ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿರುವು!
ಹಿರೇನ್ ಸಾವು: ಕೊಲೆ ಕೇಸು ದಾಖಲು| ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿರುವು| ಸ್ಫೋಟಕ ಇಟ್ಟಿದ್ದ ಕಾರು ಮಾಲೀಕನ ಪತ್ನಿ ದೂರಿನ ಹಿನ್ನೆಲೆ ಕೇಸು
ಮುಂಬೈ(ಮಾ.08): ಮುಕೇಶ್ ಅಂಬಾನಿ ನಿವಾಸದ ಮುಂದೆ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸ್ಫೋಟಕ ಪತ್ತೆಯಾದ ಕಾರಿನ ಮಾಲೀಕ ಮನ್ಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣ ಸಂಬಂಧ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದಾರೆ.
ಹಿರೇನ್ ಅವರ ಸಾವನ್ನು ಮೊದಲಿಗೆ ಅಸಹಜ ಸಾವು ಎಂದು ಪರಿಗಣಿಸಿ ತನಿಖೆ ಕೈಗೊಳ್ಳಲಾಗಿತ್ತು. ಆದರೆ ಇದೀಗ ಹಿರೇನ್ ಅವರ ಪತ್ನಿ, ತನ್ನ ಪತಿಯನ್ನು ಕೊಲೆಗೈಯ್ಯಲಾಗಿದೆ ಎಂದು ದೂರು ನೀಡಿದ್ದಾರೆ. ಹೀಗಾಗಿ ಅಪರಿಚಿತರ ವಿರುದ್ಧ ಸಾಕ್ಷ್ಯ ನಾಶದ ಯತ್ನ, ಹತ್ಯೆ, ಕ್ರಿಮಿನಲ್ ಪಿತೂರಿ ಕೇಸ್ಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಈ ಪ್ರಕರಣವನ್ನು ಇದೀಗ ಮುಂಬೈ ಪೊಲೀಸರಿಂದ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ)ಗೆ ವರ್ಗಾವಣೆಯಾಗಿದೆ.
ಮತ್ತೊಂದೆಡೆ ಹಿರೇನ್ ಅವರ ಮುಖದ ಎಡಭಾಗ, ಮೂಗು, ಬಲಗಣ್ಣಿನ ಭಾಗದಲ್ಲಿ ಗಾಯದ ಗುರುತುಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಹಿರೇನ್ ಅವರದ್ದು ಅಸಹಜ ಸಾವು ಅಲ್ಲ. ಬದಲಿಗೆ ಇದೊಂದು ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.