ಮನ್‌ ಕೀ ಬಾತ್‌ನಲ್ಲಿ ಫಿಟ್ನೆಸ್‌ ಬಗ್ಗೆ ಚರ್ಚೆ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ. ನಾವು ನಮ್ಮ ಸ್ಟಾರ್ಟಪ್‌ ಮೂಲಕ ಭಾರತದ ಸಾಂಪ್ರದಾಯಿಕ ಕಸರತ್ತುಗಳಿಗೆ ಮತ್ತೆ ಹೊಸ ಜೀವ ನೀಡುವ ಯತ್ನ ಮಾಡುತ್ತಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡಾ ಸಿಗುತ್ತಿದೆ ಎಂದು ರಿಷಬ್‌ ಮನ್‌ ಕೀ ಬಾತ್‌ನಲ್ಲಿ ಹೇಳಿದರು.

ನವದೆಹಲಿ (ಜನವರಿ 1, 2024): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ನಲ್ಲಿ ಬೆಂಗಳೂರಿನ ‘ತಗ್ಡಾ ರಹೋ’ ಎಂಬ ಫಿಟ್ನೆಸ್‌ ಸ್ಟಾರ್ಟಪ್‌ ಕಂಪನಿ ಮುಖ್ಯಸ್ಥ ರಿಷಭ್‌ ಮಲ್ಹೋತ್ರಾ ಅವರ ಆಡಿಯೋವನ್ನು ಭಾನುವಾರ ಕೇಳಿಸಿದ್ದಾರೆ. ಸಾಂಪ್ರದಾಯಿಕ ವಿಧಾನ ಬಳಸಿ ದೈಹಿಕ ಸಾಮರ್ಥ್ಯವನ್ನು ಹೇಗೆ ಕಾಯ್ದುಕೊಳ್ಳಬಹುದು ಎಂಬುದನ್ನು ರಿಷಭ್‌ ವಿವರಿಸಿದ್ದಾರೆ. ಭಾರತೀಯರು ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಿಕೊಂಡಿರುವ ಸಾಂಪ್ರದಾಯಿಕ ದೈಹಿಕ ಕಸರತ್ತನ್ನು ರೂಢಿಸಿಕೊಳ್ಳುವಂತೆಯೂ ಕರೆ ನೀಡಿದ್ದಾರೆ.

‘ಮನ್‌ ಕೀ ಬಾತ್‌ನಲ್ಲಿ ಫಿಟ್ನೆಸ್‌ ಬಗ್ಗೆ ಚರ್ಚೆ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ. ನಾವು ನಮ್ಮ ಸ್ಟಾರ್ಟಪ್‌ ಮೂಲಕ ಭಾರತದ ಸಾಂಪ್ರದಾಯಿಕ ಕಸರತ್ತುಗಳಿಗೆ ಮತ್ತೆ ಹೊಸ ಜೀವ ನೀಡುವ ಯತ್ನ ಮಾಡುತ್ತಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡಾ ಸಿಗುತ್ತಿದೆ’ ಎಂದು ರಿಷಬ್‌ ಅವರು ಮನ್‌ ಕೀ ಬಾತ್‌ನಲ್ಲಿ ಹೇಳಿದರು.

ಇದನ್ನು ಓದಿ: ಫಿಟ್ನೆಸ್‌ಗೆ ಶಾರ್ಟ್‌ ಕಟ್‌ ಬೇಡ, ಅದು ಇನ್‌ಸ್ಟಂಟ್ ಕಾಫಿ ಅಥವಾ ಟು ಮಿನಿಟ್‌ ನೂಡಲ್ಸ್‌ ಅಲ್ಲ; ನಟ ಅಕ್ಷಯ್‌ ಕುಮಾರ್‌

‘ಭಾರತದ ಸಾಂಪ್ರದಾಯಿಕ ದೈಹಿಕ ಕಸರತ್ತುಗಳ ಪೈಕಿ ಒಂದಾದ ಗದೆ ಕಸರತ್ತು ಅತ್ಯಂತ ಅಮೋಘವಾದುದು. ನೀವು ಕೇವಲ ಗದೆ ಬಳಸಿಕೊಂಡೇ ಹೇಗೆ ಇಷ್ಟೆಲ್ಲಾ ದೈಹಿಕ ಕಸರತ್ತು ಮಾಡುತ್ತೀರಿ ಎಂದು ಜನರು ಆಶ್ಚರ್ಯ ಚಕಿತರಾಗುತ್ತಾರೆ. ಆದರೆ ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ಗದೆ ಕಸರತ್ತು ಸಾವಿರಾರು ವರ್ಷ ಪುರಾತನವಾದುದು ಮತ್ತು ಅದನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಿಕೊಂಡು ಬರಲಾಗುತ್ತಿದೆ. ಗರಡಿ ಮನೆಗಳಲ್ಲಿ ಇಂಥ ದೊಡ್ಡ ಮತ್ತು ಸಣ್ಣದಾದ ಗದೆಗಳನ್ನು ನೀವು ನೋಡಿರಬಹುದು. ನಮ್ಮ ಸ್ಟಾರ್ಟಪ್‌ ಮೂಲಕ ನಾವು ಅದನ್ನು ಹೊಸ ಯುಗಕ್ಕೆ ತಕ್ಕಂತೆ ಬದಲಾಯಿಸಿದ್ದೇವೆ. ಈ ಬಗ್ಗೆ ನಮಗೆ ದೇಶವ್ಯಾಪಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

‘ವೈಯಕ್ತಿಕವಾಗಿ ಹೇಳುವುದಾದರೆ ಗದೆ ಕಸರತ್ತಿನ ಮೂಲಕ ನೀವು ನಿಮ್ಮ ದೈಹಿಕ ಸಾಮರ್ಥ್ಯ, ಶಕ್ತಿ, ನಿಮ್ಮ ಭಂಗಿ ಮತ್ತು ಉಸಿರಾಟದ ಪ್ರಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು’ ಎಂದು ರಿಷಭ್‌ ಹೇಳಿದರು.

ರಾಮ ಭಜನೆ ಹಾಡಿ ಶೇರ್‌ ಮಾಡಿ: ಮನ್ ಕೀ ಬಾತ್‌ನಲ್ಲಿ ಮೋದಿ ಕರೆ