ಗಂಡ, ಅತ್ತೆ, ಮಾನವ ಮೇಲಿನ ಸಿಟ್ಟು, ಆಸ್ತಿ ವಿವಾದವೇ ಕಾರಣ ಆರ್ಸೆನಿಕ್‌ ಎಂಬ ವಿಷವನ್ನು ತೆಲಂಗಾಣದಿಂದ ತಂದು ಕೊಲೆ ಕಲಬೆರಕೆ ಆಹಾರದಿಂದ ಸಾವು ಎಂದು ಕತೆ ಕಟ್ಟಿದ್ದ ಕೊಲೆಗಾತಿಯರು

ಗಡ್‌ಚಿರೋಲಿ: ಇದೊಂದು ಬೆಚ್ಚಿಬೀಳಿಸುವ ಸುದ್ದಿ ಮಹಾರಾಷ್ಟ್ರದ ಗಡ್‌ಚಿರೋಲಿಯ ಮಹಾಗಾಂವ್‌ ಗ್ರಾಮದಲ್ಲಿ ಒಂದೇ ಕುಟುಂಬದ ಐವರು 20 ದಿನಗಳ ಅಂತರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಒಂದೇ ಕುಟುಂಬದ ಇಷ್ಟೊಂದು ಜನ ಹೇಗೆ ಕಡಿಮೆ ಅಂತರದಲ್ಲಿ ತೀರಿಕೊಂಡರು ಎಂಬುದು ಊರ ಜನರಿಗೆ ಆಘಾತವಾಗಿತ್ತು ಹಾಗೂ ನಾನಾ ಸಂದೇಹಕ್ಕೆ ಕಾರಣವಾಗಿತ್ತು. ಆದರೆ ಇದಕ್ಕಿಂತ ಬೆಚ್ಚಿಬೀಳಿಸುವ ವಿಷಯ ಈಗ ಬೆಳಕಿಗೆ ಬಂದಿದೆ. ಬುಧವಾರ ಕೊಲೆಯ ರಹಸ್ಯ ಬಯಲಾಗಿದ್ದು, ಅದೇ ಕುಟುಂಬದ ಇಬ್ಬರು ಮಹಿಳೆಯರು ತಮ್ಮವರನ್ನು ವಿಷವುಣಿಸಿ ಸಾಯಿಸಿದ್ದರು ಎಂದು ಗೊತ್ತಾಗಿದೆ. ಕೂಡಲೆ ಸಂಘಮಿತ್ರಾ ಹಾಗೂ ಆಕೆಯ ಬಂಧು ರೋಸಾ ರಾಮತೇಕೆ ಎಂಬ ಇಬ್ಬರನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ಆರೋಪಿಗಳಲ್ಲಿ ಒಬ್ಬಳಾದ ಸಂಘಮಿತ್ರಾ (Sanghmitra) ತಾನು ಪ್ರೇಮವಿವಾಹ ಆಗಿದ್ದ ಪತಿ ರೋಶನ್ ಕುಂಭಾರೆ ಮತ್ತು ಅತ್ತೆ ವಿಜಯಾ ಕುಂಭಾರೆ ಅವರ ಬೈಗುಳ ತಿಂದು ಅಸಮಾಧಾನಗೊಂಡಿದ್ದರೆ, ಇನ್ನೊಬ್ಬಳು ಆರೋಪಿ ರೋಸಾ ಆಸ್ತಿ ವಿವಾದದಿಂದ ಕುಂಭಾರೆ ಕುಟಂಬದ ಬಗ್ಗೆ ಅತೃಪ್ತಳಾಗಿದ್ದಳು. ಹೀಗಾಗಿ ‘ಸಮಾನ ದುಃಖಿ’ಗಳಾದ ಈ ಇಬ್ಬರೂ ಒಟ್ಟಾಗಿ ಕೊಲೆಯ ಸಂಚು ಹೆಣೆದರು. ನೀರು, ಆಹಾರದಲ್ಲಿ ತಾವೇ ವಿಷ ಬೆರೆಸಿದರು. ಆದರೆ ಯಾರಿಗೂ ತಮ್ಮ ಮೇಲೆ ಸಂದೇಹ ಬರಬಾರದು ಎಂದು ದೋಷಪೂರಿತ ಆಹಾರದಿಂದ 5 ಬಂಧುಗಳು ಸಾವನ್ನಪ್ಪಿರಬಹುದು ಎಂದು ಕತೆ ಕಟ್ಟಿದ್ದರು ಎಂದು ಪೊಲೀಸ್‌ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

20 ದಿನ ಅಂತರದಲ್ಲಿ 5 ಕೊಲೆ:

ಮೊದಲು ಸೆ.20 ರಂದು ಮಹಾಗಾಂವ್ ಗ್ರಾಮದ ಶಂಕರ ಕುಂಭಾರೆ (ಸಂಘಮಿತ್ರಳ ಮಾವ) ಮತ್ತು ಅವರ ಪತ್ನಿ ವಿಜಯಾ ಕುಂಭಾರೆ (ಸಂಘಮಿತ್ರಳ ಅತ್ತೆ) ಅವರು ಅನಾರೋಗ್ಯಕ್ಕೆ ಒಳಗಾದರು. ಅವರ ಸ್ಥಿತಿ ವೇಗವಾಗಿ ವಿಷಮಿಸಿ ಸೆ.26 ಮತ್ತು ಮರುದಿನ ಇಬ್ಬರೂ ದುರಂತ ಅಂತ್ಯ ಕಂಡರು.

ಇಬ್ಬರನ್ನೂ ಕುಟುಂಬವು ಕಳೆದುಕೊಂಡು ಶೋಕದಲ್ಲಿ ಇರುವಾಗ ಶಂಕರ್ ಅವರ ಮಗ ರೋಷನ್ (ಸಂಘಮಿತ್ರಳ ಗಂಡ) ಮತ್ತು ಶಂಕರ್‌ರ ಪುತ್ರಿಯರಾದ ಕೋಮಲ್ ದಹಗೋಕರ್ ಮತ್ತು ಆನಂದಾ (ಸಂಘಮಿತ್ರಳ ನಾದಿನಿಯರು) ಇದೇ ರೀತಿಯ ರೋಗಲಕ್ಷಣ ಅನುಭವಿಸಿದರು. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಮೂವರೂ ಅ. 8 ಮತ್ತು ಅ.15 ರ ನಡುವೆ ಮರಣ ಹೊಂದಿದರು. ಕುಟುಂಬದ ಇನ್ನೂ ಕೆಲವರು ಇಂಥದ್ದೇ ಲಕ್ಷಣದಿಂದ ಅಸ್ವಸ್ಥರಾದರೂ ಸಕಾಲಿಕ ಚಿಕಿತ್ಸೆಯಿಂದ ಸುದೈವವಶಾತ್ ಬದುಕುಳಿದರು.

ಕೊಲೆಗಾರರು ಸಿಕ್ಕಿಬಿದ್ದಿದ್ದು ಹೀಗೆ:

ಸರಣಿ ಕೊಲೆಗಳು ಊರಿನಲ್ಲಿ ತಲ್ಲಣ ಮೂಡಿಸಿದವು. ಆಗ ವೈದ್ಯರು ವಿಷ ಪ್ರಾಶನದ (food Poisoning) ಬಗ್ಗೆ ಅನುಮಾನಿಸಿದರೂ, ಪ್ರಾಥಮಿಕ ಪರೀಕ್ಷೆಗಳು ಅದನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ.

ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ‘ಸಂಘಮಿತ್ರಳು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರೋಶನ್‌ ಕುಂಭಾರೆಯನ್ನು ವರಿಸಿದ್ದಳು. ಆದರೆ ವಿವಾಹದ ನಂತರ ರೋಶನ್‌ ಹಾಗೂ ಅತ್ತೆ ತನ್ನನ್ನು ಹೊಡೆಯುತ್ತಿದ್ದರು ಎಂದು ಕೋಪಗೊಂಡಿದ್ದಳು. ಹೀಗೆಯೇ ಒಮ್ಮೆ ಆಕೆ ಹೊಡೆತ ತಿಂದು ಅಳುತ್ತ ಮನೆ ಹೊರಗೆ ಕೂತಾಗ ರಕ್ತಸಂಬಂಧಿ ರೋಸಾ, ಆಕೆಗೆ ಸಮಾಧಾನ ಮಾಡಿದಳು. ತಾನು ಕೂಡ ಕುಂಭಾರೆ ಕುಟುಂಬದ ಮೇಲೆ ದ್ವೇಷ ಹೊಂದಿದ್ದಾಗಿ ಹೇಳಿದಳು. ಆಗ ತಾವಿಬ್ಬರೂ ಸಮಾನ ದುಃಖಿಗಳು ಎಂದು ಹೇಳಿಕೊಂಡು, ಕೊಲೆ ಸಂಚು ರೂಪಿಸಿದರು’ ಎಂದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಬುಧವಾರ ಸಂಘಮಿತ್ರ ಹಾಗೂ ರೋಸಾಳನ್ನು ಪೊಲೀಸರು ಬಂಧಿಸಿದ್ದಾರೆ.

ಗಡಿ ಭಾಗದಲ್ಲಿ ಹೆಚ್ಚಿದ ಟ್ಯಾಂಕರ್‌ ಜಮಾವಣೆ: ಸದ್ಯಕ್ಕೆ ಭಾರತೀಯರ ತೆರವು ಕಷ್ಟ

ವಿಷದ ಬಗ್ಗೆ ಆನ್‌ಲೈನ್‌ನಲ್ಲಿ ಅಧ್ಯಯನ!

ಕುಟುಂಬ ಸದಸ್ಯರನ್ನು ಕೊಲ್ಲಲು ಬಳಸಬಹುದಾದ ವಿಷಗಳ ಬಗ್ಗೆ ಅವರು ಆರಂಭದಲ್ಲಿ ಇವರು ಆನ್‌ಲೈನ್‌ನಲ್ಲಿ (Online) ಸಂಶೋಧನೆ ನಡೆಸಿದರು. ಆಗ ಆರ್ಸೆನಿಕ್‌ ವಿಷದ ಮೂಲಕ ಯಾರಿಗೂ ಸಂದೇಹ ಬಾರದಂತೆ ಕೊಲ್ಲಬಹುದು ಎಂದು ಕಂಡುಕೊಂಡರು. ಸಂಚು ಸಾಕಾರಕ್ಕೆ ಮೊದಲು ರೋಸಾ ರಾಮತೇಕೆ ತೆಲಂಗಾಣಕ್ಕೆ ಪ್ರಯಾಣ ಬೆಳೆಸಿದಳು ಮತ್ತು ನೀರು ಅಥವಾ ಆಹಾರದೊಂದಿಗೆ ಬೆರೆಸಿದರೆ ಯಾರಿಗೂ ಗೊತ್ತಾಗದಂಥ ವಿಷವನ್ನು ಪಡೆದರು. ಶಂಕರ ಕುಂಭಾರೆ, ಪತ್ನಿ ಹಾಗೂ ಇತರರಿಗೆ ನೀರು ಹಾಗೂ ಇತರ ಆಹಾರದಲ್ಲಿ ವಿಷ ಬೆರೆಸಿ, ಬೆರೆಸಿದ್ದು ಗಿಡಮೂಲಿಕೆ ಎಂದು ನಂಬಿಸಿದ್ದರು ಎಂದು ಗೊತ್ತಾಗಿದೆ.