹಿಂಸಾಚಾರ
* ರಾಜ್ಯ ಗೃಹ ಸಚಿವ ಲಖನ್ ರಿಂಬುಯಿ ರಾಜೀನಾಮೆ
* ಚೆರಿಸ್ಟರ್ ಫೀಲ್ಡ್ ತಂಗ್ಖು ಎನ್ಕೌಂಟ್ಗೆ ಬಲಿ
ಶಿಲ್ಲಾಂಗ್(ಆ.16): ಸ್ವಾತಂತ್ರ್ಯ ದಿನಾಚರಣೆಯ ದಿನ ಮೇಘಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ ರಾಜ್ಯ ಗೃಹ ಸಚಿವ ಲಖನ್ ರಿಂಬುಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ, ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ವೈಯಕ್ತಿಕ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು, ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಭದ್ರತೆಗಾಗಿ ಶಿಲ್ಲಾಂಗ್ನಲ್ಲಿ 2 ದಿನಗಳ ಕರ್ಫ್ಯೂ ವಿಧಿಸಲಾಗಿದೆ.
ಚೆರಿಸ್ಟರ್ ಫೀಲ್ಡ್ ತಂಗ್ಖು ಎನ್ಕೌಂಟ್ಗೆ ಬಲಿ
ಶುಕ್ರವಾರ, ಮಾಜಿ ಎಚ್ಎನ್ಎಲ್ಸಿ ನಾಯಕ ಚೆರಿಸ್ಟರ್ಫೀಲ್ಡ್ ತಂಗ್ಕೀವ್ನನ್ನು ಶಿಲ್ಲಾಂಗ್ನಲ್ಲಿರುವ ಅವರ ನಿವಾಸದಲ್ಲಿ ಮೌಲಾಯಿ-ಕಿಂಟನ್ ಮಸಾರ್ನಲ್ಲಿ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆಗೈಯ್ಯಲಾಗಿದೆ. ಇನ್ನು ಹೈನ್ವಾಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಎಚ್ಎನ್ಎಲ್ಸಿ) ಒಂದು ನಿಷೇಧಿತ ಸಂಸ್ಥೆ ಎಂಬುವುದು ಉಲ್ಲೇಖನೀಯ. ಚೆಸ್ಟರ್ ಫೀಲ್ಡ್ ತಂಗ್ಖು 2018 ರಲ್ಲಿ ಉಪಮುಖ್ಯಮಂತ್ರಿ ಪ್ರೆಸ್ಟನ್ ಟೈನ್ಸಾಂಗ್ಗೆ ಶರಣಾಗಿದ್ದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಇಡಿ ದಾಳಿಗೆ ಸಂಬಂಧಿಸಿದಂತೆ ಶಿಲ್ಲಾಂಗ್ ಪೊಲೀಸ್ ತಂಡ ಮಾವ್ಲೈನಲ್ಲಿರುವ ತಂಗ್ಖೀವ್ ನ ಕಿಂಟನ್ ಮಸಾರ್ ನಿವಾಸದ ಮೇಲೆ ದಾಳಿ ನಡೆಸಿತ್ತು ಎಂದು ಪೊಲೀಸ್ ಡಿಜಿಪಿ ಆರ್. ಚಂದ್ರನಾಥನ್ ತಿಳಿಸಿದ್ದಾರೆ. ಪೊಲೀಸರ ಬಳಿ ಇದಕ್ಕೆ ಬಲವಾದ ಪುರಾವೆ ಇತ್ತು. ಅಲ್ಲದೇ ಪೋಲಿಸರು ದಾಳಿ ನಡೆಸಿದಾಗ, ಆತ ಒಬ್ಬ ಪೋಲಿಸನ್ನು ಇರಿದಿದ್ದ. ಈ ವೇಳೆ ನಡೆದ ಮರು ದಾಳಿಯಲ್ಲಿ ಆತನ ಹತ್ಯೆಯಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಲ್ಯಾಪ್ ಟಾಪ್, ಮೊಬೈಲ್ ಫೋನ್, ಬಂದೂಕು ಮತ್ತು ಡಿಜಿಟಲ್ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಶರಣಾಗಿದ್ದ ಭಯೋತ್ಪಾದಕ 2018 ರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದವರಲ್ಲಿ ಪ್ರಮುಖ ಎಂಬ ಆರೋಪ ಇದೆ ಎಂಬುವುದು ಉಲ್ಲೇಖನೀಯ.
ಮಂಗಳವಾರದವರೆಗೆ ಕರ್ಫ್ಯೂ
ಶಿಲ್ಲಾಂಗ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ರಾತ್ರಿ 9 ರಿಂದ ಮಂಗಳವಾರ ಬೆಳಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದೆ ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಉಪ ಆಯುಕ್ತರು ತಿಳಿಸಿದ್ದಾರೆ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಖಾಸಿ ಬೆಟ್ಟಗಳು ಮತ್ತು ರಿ-ಭೋಯ್ ನಲ್ಲಿ 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಸ್ಸಾಂನ ಜನರು ಶಿಲ್ಲಾಂಗ್ಗೆ ಹೋಗದಂತೆ ಪೊಲೀಸರು ಮನವಿ ಮಾಡಿದ್ದಾರೆ. ತಂಗ್ಖು ಸಾವಿನ ನಂತರ ಅಸ್ಸಾಂನಲ್ಲಿ ಹಲವಾರು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ತಂಗ್ಖು ಅವರ ಬೆಂಬಲಿಗರು ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ತೆರಳುತ್ತಿರುವ ದೃಶ್ಯಗಳೂ ಸೆರೆಯಾಗಿವೆ.