ಸಿಎಂ ಮೇಲೆಯೇ ಆರೋಪ ಮಾಡಿದ ಲೇಡಿ ಅಧಿಕಾರಿ ಸ್ಥಿತಿ ಈಗ ಏನಾಗಿದೆ?
ನನ್ನನ್ನು ಯಾವಾಗ ಬಂಧಿಸುತ್ತಾರೋ ಗೊತ್ತಿಲ್ಲ ಎಂದ ಮಹಿಳಾ ಪೊಲೀಸ್ ಅಧಿಕಾರಿ/ ಅಧಿಕಾರಿ ಮತ್ತು ಇಲಾಖೆ ನಡುವೆ ಆರೋಪ-ಪ್ರತ್ಯಾರೋಪ/ ಹಿರಿಯ ಅಧಿಕಾರಿಗಳು ಸಲ್ಲದ ಒತ್ತಡ ತರುತ್ತಿದ್ದಾರೆ
ಮಣಿಪುರ(ಜು. 31) 'ನಾನು ನನ್ನ ಬಂಧನವಾಗುತ್ತದೆ ಎಂದು ಯಾವ ಕಾರಣಕ್ಕೂ ಹೆದರುತ್ತಿಲ್ಲ. ಆದರೆ ಅವರು ಬಡಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ' ಎಂದು ಪ್ರಕರಣ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ತೋನೌಜಮ್ ಬೃಂದಾ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ಮೇಲೆ ಆರೋಪ ಮಾಡಿದ ನಂತರ ತೋನೌಜಮ್ ಬೃಂದಾ ಮೇಲೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಡ್ರಗ್ಸ್ ಸ್ಮಗ್ಲಿಂಗ್ ಆರೋಪದ ಮೇಲೆ ಲುಖೋಶಿ ಜೂ ಎಂಬಾತನನ್ನು ಅಧಿಕಾರಿ ಬಂಧಿಸಿದ್ದರು. ಆತನನ್ನು ಬಿಟ್ಟು ಬಿಡುವಂತೆ ಮೇಲಧಿಕಾರಿಗಳು ಒತ್ತಡ ತರುತ್ತಿದ್ದಾರೆ ಎಂದು ಹೇಳಿದ ನಂತರ ಆಕೆಯ ಮೇಲೆ ಪ್ರಕರಣ ದಾಖಲಾಗಿದೆ.
ನನಗೆ ಅನೇಕ ಬೆದರಿಕೆ ಕರೆಗಳು ಬಂದಿವೆ. ಆದರೆ ಪೊಲೀಸರ ಬಳಿ ಹೋಗುವ ಕೆಲಸ ಮಾಡಿಲ್ಲ, ನನ್ನನ್ನು ಯಾವಾಗ ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಬೃಂದಾ ಕುಟುಂಬದ ಸ್ನೇಹಿತರ ತಂದೆ 78 ವರ್ಷದ ಸಿರಾಜ್ ಅಹಮದ್ ಸಾವಿಗೀಡಾದ ನಂತರ ಈ ಪ್ರಕರಣ ಮತ್ತಷ್ಟು ಬಿಸಿ ಪಡೆದುಕೊಂಡಿದೆ. ಮಣಿಪುರದ ಪೊಲೀಸರ ದೌರ್ಜನ್ಯದಿಂದಲೇ ಅಹಮದ್ ಮೃತರಾದರು ಎಂದು ಬೃಂದಾ ಹೇಳಿದ ನಂತರ ಅವರ ಮೇಲೆಯೇ ವಿಚಾರಣೆ ಆರಂಭವಾಗಿದೆ.
ಮಾನವ ಹಕ್ಕುಗಳ ಆಯೋಗಕ್ಕೆ ಬೃಂದಾ ದೂರು ನೀಡಿದ್ದಾರೆ. ಎದೆ ನೋವು ಕಾಣಿಸಿಕೊಂಡ ವ್ಯಕ್ತಿಗೆ ಸೂಕ್ತ ಸಂದರ್ಭದಲ್ಲಿ ನೆರವು ಸಿಗದೆ ಸಾವನ್ನಪ್ಪಿದ್ದಾರೆ ಎಂಬ ವಿಚಾರವನ್ನು ಬೃಂದಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಕೊರೋನಾಕ್ಕೆ ಇರುವ ಚಿಕಿತ್ಸಾ ಕ್ರಮ ತಿಳಿದುಕೊಳ್ಳಿ
ಬೃಂದಾ ಮಾಡುತ್ತಿರುವ ಆರೋಪಗಳು ಅವರ ವೈಯಕ್ತಿಕ ನೆಲೆಗಟ್ಟಿನವು, ಇಲಾಖೆಗೆ ಸಂಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೃಂದಾನೇ ಕೊರೋನಾ ವೈರಸ್ ನಿಯಮ ಬ್ರೇಕ್ ಮಾಡಿದ್ದಾರೆ. ಕೊರೋನಾ ವಾರಿಯರ್ಸ್ ಗಳಿಗೆ ತೊಂದರೆ ಕೊಟ್ಟಿದ್ದು ಅಲ್ಲದೆ ಸ್ನೇಹಿತರನ್ನು ಕರೆದುಕೊಂಡು ಐಸು ಜಿಲ್ಲೆ ಕಾರಣವಿಲ್ಲದೇ ಓಡಾಡಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ನನ್ನ ಮನೆಯನ್ನು ಸಮವಸ್ತ್ರಧಾರಿಗಳಲ್ಲದ ಪೊಲೀಸರು ಸುತ್ತುವರಿದಿದ್ದಾರೆ. ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ನಾಯಕ ನನ್ನ ಮಾವ ರಾಜ್ ಕುಮಾರ್ ಮೇಘನ್ ಅವರಿಗೆ ಸೆಕ್ಯೂರಿಟಿ ನೀಡುವ ನೆಪದಲ್ಲಿ ಒಂದರ್ಥದ ಬಂಧನ ಮಾಡಲಾಗಿದೆ ಎಂದು ಬೃಂದಾ ಹೇಳಿದ್ದಾರೆ.
ಒಟ್ಟಿನಲ್ಲಿ ಪೊಲೀಸ್ ಅಧಿಕಾರಿ-ಪೊಲೀಸ್ ಇಲಾಖೆ ಮತ್ತು ಸರ್ಕಾರದ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು ಮುಂದೆ ಯಾವ ಹಂತಕ್ಕೆ ತಲುಪಲಿದೆಯೋ ಗೊತ್ತಿಲ್ಲ.