ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಈ ದಾಳಿಯಿಂದ ಎರಡು ಕುಟುಂಬದ 17 ಮಂದಿ ಪ್ರವಾಸಿಗರ ಪ್ರಾಣ ಕುದುರೆ ಕಾರಣದಿಂದ ಉಳಿದ ಘಟನೆ ಬಯಲಾಗಿದೆ. 

ನವದೆಹಲಿ(ಏ.24) ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕಣ್ಣೀರ ಕತೆ ಕರುಣಾಜನಕವಾಗಿದೆ. ಮದುವೆಯಾಗಿ ಒಂದು ವಾರ, ಮೂರು ವರ್ಷದ ಮಗುವಿನ ತಂದೆ ಸೇರಿದಂತೆ 26 ಮಂದಿಯ ಮನಕಲುಕುವ ಘಟನೆ ಕಣ್ಣಾಲಿ ತೇವಗೊಳಿಸಿದೆ. ಇದೀಗ ಎರಡು ಕುಟುಂಬದ 17 ಮಂದಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಘಟನೆ ಬಯಲಾಗಿದೆ. ಮಹಾರಾಷ್ಟ್ರದ ಸೋಲ್ಹಾಪುರ ಹಾಗೂ ಕೊಲ್ಹಾಪುರದ 2 ಕುಟುಂಬದ ಒಟ್ಟು 17 ಮಂದಿ ಜೀವ ಕುದುರೆ ಕಾರಣದಿಂದ ಉಳಿದ ಘಟನೆ ವರದಿಯಾಗಿದೆ. 

Add Asianetnews Kannada as a Preferred SourcegooglePreferred

ಉಳಿಯಿತು 17 ಸದಸ್ಯರ ಪ್ರಾಣ
ಎರಡು ಕುಟುಂಬದ ಒಟ್ಟು 17 ಮಂದಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಇದು ಬೆಟ್ಟಗಳ ತುಂಬಿದ ಕಣಿವೆ ಪ್ರದೇಶ. ಅತ್ಯಂತ ಸುಂದರ ತಾಣ. ಇಲ್ಲಿಗೆ ಕುದುರೆ ಮೂಲಕ ಸವಾರಿ ಮಾಡಬೇಕು. ವಾಹನ ಕೆಳಗೆ ನಿಲ್ಲಿಸಿ ಸ್ಥಳೀಯರು ಕದುರೆ ಸವಾರಿ ಸೇವೆ ನೀಡುತ್ತಾರೆ. ಟಿಕೆಟ್ ಖರೀದಿಸಿ ಈ ಕುದುರೆ ಸವಾರಿ ಮೂಲಕ ಮೇಲಿನ ಪ್ರವಾಸಿ ತಾಣಕ್ಕೆ ತರಳಬೇಕು. ಹೀಗೆ ಕೊಲ್ಹಾಪುರದ ಹಾಗೂ ಸೊಲ್ಹಾಪುರದ 2 ಕುಟುಂಬದ ಸದಸ್ಯರು ಕುದುರೆ ಏರಲು ಟಿಕೆಟ್ ಖರೀದಿಸಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಪಹಲ್ಗಾಮ್ ಪರ್ವತಕ್ಕೆ ತೆರಳಿದ್ದ ಕಾರಣ ಕುದುರೆ ಇರಲಿಲ್ಲ. 

ಕುದುರೆಯಿಂದ ಉಳಿಯಿತು ಪ್ರಾಣ
ಕುದುರೆ ಸರ್ವೀಸ್ ನೀಡುವ ಸ್ಥಳೀಯರು ಕೆಲ ಹೊತ್ತು ಕಾಯುವಂತೆ ಸೂಚಿಸಿದ್ದಾರೆ. ಸದ್ಯ ಎಲ್ಲಾ ಕುದುರಗಳು ಬೆಟ್ಟದ ಮೇಲಕ್ಕೆ ತೆರಳಿದೆ. ಪ್ರವಾಸಿಗರ ಹೊತ್ತು ತೆರಳಿದೆ. ಕೆಲ ಹೊತ್ತಿನಲ್ಲೇ ವಾಪಾಸ್ ಆಗಲಿದೆ. ಹೀಗಾಗಿ ಇಲ್ಲೆ ಕೆಲ ಹೊತ್ತು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಇದರಂತೆ ಒಟ್ಟು 17 ಮಂದಿ ಕುದುರೆಗಾಗಿ ಕಾಯುತ್ತಾ ನಿಂತಿದ್ದಾರೆ. ಪ್ರವಾಸಿಗರನ್ನು ಹೊತ್ತೊಯ್ದ ಕುದುರೆ ವಾಪಸ್ ಮರಳಲು ವಿಳಂಬವಾಗಿದೆ.

ನಿಂತಲ್ಲೇ ಬೆವರಿದ ಪ್ರವಾಸಿಗರು
ಕುದುರೆ ವಿಳಂಬವಾದ ಕಾರಣ ಕಾಯುತ್ತಾ ನಿಂತಿದ್ದ ಪ್ರವಾಸಿಗರೆ ಸ್ಥಳೀಯರು ತಕ್ಷಣವೇ ಇಲ್ಲಿಂದ ತೆರಳಲು ಸೂಚಿಸಿದ್ದಾರೆ. ಮೇಲೆ ಉಗ್ರರ ದಾಳಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕ್ಷಣಾರ್ಧಧಲ್ಲೇ ಪೊಲೀಸರು ಆಗಮಿಸಿದ್ದಾರೆ. ಸ್ಥಳೀಯರ ನೆರವು ನೀಡಿದ್ದಾರೆ. ಬಳಿಕ ಭದ್ರತಾ ಪಡೆ ಆಗಮಿಸಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿತ್ತು. ಗುಂಡಿನ ಶಬ್ದ ಕೇಳಿ ಕಾಯುತ್ತಾ ನಿಂತಿದ್ದ 17 ಸದಸ್ಯರು ನಿಂತಲ್ಲೇ ಬೆವರಿದ್ದಾರೆ. ಆತಂಕ ಹೆಚ್ಚಾಗಿದೆ. ಮಹಿಳೆಯರು ಸೇರಿದಂತೆ 17 ಸದಸ್ಯರ 2 ಕುಟುಂಬ ಸುರಕ್ಷಿತ ತಾಣದಲ್ಲಿ ಇದ್ದರೂ ಕಣ್ಣೀರು, ಆತಂಕ ಕಡಿಮೆಯಾಗಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ತೀವ್ರ ಆಘಾತ ಹಾಗೂ ನೋವಾಗಿತ್ತು ಎಂದು ಈ ಕುಟುಂಬ ಸದಸ್ಯರಲ್ಲಿದ್ದ ಸುರೇಂದ್ರ ದತ್ತಾತ್ರಯ ಸಪಾಲೆ ಹೇಳಿದ್ದಾರೆ.

ಕುದುರೆ ಸವಾರಿ ವಿಳಂಬವಾಗಿತ್ತು. ಹೀಗಾಗಿ ನಮ್ಮ ಪ್ರಾಣ ಉಳಿಯಿತು. ಆದರೆ ಘಟನೆ ತೀವ್ರ ನೋವು ತಂದಿತ್ತು. ನಮ್ಮಂತೆ ಪ್ರವಾಸಕ್ಕೆ ಬಂದವರ ಮೇಲೆ ಈ ರೀತಿ ದಾಳಿ ನಡೆದಿದೆ ಅನ್ನೋದು ತೀವ್ರ ನೋವಾಗಿದೆ ಎಂದು ಸುರೇಂದ್ರ ಹೇಳಿದ್ದಾರೆ.