2012ರಲ್ಲಿ ಮನಮೋಹನ್ ಸಿಂಗ್‌ರನ್ನು ರಾಷ್ಟ್ರಪತಿ ಹಾಗೂ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಮಾಡಿದ್ದರೆ 2014ರಲ್ಲಿ ಯುಪಿಎ-3 ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಸೋನಿಯಾ ಗಾಂಧಿಯವರು ಪ್ರಣಬ್‌ರಿಗೆ ಪ್ರಧಾನಿ ಹುದ್ದೆ ಆಫರ್ ನೀಡಿದ್ದರು ಎಂಬುದನ್ನೂ ಅಯ್ಯರ್‌ ಬಹಿರಂಗಪಡಿಸಿದ್ದಾರೆ.

ನವದೆಹಲಿ : 2012ರಲ್ಲಿ ರಾಷ್ಟ್ರಪತಿ ಆಯ್ಕೆ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಡಾ। ಮನಮೋಹನ ಸಿಂಗ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಬೇಕಿತ್ತು. ಹೀಗೆ ಮಾಡಿದ್ದರೆ 2014ರಲ್ಲಿ ಯುಪಿಎ-3 ಸರ್ಕಾರ ಖಂಡಿತ ಅಸ್ತಿತ್ವಕ್ಕೆ ಬರುತ್ತಿತ್ತು ಎಂದು ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ ಅಯ್ಯರ್‌ ಹೇಳಿದ್ದಾರೆ. ಅಯ್ಯರ್‌ ಅವರು ‘ಎ ಮೇವರಿಕ್ ಇನ್ ಪಾಲಿಟಿಕ್ಸ್’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ಅಂಶಗಳಿವೆ, ‘ಒಮ್ಮೆ ಸೋನಿಯಾ ಗಾಂಧಿ ಅವರು ಪ್ರಣಬ್‌ರನ್ನು ಕರೆದು 2012ರಲ್ಲಿ ‘ನೀವು ಪ್ರಧಾನಿ ಆಗಬಹುದು’ ಎಂದು ಸುಳಿವು ನೀಡಿದ್ದರು. ಈ ಬಗ್ಗೆ ನನ್ನ ಎದುರು ಪ್ರಣಬ್‌ ಹೇಳಿಕೊಂಡು, ‘ಸೋನಿಯಾ ಆಫರ್‌ ನನ್ನನ್ನು ಅಚ್ಚರಿಗೊಳಿಸಿದೆ’ ಎಂದಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಅಂದುಕೊಂಡಿದ್ದು ಉಲ್ಟಾ ಆಯಿತು. ಪ್ರಣಬ್‌ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಸಿಂಗ್‌ ಪ್ರಧಾನಿಯಾಗಿ ಮುಂದುವರಿದರು. ಇದು ನೀತಿ ಸ್ಥಾಗಿತ್ಯಕ್ಕೆ ಕಾರಣವಾಯಿತು. ಯುಪಿಎ-3 ಸರ್ಕಾರ ರಚನೆಯ ನಿರೀಕ್ಷೆಯನ್ನು ನಾಶಗೊಳಿಸಿತು’ ಎಂದಿದ್ದಾರೆ.‘ಪ್ರಣಬ್‌ ಉತ್ಸಾಹಿ ಕೆಲಸಗಾರನಾಗಿದ್ದರು. ಅವರಿಗೆ ಪ್ರಧಾನಿ ಪಟ್ಟ ಕೊಡಬೇಕಿತ್ತು. ಆಡಳಿತದಲ್ಲಿ ಸಾಕಷ್ಟು ಅನುಭವಿ ಆಗಿದ್ದ ಡಾ। ಸಿಂಗ್‌ಗೆ ರಾಷ್ಟ್ರಪತಿ ಹುದ್ದೆ ನೀಡಬೇಕಿತ್ತು ಎಂದು ಅಯ್ಯರ್‌ ಅಭಿಪ್ರಾಯಪಟ್ಟಿದ್ದಾರೆ.