* ಬಂಗಾಳದಲ್ಲಿ ನಕಲಿ ಕೋವಿಡ್‌ ಲಸಿಕಾಕರಣ, ಚುನಾವಣೋತ್ತರ ಹಿಂಸಾಚಾರಗಳು ಸೇರಿ ಇನ್ನಿತರ ವಿಚಾರಗಳಿಂದ ರಾಜ್ಯದಲ್ಲಿ ದೀದಿ ವಿರುದ್ಧ ಟೀಕೆ* ಮೋದಿ, ವಿಪಕ್ಷ ನಾಯಕರ ಭೇಟಿಗೆ ದಿಲ್ಲಿಗೆ ದೀದಿ ಆಗಮನ

ನವದೆಹಲಿ/ಕೋಲ್ಕತಾ(ಜು.27): ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹಾಗೂ ವಿಪಕ್ಷಗಳ ನಾಯಕರ ಭೇಟಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರದಿಂದ 5 ದಿನಗಳ ದೆಹಲಿ ಪ್ರವಾಸ ಆರಂಭಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಮಾತನಾಡಿದ ಬ್ಯಾನರ್ಜಿ ಅವರು, ತಮ್ಮ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿ ಮಾಡಿದ್ದಾರೆ. ಜೊತೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಭೇಟಿಗೆ ದೆಹಲಿ ತೆರಳುತ್ತಿದ್ದೇನೆ ಎಂದಷ್ಟೇ ಹೇಳಿದ್ದಾರೆ. ಆದರೆ ಮೋದಿ ಜತೆಗಿನ ಭೇಟಿ ವೇಳೆ ಏನೆಲ್ಲಾ ಚರ್ಚೆಗಳು ನಡೆಯಲಿವೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.

ಆದರೆ ಇತ್ತೀಚೆಗಷ್ಟೇ ಬಿಜೆಪಿಯ ಅಬ್ಬರ ಮತ್ತು ಘಟಾನುಘಟಿ ನಾಯಕರ ಪ್ರಚಾರದ ಹೊರತಾಗಿಯೂ, ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ದೀದಿ ಅವರು 2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ನಾಯಕರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಮಮತಾ ಈ ಭೇಟಿ ಕೈಗೊಂಡಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ಬಂಗಾಳದಲ್ಲಿ ನಕಲಿ ಕೋವಿಡ್‌ ಲಸಿಕಾಕರಣ, ಚುನಾವಣೋತ್ತರ ಹಿಂಸಾಚಾರಗಳು ಸೇರಿ ಇನ್ನಿತರ ವಿಚಾರಗಳಿಂದ ರಾಜ್ಯದಲ್ಲಿ ದೀದಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಕೆಲ ದಿನ ಬಂಗಾಳದಿಂದ ದೂರ ಉಳಿಯಲು ಮಮತಾ ಬ್ಯಾನರ್ಜಿ ದಿಲ್ಲಿ ಯಾತ್ರೆ ಕೈಗೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.