ಮಣಿಪುರ ಗಲಭೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಹಲವರಿಗೆ ಮಣಿಪುರದ ನೈಜ ಪರಿಸ್ಥಿತಿ, ಗಲಭೆ ಹಿಂದಿನ ಕಾರಣಗಳ ಸ್ಪಷ್ಟ ಮಾಹಿತಿ ಇಲ್ಲ. ಮೈತೇಯಿ ಹಾಗೂ ಕುಕಿ ಸಮುದಾಯದ ನಡುವಿನ ಹೊಡೆದಾಟವನ್ನು ಹಿಂದೂ ಕ್ರಿಶ್ಚಿಯನ್ ಸಂಘರ್ಷ ಎಂದು ಬಿಂಬಿಸಲಾಗುತ್ತಿದೆ. ಈ ಕುರಿತು ಗೋವಾದ ಕ್ರಿಶ್ಚಿಯನ್ ಪಾದ್ರಿ ಮಹತ್ವದ ಮಾಹಿತಿ ನೀಡಿದ್ದಾರೆ.
ಪಣಜಿ(ಜು.28) ಮಣಿಪುರ ಹಿಂಸಾಚಾರ ಸರಿ ಸುಮಾರು 3 ತಿಂಗಳಿನಿಂದ ತೀವ್ರವಾಗಿ ನಡೆಯುತ್ತಿದೆ. ಗಲಭೆ, ಅತ್ಯಾಚಾರ, ಹತ್ಯೆ, ಗುಂಡಿನ ದಾಳಿ ಸೇರಿದಂತೆ ಭೀಕರ ಘಟನೆಗಳೇ ನಡೆದು ಹೋಗಿದೆ. ಬಲಿಯಾದ ಅಮಾಯಕರ ಸಂಖ್ಯೆ ಲೆಕ್ಕ ಇನ್ನೂ ಸಿಕ್ಕಲ್ಲ. ದೇಶದ ಹಲವು ರಾಜ್ಯಗಳಲ್ಲಿ ಮಣಿಪುರ ಘಟನೆ ವಿರೋಧಿಸಿ ಪ್ರತಿಭಟನೆಗಳು ನಡೆದಿದೆ. ಈ ಗಲಭೆಯನ್ನು ಹಿಂದೂ ಕ್ರಿಶ್ಚಿಯನ್ ಸಂಘರ್ಷ ಎಂದು ಬಿಂಬಿಸಲಾಗುತ್ತಿದೆ. ಈ ಕುರಿತು ಗೋವಾದ ರೋಮನ್ ಕ್ಯಾಥೋಲಿಕ್ ಚರ್ಚ್ ಕ್ರಿಶ್ಚಿಯನ್ ಪಾದ್ರಿ ಕಾರ್ಡಿನಲ್ ಒಸ್ವಾಲ್ಡ್ ಗ್ರೇಶಿಯಸ್ ಮಹತ್ವದ ಸಂದೇಶ ನೀಡಿದ್ದಾರೆ. ಮಣಿಪುರ ಘಟನೆ ಹಿಂದಿನ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದು ಹಿಂದೂ ಕ್ರಿಶ್ಚಿಯನ್ ಸಂಘರ್ಷವಲ್ಲ. ಇದು ಎರಡು ಬುಡಕಟ್ಟು ಸಮುದಾಯದ ನಡುವಿನ ಗಲಭೆ, ಇದಕ್ಕೆ ಕೋಮು ಬಣ್ಣ ಹಚ್ಚಬೇಡಿ. ಘಟನೆಯನ್ನು ಸತ್ಯಾಂಶವನ್ನು ಮುಚ್ಚಿಟ್ಟು ಧಾರ್ಮಿಕ ಬಣ್ಣ ಹಚ್ಚಿ ಘೋರ ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ ಎಂದು ಪಾದ್ರಿ ಮನವಿ ಮಾಡಿದ್ದಾರೆ.
ಮಣಿಪುರದ ಈ ಸಂಘರ್ಷ ಇಂದು ನಿನ್ನೆಯದಲ್ಲ, ಸುದೀರ್ಘ ವರ್ಷಗಳ ವೈರತ್ವವಿದೆ. ಎರಡು ಸಮುದಾಯದ ನಡುವಿನ ವೈರತ್ವವೇ ಈ ಘರ್ಷಣೆಯ ಬೇರು. ಇದಕ್ಕೆ ಹಲವು ಘಟನೆಗಳು ಸೇರಿಕೊಂಡಿದೆ. ಹೀಗಾಗಿ ಹಿಂದೂಗಳ ದೇವಸ್ಥಾನಗಳು ನಾಶ ಮಾಡಲಾಗಿದೆ. ಚರ್ಚ್ಗಳನ್ನು ಧ್ವಂಸಗೊಳಿಸಲಾಗಿದೆ. ನಷ್ಟ ಎರಡೂ ಸಮುದಾಯಕ್ಕೆ ಹಾಗೂ ಎರಡೂ ಧರ್ಮಕ್ಕೂ ಆಗಿದೆ. ಆದರೆ ಕೆಲ ಗುಂಪುಗಳು ಚರ್ಚ್ ನಾಶವಾಗಿರುವ ವಿಡಿಯೋಗಳನ್ನು ಬಳಸಿಕೊಂಡು ತಪ್ಪು ಸಂದೇಶ ಹರಡುತ್ತಿದ್ದಾರೆ. ಇನ್ನು ಕೆಲ ಗುಂಪು ದೇವಸ್ಥಾನ ನಾಶ, ಹಿಂದೂ ಸಮುದಾಯದ ಮೇಲಾಗಿರುವ ದೌರ್ಜನ್ಯ ಮುಂದಿಟ್ಟು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಪಾದ್ರಿ ಹೇಳಿದ್ದಾರೆ.
ಮಣಿಪುರ ನಗ್ನ ವೈರಲ್ ವಿಡಿಯೋ ಪ್ರಕರಣ ಸಿಬಿಐಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ!
ಈ ವಿಡಿಯೋಗಳು ಹಾಗೂ ಅಸ್ಪಷ್ಟ ಮಾಹಿತಿಯನ್ನು ತಿಳಿದು ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು, ವಿರೋಧಗಳು ವ್ಯಕ್ತವಾಗುತ್ತಿದೆ. ಇದು ತಪ್ಪು. ಮಣಿಪುರದ ನೈಜ ಘಟನೆ ಅರಿತು ಮಾತನಾಡಬೇಕು. ಧರ್ಮದ ಬಣ್ಣ ಹಚ್ಚಿ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುವುದು ಸರಿಯಲ್ಲ ಎಂದು ಕ್ಯಾಥೋಲಿಕ್ ಚರ್ಚ್ ಪಾದ್ರಿ ಹೇಳಿದ್ದಾರೆ.
ಪಾದ್ರಿ ಕಾರ್ಡಿನಲ್ ಒಸ್ವಾಲ್ಡ್ ಗ್ರೇಶಿಯಸ್ ಸಂದೇಶ ನೀಡಿದ ಬೆನಲ್ಲೇ, ಗೋವಾ ರಾಜ್ಯಾಪಾಲ ಪಿಎಸ್ ಶ್ರೀಧರನ್ ಪಿಳ್ಳೈ ವಿಶೇಷ ಮನವಿ ಮಾಡಿದ್ದಾರೆ. ಮಣಿಪುರ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ. ಪಾದ್ರಿ ಹೇಳಿರುವ ಮಾತುಗಳನ್ನು ಆಲಿಸಿ. ಸುಖಾಸುಮ್ಮನೆ ಹಿಂದೂ ಕ್ರಿಶ್ಚಿಯನ್ ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ ಎಂದು ಮಲೆಯಾಳಿ ಸಮುದಾಯಕ್ಕೆ ಪಿಳ್ಳಿ ಮನವಿ ಮಾಡಿದ್ದಾರೆ.
ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ
ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದ್ದರೂ, ಹಿಂಸೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಣಿಪುರದಲ್ಲಿ ನಡೆದ ವೈರಲ್ ವಿಡಿಯೋ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿದೆ. ಇಡೀ ದೇಶವನ್ನೇ ಆಘಾತಕ್ಕೊಳಪಡಿಸಿದ್ದ ಮಣಿಪುರದಲ್ಲಿನ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣದ ಸಿಬಿಐ ತನಿಖೆಗೆ ಗೃಹ ಸಚಿವಾಲಯ ಶಿಫಾರಸು ಮಾಡಿದೆ. ಅಲ್ಲದೆ, ಮಣಿಪುರದ ಹೊರಗೆ ಕೋರ್ಚ್ ವಿಚಾರಣೆ ನಡೆಸಲು ಅನುಮತಿ ನೀಡಬೇಕು. 6 ತಿಂಗಳಲ್ಲಿ ವಿಚಾರಣೆ ಮುಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಚ್ಗೆ ಕೋರಿದೆ. ಈ ಸಂಬಂಧ ಗುರುವಾರ ರಾತ್ರಿ ಸುಪ್ರೀಂ ಕೋರ್ಚ್ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
