ರಾಮ ಭಜನೆ ಹಾಡಿ ಶೇರ್ ಮಾಡಿ: ಮನ್ ಕೀ ಬಾತ್ನಲ್ಲಿ ಮೋದಿ ಕರೆ
ಜನರು ಶ್ರೀರಾಮನ ಬಗ್ಗೆ ಭಜನೆಗಳನ್ನು ಹಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವಂತೆ ಮೋದಿ ಮನವಿ ಮಾಡಿದ್ದಾರೆ.
ನವದೆಹಲಿ (ಜನವರಿ 1, 2024): ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಶ್ರೀರಾಮ ಜ್ಯೋತಿ ಬೆಳಗಿ ದೀಪಾವಳಿ ಆಚರಿಸುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ಜನರು ಶ್ರೀರಾಮನ ಬಗ್ಗೆ ಭಜನೆಗಳನ್ನು ಹಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವಂತೆ ಇನ್ನೊಂದು ಮನವಿ ಮಾಡಿದ್ದಾರೆ.
ಭಾನುವಾರ ತಮ್ಮ ಮನ್ ಕೀ ಬಾತ್ನಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ಸಾಕಷ್ಟು ಅನುಭವವಿರುವ ಹಾಗೂ ಉದಯೋನ್ಮುಖ ಕಲಾವಿದರು ಭಜನೆಗಳನ್ನು ರಚಿಸಿ ಹಾಡುವವರಿದ್ದಾರೆ. ಅವರು ಶ್ರೀರಾಮನ ಕುರಿತು ಅಥವಾ ಅಯೋಧ್ಯೆಯ ಕುರಿತು ಭಜನೆಗಳನ್ನು ರಚಿಸಿದ್ದರೆ, ಅವುಗಳನ್ನು ಹಾಡಿದ್ದರೆ ಅಥವಾ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸೃಜನಶೀಲ ಕೃತಿಗಳನ್ನು ರಚಿಸಿದ್ದರೆ ಅವುಗಳನ್ನು #ShriRamBhajan ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಿ. ಆಗ ಅವು ಒಂದೇ ಕಡೆ ಎಲ್ಲರಿಗೂ ಸಿಗುತ್ತವೆ ಮತ್ತು ಭಕ್ತಿಯ ಧಾರೆ ಹರಿಸುತ್ತವೆ’ ಎಂದು ಹೇಳಿದ್ದಾರೆ.
ಇದನ್ನು ಓದಿ: 108th Mann Ki Baat: 'ರಾಮ ಭಜನೆ' ಮಾಡಲು ಮೋದಿ ಮನವಿ; 108 ಸಂಖ್ಯೆಯ ಮಹತ್ವದ ಬಗ್ಗೆ ಪ್ರಧಾನಿ ಹೇಳಿದ್ದೀಗೆ..
‘ರಾಮಮಂದಿರ ಉದ್ಘಾಟನೆಯ ಬಗ್ಗೆ ದೇಶದಲ್ಲಿ ತುಂಬಾ ಉತ್ಸಾಹ ಹಾಗೂ ಕುತೂಹಲವಿದೆ. ಅದನ್ನು ಭಕ್ತಿ ಹಾಗೂ ಭಾವನೆಯ ಸ್ರೋತವಾಗಿ ಹರಿಸೋಣ. ಕಳೆದ ಕೆಲ ದಿನಗಳಿಂದ ಅನೇಕ ಹೊಸ ಹೊಸ ಹಾಡುಗಳು ಹಾಗೂ ಭಜನೆಗಳು ಅಯೋಧ್ಯೆಯ ಕುರಿತು ರಚನೆಯಾಗಿವೆ. ಅವುಗಳೆಲ್ಲ ಒಂದೇ ಕಡೆ ಸಿಗುವಂತೆ ಆಗಲಿ’ ಎಂದು ತಿಳಿಸಿದ್ದಾರೆ.
2024ರಲ್ಲಿ ಇದೇ ಆತ್ಮವಿಶ್ವಾಸ ಕಾಯ್ದುಕೊಳ್ಳಿ: ಮೋದಿ ಕರೆ
ನವದೆಹಲಿ: ಭಾರತ ಈಗ ''ಆತ್ಮ ವಿಶ್ವಾಸ'' ಮತ್ತು ''ಸ್ವಾವಲಂಬನೆ ''ಯಿಂದ ತುಂಬಿ ತುಳುಕುತ್ತಿದೆ. 2024ರಲ್ಲೂ ಈ ಚೈತನ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇದನ್ನು ಓದಿ: Mann Ki Baatನಲ್ಲಿ ಕರ್ನಾಟಕದ ಯುವತಿ ಹೆಸರು ಪ್ರಸ್ತಾಪಿಸಿದ ಪ್ರಧಾನಿ ಮೋದಿ: ವರ್ಷಾಗೆ ಮೆಚ್ಚುಗೆ
ಭಾನುವಾರ ಮನ್ ಕಿ ಬಾತ್ನ 108ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2023ರಲ್ಲಿ ದೇಶದ ಹಲವಾರು ಸಾಧನೆಗಳನ್ನು ನಾಗರಿಕರಿಗೆ ನೆನಪಿಸಿದರು, ಈ ವೇಳೆ, ‘ಭಾರತವು ಆತ್ಮವಿಶ್ವಾಸದಿಂದ ತುಂಬಿದೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಮುಂದಿನ ಗುರಿಯಾಗಿದೆ. 2024ಕ್ಕೆ ಇನ್ನು ಕೆಲವೇ ಗಂಟೆ ಬಾಕಿ ಇವೆ. ಹೀಗಾಗಿ 2024ರಲ್ಲೂ ಅದೇ ಚೈತನ್ಯ ಮತ್ತು ವೇಗವನ್ನು ಕಾಪಾಡಿಕೊಳ್ಳಿ’ ಎಂದು ಕರೆ ನೀಡಿದರು.