Asianet Suvarna News Asianet Suvarna News

'ಈಶ್ವರ ಅಲ್ಲಾ ತೇರೇ ನಾಮ್‌..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!

ಪುಲ್ವಾಮಾದ ಕುಲ್ಗಾಮ್‌ನ ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳು ರಘುಪತಿ ರಾಘವ್‌ ರಾಜಾರಾಮ್‌ ಭಜನೆಯನ್ನು ಹಾಡುತ್ತಿರುವ ವಿಡಿಯೋವನ್ನು ಟ್ವಿಟರ್‌ ಪುಟದಲ್ಲಿ ಶೇರ್ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಇದು ಹಿಂದುತ್ವದ ಅಜೆಂಡಾ ಎಂದು ಟೀಕಿಸಿದ್ದಾರೆ. ಆದರೆ, ಬಿಜೆಪಿ ಇದು ಫೇಕ್‌ ನ್ಯೂಸ್‌ ಎಂದು ಹೇಳಿದ್ದು, ಅವರು ಹೇಳುತ್ತಿರುವುದು ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯ ನೆಚ್ಚಿನ ಭಜನೆ. ಹಿಂದು ಭಜನೆ ಅಲ್ಲ ಎಂದು ಹೇಳಿದೆ.

mahatma gandhi hymns rattles Mehbooba Mufti accuses BJP of propagating Hindutva ideology  san
Author
First Published Sep 20, 2022, 8:28 PM IST

ನವದೆಹಲಿ (ಸೆ. 20): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರ ಆಡಳಿತವನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದ್ದಾರೆ. ಜಮ್ಮು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಮಹಾತ್ಮ ಗಾಂಧೀಜಿಯ ಭಜನೆ ಹಾಡುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರಿಗಳು ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ಮುಂದುವರೆಸುತ್ತಿದ್ದಾರೆ ಎಂದು ದೊಡ್ಡ ಆರೋಪ ಮಾಡಿದ್ದಾರೆ. ಶ್ರೀನಗರದಿಂದ 70 ಕಿಮೀ ದೂರದಲ್ಲಿರುವ ಕುಲ್ಗಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ವಿಡಿಯೋವನ್ನು ಮಾಜಿ ಮುಖ್ಯಮಂತ್ರಿ ಸೋಮವಾರ ಹಂಚಿಕೊಂಡಿದ್ದಾರೆ. ಇದರಲ್ಲಿ ಮೊದಲು ಶಾಲೆಯ ಬೋರ್ಡ್ ಕಾಣಿಸಿಕೊಳ್ಳುತ್ತದೆ. ಇದಾದ ನಂತರ, ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೆಚ್ಚಿನ ಗೀತೆಯಾದ 'ರಘುಪತಿ ರಾಘವ ರಾಜಾ ರಾಮ್' ಭಜನೆಯನ್ನು ಹಾಡುತ್ತಿದ್ದಾರೆ. ತರಗತಿಯಲ್ಲಿ ಅನೇಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಶಿಕ್ಷಕರು ಸಹ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್‌ ಮಾಡಿರುವ ಮಫ್ತಿ, ನಮ್ಮನ್ನು ನಮ್ಮ ಧರ್ಮದಿಂದ ಬೇರೆ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.


ಮೆಹಬೂಬಾ ಅವರು ವೀಡಿಯೊದ ಶೀರ್ಷಿಕೆಯಲ್ಲಿ, ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಮಾ ಮಸೀದಿಯನ್ನು ಮುಚ್ಚುವುದು ಮತ್ತು ಇಲ್ಲಿ ಹಿಂದೂ ಭಜನೆಗಳನ್ನು ಹಾಡಲು ಶಾಲಾ ಮಕ್ಕಳನ್ನು ನಿರ್ದೇಶಿಸುವುದು ಕಾಶ್ಮೀರದಲ್ಲಿ ಭಾರತ ಸರ್ಕಾರದ ನಿಜವಾದ ಹಿಂದುತ್ವದ ಅಜೆಂಡಾವನ್ನು ಬಹಿರಂಗಪಡಿಸುತ್ತದೆ. ಅವರ ಆದೇಶಗಳನ್ನು ನಿರಾಕರಿಸುವುದು ಪಿಎಸ್ಎ ಮತ್ತು ಯುಎಪಿಎಗೆ ಕರೆ ನೀಡಿದಂತಾಗುತ್ತದೆ. ಇದು ಬದಲಾಗುತ್ತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ನಾವು ತೆರುತ್ತಿರುವ ಬೆಲೆ ಎಂಧು ಬರೆದಿದ್ದಾರೆ. ಇದರಲ್ಲಿ ಯಾವುದೇ ಧರ್ಮದ ಉಲ್ಲೇಖವಿಲ್ಲ. ನಾವು ಭಜನೆಯನ್ನು ಗೌರವಿಸುತ್ತೇವೆ, ಆದರೆ ಮುಸ್ಲಿಂ ಮಕ್ಕಳನ್ನು ಭಜನೆ ಹಾಡುವ ಮೂಲಕ ಸರ್ಕಾರ ಏನು ಮಾಡಲು ಬಯಸುತ್ತದೆ ಎನ್ನುವುದು ನಮಗೆ ಅರ್ಥವಾಗಬೇಕು ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿಯ (BJP) ಬೂಟಾಟಿಕೆಗೆ ಯಾವುದೇ ಮಿತಿಯಿಲ್ಲ, ಏಕೆಂದರೆ ದೇವಸ್ಥಾನ (Kashmir School), ದರ್ಗಾ ಅಥವಾ ಗುರುದ್ವಾರದಲ್ಲಿ ಪೇಟವನ್ನು ಕಟ್ಟಲು ಸಿಗುವ ಯಾವುದೇ ಅವಕಾಶವನ್ನು ಬಿಜೆಪಿ ಬಿಡುವುದಿಲ್ಲ. ಈ ಜನರು ತಮ್ಮ ಅಜೆಂಡಾವನ್ನು ಜಾರಿಗೆ ತರುವವರೆಗೆ ಮತ್ತು ನಮ್ಮ ಎಲ್ಲಾ ಧಾರ್ಮಿಕ ಮತ್ತು ಸೂಫಿ ಸಂಪ್ರದಾಯಗಳನ್ನು ತಮ್ಮ ನಿಯಂತ್ರಣಕ್ಕೆ ತರುವವರೆಗೆ ನಿಲ್ಲುವುದಿಲ್ಲ ಎಂದು ಟೀಕೆ ಮಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಸ್ಥಳೀಯರಲ್ಲದವರಿಗೂ ಮತ ಹಕ್ಕು..! ಮುಫ್ತಿ ವಿರೋಧ

"ಜೆ & ಕೆ ಜನರು ಪಾಕಿಸ್ತಾನವನ್ನು ಬದಿಗಿಟ್ಟು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ ಭಾರತವನ್ನು ಆಯ್ಕೆ ಮಾಡಿದ್ದಾರೆ ಏಕೆಂದರೆ ಅದು ನಮ್ಮ ಧರ್ಮದ ಹಕ್ಕನ್ನು ರಕ್ಷಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ದುರದೃಷ್ಟವಶಾತ್, ಅವರು ನಮ್ಮ ಗುರುತನ್ನು ಕದ್ದಿದ್ದಾರೆ ಮತ್ತು ಈಗ ಅವರು ನಮ್ಮ ಧರ್ಮದ ಮೇಲೆ ಬಿದ್ದಿದ್ದಾರೆ. 2019 ರಿಂದ, ಅವರು ನಮ್ಮ ಜಾಮಾ ಮಸೀದಿಯನ್ನು ಮುಚ್ಚಿದ್ದಾರೆ. ಯಾವುದೋ ಹಳೆಯ ಕಾಮೆಂಟ್‌ಗಳಿಗಾಗಿ ನಮ್ಮ ಧಾರ್ಮಿಕ ಮುಖಂಡರನ್ನು ಜೈಲಿಗೆ ಅಟ್ಟಲಾಗುತ್ತಿದೆ ಎಂದಿದ್ದಾರೆ.

ತ್ರಿವರ್ಣ ಧ್ವಜವನ್ನು ಕೇಸರಿ ಮಾಡಲು ಬಿಜೆಪಿ ಪ್ರಯತ್ನ: ಮೆಹಬೂಬಾ ಮುಫ್ತಿ

ಇತ್ತ, ಜಮ್ಮು ಮತ್ತು ಕಾಶ್ಮೀರ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರೈನಾ (BJP State President Ravindra Raina) ಅವರು ಮೆಹಬೂಬಾ ಮುಫ್ತಿ (Mehbooba Mufti) ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಸತ್ಯಾಂಶವಿಲ್ಲದೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೆಹಬೂಬಾ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಯುವಕರ ಮನದಲ್ಲಿ ವಿಷ ಸುರಿಯುತ್ತಿದ್ದಾರೆ ಎಂದರು. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಇಲಾಖೆಯ ಆದೇಶದ ಪ್ರತಿಯನ್ನು ಸಹ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಗಾಂಧಿ ಜಯಂತಿಯಂದು ಶಾಲೆಗಳಲ್ಲಿ ಭಜನೆ ಹಾಡಲು ಸೂಚನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ರಘುಪತಿ ರಾಘವ ರಾಜಾ ರಾಮ್ ಭಜನೆ ಕೂಡ ಶಾಲೆಗಳಲ್ಲಿ ಸೇರಿದೆ.

Follow Us:
Download App:
  • android
  • ios