ಮಹಿಳಾ ಮೀಸಲಾತಿ ವಿಧೇಯಕದ ಕುರಿತಾಗಿ ಲೋಕಸಭೆಯಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ, ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ಬೇಕು ಎಂದು ಹೇಳಿದ್ದಕ್ಕೆ, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡೋಕೆ ಆಗೋದಿಲ್ಲ ಎಂದು ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

ನವದೆಹಲಿ (ಸೆ.20): ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ್ ಮಸೂದೆ) ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಮೊದಲನೆಯದಾಗಿ ಕಾನೂನು ಸಚಿವ ಅರ್ಜುನ್‌ರಾಮ್ ಮೇಘವಾಲ್ ಅವರು ಮಸೂದೆಯ ಬಗ್ಗೆ ಸದನಕ್ಕೆ ತಿಳಿಸಿದರು. ಬಳಿಕ ಕಾಂಗ್ರೆಸ್ ಪರವಾಗಿ ಸೋನಿಯಾ ಗಾಂಧಿ 10 ನಿಮಿಷಗಳ ಕಾಲ ಮಾತನಾಡಿದರು. ಚರ್ಚೆಯ ವೇಳೆ ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಮಹುವಾ ಮೊಯಿತ್ರಾ ಅವರ ಹೆಸರನ್ನು ಉಲ್ಲೇಖಿಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಮುಸ್ಲಿಂ ಮೀಸಲಾತಿಗೆ ಬೇಕು ಎಂದು ಒತ್ತಾಯಿಸುವವರಿಗೆ ಈ ಮಾತನ್ನು ಹೇಳಲು ಬಯಸುತ್ತೇನೆ, ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಸಂವಿಧಾನದಲ್ಲಿ ನಿಷೇಧಿಸಲಾಗಿದೆ. ಪ್ರತಿಪಕ್ಷಗಳು ನಿಮ್ಮನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ವಿಧೇಯಕದ ಬಗ್ಗೆ ಮಾತನಾಡಿದ ಸೋನಿಯಾ ಗಾಂಧಿ, ತಕ್ಷಣ ಅದನ್ನು ಜಾರಿಗೊಳಿಸಿ, ಎಸ್‌ಪಿ-ಎನ್‌ಸಿಪಿ ಕೂಡ ಒಬಿಸಿ ಮಹಿಳೆಯರಿಗೆ ಮೀಸಲಾತಿಯನ್ನು ಒತ್ತಾಯಿಸುತ್ತದೆ. ಸೋನಿಯಾ ಅವರು, 'ಕಾಂಗ್ರೆಸ್ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತದೆ. ಡಿಲಿಮಿಟೇಶನ್‌ ಪ್ರಕ್ರಿಯೆ ಆಗುವವರೆಗೂ ಸರ್ಕಾರ ಇದಕ್ಕೆ ಕಾಯಬಾರದು. ಇದಕ್ಕೂ ಮುನ್ನ ಜಾತಿ ಗಣತಿ ನಡೆಸುವ ಮೂಲಕ ಈ ಮಸೂದೆಯಲ್ಲಿ ಎಸ್‌ಸಿ-ಎಸ್‌ಟಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು' ಎಂದು ಹೇಳಿದರು.

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮತ್ತು ಎಸ್‌ಪಿ ಸಂಸದ ಡಿಂಪಲ್ ಯಾದವ್ ಕೂಡ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಸುಪ್ರಿಯಾ ಮಾತನಾಡಿ, ಸರ್ಕಾರವು ಹೃದಯವಂತಿಕೆ ವಹಿಸಿ ಮಸೂದೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ಅದೇ ಸಮಯದಲ್ಲಿ, ಎಸ್‌ಪಿ ಸಂಸದ ಡಿಂಪಲ್ ಯಾದವ್ ಅವರು ಒಬಿಸಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೂ ಮಸೂದೆಯಲ್ಲಿ ಮೀಸಲಾತಿ ನೀಡಬೇಕು ಎಂದು ಹೇಳಿದರು.

ಸೋನಿಯಾ ಮಾತನಾಡಿ, 'ರಾಜ್ಯಸಭೆಯಲ್ಲಿ 7 ಮತಗಳಿಂದ ಸೋಲು ಕಂಡ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾನೂನನ್ನು ಮೊದಲು ತಂದವರು ನನ್ನ ಪತಿ ರಾಜೀವ್ ಗಾಂಧಿ. ನಂತರ ಪಿ.ವಿ.ನರಸಿಂಹರಾವ್ ಅವರ ಸರ್ಕಾರ ಅದನ್ನು ಅಂಗೀಕರಿಸಿತು. ಇದರ ಪರಿಣಾಮವೇ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ 15 ಲಕ್ಷ ಚುನಾಯಿತ ಮಹಿಳಾ ನಾಯಕರಿದ್ದಾರೆ. ರಾಜೀವ್ ಅವರ ಕನಸು ಅರ್ಧ ಮಾತ್ರ ನನಸಾಗಿದ್ದು, ಈ ಮಸೂದೆ ಜಾರಿಯಿಂದ ಕನಸು ನನಸಾಗಲಿದೆ. ಈ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಇದು ಪ್ರಧಾನಿ ಮೋದಿಯವರ ಬಿಲ್ ಮಾತ್ರ, ಗೋಲು ಹೊಡೆದವರ ಹೆಸರು ಅವರದು. ನಮ್ಮ ಪ್ರಧಾನಿ ಮತ್ತು ನಮ್ಮ ಪಕ್ಷದವರು ಈ ಮಸೂದೆಯನ್ನು ತಂದಿದ್ದಾರೆ ಮತ್ತು ಇದಕ್ಕಾಗಿ ಅವರಿಗೆ ಹೊಟ್ಟೆಕಿಚ್ಚು ಆರಂಭವಾಗಿದೆ ಎಂದು ಹೇಳಿದರು.

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಜನಗಣತಿ ಮತ್ತು ಡಿಲಿಮಿಟೇಶನ್ ಆಗುವವರೆಗೆ ಮಹಿಳಾ ಮೀಸಲಾತಿ ಜಾರಿ ಸಾಧ್ಯವಿಲ್ಲ ಎನ್ನುವುದು ವಾಸ್ತವ. ಹಾಗಾದರೆ ಇದಕ್ಕಾಗಿ ವಿಶೇಷ ಅಧಿವೇಶನ ಏಕೆ ಕರೆಯಲಾಯಿತು? ಚಳಿಗಾಲದ ಅಧಿವೇಶನದಲ್ಲೂ ಪಾಸು ಮಾಡಬಹುದಿತ್ತು. ದೇಶದ ಹಲವೆಡೆ ಪ್ರವಾಹ ಉಂಟಾಗಿದ್ದು, ಈ ಸಮಯದಲ್ಲಿ ಅಧಿವೇಶನ ಕರೆಯುವ ಅಗತ್ಯ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಸಂಸದರಿಗೆ ಹಂಚಿದ ಸಂವಿಧಾನದ ಪ್ರತಿಯಲ್ಲಿ 'ಸೋಶಿಯಲಿಸ್ಟ್‌, ಸೆಕ್ಯುಲರ್‌' ಪದ ಔಟ್‌, ಕೇಂದ್ರ ಹೇಳಿದ್ದಿಷ್ಟು!

ಟಿಎಂಸಿ ಸಂಸದ ಕಾಕೋಲಿ ಘೋಷ್ ಮಾತನಾಡಿ, 'ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರ ಮಹಿಳಾ ಸಿಎಂ ಇದ್ದಾರೆ, 16 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ, ಆದರೆ ಒಂದು ರಾಜ್ಯವೂ ಮಹಿಳಾ ಸಿಎಂ ಹೊಂದಿಲ್ಲ. ದೇಶಕ್ಕಾಗಿ ಪದಕ ಗೆದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಯಿತು. ಆರೋಪಿ ಬ್ರಿಜ್ ಭೂಷಣ್ ಸಿಂಗ್ ಇಂದು ಸಂಸತ್ತಿನಲ್ಲಿ ಕುಳಿತಿದ್ದಾರೆ. ಅವರ ವಿರುದ್ಧ ಬಿಜೆಪಿ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.

ಮೋದಿ ಸರ್ಕಾರದ ಮಹಿಳಾ ಮೀಸಲಾತಿ ಬಿಲ್ ಬೆಂಬಲಿಸಿದ ಕಾಂಗ್ರೆಸ್, ಆದರೆ 1 ಕಂಡೀಷನ್!

ಮತ್ತೊಂದೆಡೆ, ಇದು 2024 ರ ಚುನಾವಣಾ ಘೋಷಣೆಯಾಗಿದೆ ಎಂದು ಜೆಡಿಯು ಸಂಸದ ಲಾಲನ್ ಸಿಂಗ್ ಹೇಳಿದ್ದಾರೆ. ಭಾರತ ಮೈತ್ರಿಕೂಟಕ್ಕೆ ಸರ್ಕಾರ ಹೆದರಿ ಈ ಮಸೂದೆಯನ್ನು ತಂದಿದೆ. ಅವರ ಉದ್ದೇಶ ಸರಿ ಇದ್ದಿದ್ದರೆ 2021ರಲ್ಲೇ ಜನಗಣತಿ ಆರಂಭಿಸಬೇಕಿತ್ತು.ಇದರೊಂದಿಗೆ ಇಷ್ಟೊತ್ತಿಗೆ ಜನಗಣತಿ ಮುಗಿದು 2024ಕ್ಕೆ ಮುನ್ನವೇ ಮಹಿಳಾ ಮೀಸಲಾತಿ ಜಾರಿಯಾಗಬೇಕಿತ್ತು ಎಂದರು.