ಶಾಲೆಯ ಬೆಳಗಿನ ಪ್ರಾರ್ಥನೆಯ ವೇಳೆ ಅಜಾನ್, ಪೋಷಕರ ಆಕ್ರೋಶ!
Maharashtra School Azan: ಮಹಾರಾಷ್ಟ್ರದ ಖಾಂಡಿವಿಲಿಯಲ್ಲಿ ಶಾಲಾ ಮಕ್ಕಳ ಬೆಳಗಿನ ಪ್ರಾರ್ಥನೆಯಲ್ಲಿ ಅಜಾನ್ ಹೇಳಿಕೊಡುತ್ತಿದ್ದ ಘಟನೆ ನಡೆಸಿದೆ. ಇದರ ಬೆನ್ನಲ್ಲಿಯೇ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮುಂಬೈ (ಜೂ.16): ಮಹಾರಾಷ್ಟ್ರದ ಖಾಂಡಿವಿಲಿ ಪ್ರದೇಶದ ಶಾಲೆಯೊಂದರಲ್ಲಿ ಅಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಖಾಂಡಿವಿಲಿಯ ಮಹಾವೀರ್ ನಗರ ಪ್ರದೇಶದಲ್ಲಿರುವ ಕಪೋಲ್ ವಿದ್ಯಾನಿಧಿ ಅಂತಾರಾಷ್ಟ್ರೀಯ ಸ್ಕೂಲ್ನಲ್ಲಿ ಶಾಲಾ ಮಕ್ಕಳ ಬೆಳಗಿನ ಪ್ರಾರ್ಥನೆಯಲ್ಲಿ ಅಜಾನ್ಅನ್ನು ಹೇಳಿಕೊಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದರ ಬೆನ್ನಲ್ಲಿಯೇ ವಿವಾದ ಭುಗಿಲೆದ್ದಿದೆ. ಶಾಲೆಯ ಬೆಳಗಿನ ಪ್ರಾರ್ಥನೆಯಲ್ಲಿ ಅಜಾನ್ ಕಲಿಸುತ್ತಿದ್ದ ವಿಷಯ ತಿಳಿದ ತಕ್ಷಣವೇ ಸಿಟ್ಟಿಗೆದ್ದಿರುವ ಪೋಷಕರು, ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರ. ಅದರೊಂದಿಗೆ ಸ್ಥಳೀಯ ಶಿವಸೇನೆ ಕಾರ್ಯಕರ್ತರಿಗೂ ಇದರ ಮಾಹಿತಿ ನೀಡಿದ್ದು, ಶಾಲೆಯ ಬಳಿ ವಾತಾವರಣ ಇನ್ನಷ್ಟು ಬಿಗಡಾಯಿಸಿದೆ. ಮಹಾವೀರನಗರದ ಈ ಶಾಲೆಯಲ್ಲಿ ಪ್ರಾರ್ಥನೆಯ ವೇಳೆ ಮಕ್ಕಳಿಗೆ ಅಜಾನ್ ಕಲಿಸುತ್ತಿರುವ ಮಾಹಿತಿ ಬೆಳಕಿಗೆ ಬಂದ ಬೆನ್ನಲ್ಲಿಯೇ ಹಲವು ಪೋಷಕರು ಹಾಗೂ ಶಿವಸೇನೆ ಕಾರ್ಯಕರ್ತರು ಶಾಲೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಈ ವಿಷಯ ಸ್ಥಳೀಯ ಪೊಲೀಸರಿಗೂ ತಲುಪಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೈನಿಕರು ಆಗ್ರಹಿಸಿದ್ದಾರೆ. ಸುದೀರ್ಘ ಗದ್ದಲದ ನಂತರ ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇದು ಇತ್ಯರ್ಥವಾಗಿದೆ.
ಎಚ್ಚರಿಸಿದ ಶಿವಸೈನಿಕರು: ಶಾಲೆಯ ಆವರಣದಲ್ಲಿದ್ದ ಶಿವಸೇನೆ ಕಾರ್ಯಕರ್ತರು ಹಿಂದೂ ಮಕ್ಕಳ ಮತಾಂತರಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದು ಹಿಂದೆಂದೂ ಸಂಭವಿಸಿರಲಿಲ್ಲ. ಈ ವಿಷಯದ ನಂತರ, ಶಾಲೆಯ ಆಡಳಿತವು ಶಿವಸೇನಾ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದೆ. ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂದು ತಿಳಿಸಿದೆ. ಆಜಾನ್ ಕಲಿಸುವ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದರೆ ಶಿವಸೇನೆ ಶೈಲಿಯಲ್ಲೇ ಉತ್ತರ ನೀಡಲಾಗುವುದು ಎಂದು ಅವರು ಎಚ್ಚರಿಸಿ ಹೋಗಿದ್ದಾರೆ.
'ಖಾಂಡಿವಿಲಿಯ ಖಾಸಗಿ ಶಾಲೆಯ ಬೆಳಗಿನ ಪ್ರಾರ್ಥನೆಯ ವೇಳೆ ಅಜಾನ್ಅನ್ನು ಕಲಿಸಿಕೊಡಲಾಗುತ್ತಿದೆ ಎನ್ನುವ ನಿಟ್ಟಿನಲ್ಲಿ ಇಂದು ನಾವು ದೂರನ್ನು ಸ್ವೀಕಾರ ಮಾಡಿದ್ದೆವು. ಪೊಲೀಸರು ದೂರನ್ನು ಸ್ವೀಕರಿಸಿದ್ದು ಮಾತ್ರವಲ್ಲದೆ, ಈ ಕುರಿತಾಗಿ ತನಿಖೆಯನ್ನೂ ಆರಂಭ ಮಾಡಿದ್ದೇವೆ. ಎಲ್ಲಾ ಕೋನಗಳಲ್ಲಿ ಇದರ ತನಿಖೆ ನಡೆಯಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ' ಎಂದು ಡಿಸಿಪಿ ಅಜಯ್ ಕುಮಾರ್ ಭನ್ಸಾಲ್ ತಿಳಿಸಿದ್ದಾರೆ. ಇನ್ನು ಖಾಂಡಿವಿಲಿ ಪೂರ್ವದಲ್ಲಿರುವ ಈ ಶಾಲೆ ಮಹಾವೀರ್ ನಗರದ ಹೃದಯ ಭಾಗದಲ್ಲಿದ್ದು, ಪ್ರದೇಶದ ಪ್ರತಿಷ್ಠಿತ ಶಾಲೆ ಎನಿಸಿಕೊಂಡಿದೆ.
ಆಜಾನ್ ಮಾಡಿಸಿದ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಡಾ.ರೇಷ್ಮಾ ಹೆಗ್ಡೆ ತಿಳಿಸಿದ್ದಾರೆ. “ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಇದು ಹಿಂದೂ ಶಾಲೆ ಮತ್ತು ನಮ್ಮ ಪ್ರಾರ್ಥನೆಗಳಲ್ಲಿ ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನೆ ಸೇರಿವೆ. ಭವಿಷ್ಯದಲ್ಲಿ ಇಂತಹ ನಿದರ್ಶನ ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭರವಸೆ ನೀಡಲು ಬಯಸುತ್ತೇವೆ, ”ಎಂದು ತಿಳಿಸಿದ್ದಾರೆ.
ಅಜಾನ್ ಕೂಗಿನಿಂದ ಆಗುವ ಸಮಸ್ಯೆಗಳ ಬಹಿರಂಗಕ್ಕೆ ಹಿಂಜರಿಯಲ್ಲ: ಕೆಎಸ್ ಈಶ್ವರಪ್ಪ
ಮತಾಂತರದ ಕುರಿತು ರಾಷ್ಟ್ರವ್ಯಾಪಿ ಚರ್ಚೆ: ಅಪ್ರಾಪ್ತ ವಯಸ್ಕರನ್ನು ಆನ್ಲೈನ್ ಗೇಮಿಂಗ್ ಬಲೆಗೆ ಬೀಳಿಸುವ ಮೂಲಕ ಅವರನ್ನು ಗುರಿಯಾಗಿಸಿಕೊಂಡು ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಗಾಜಿಯಾಬಾದ್ ಪೊಲೀಸರ ಪ್ರಕಾರ, ಬಡ್ಡೋ ಎಂಬ ವ್ಯಕ್ತಿಯೂ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಅವನು ಹಲವಾರು ಜನರನ್ನು ಮತಾಂತರದ ಬಲೆಯಲ್ಲಿ ಸಿಲುಕಿಸಿದ್ದ ಎನ್ನಲಾಗಿದೆ. ಇದಲ್ಲದೇ ಇತ್ತೀಚೆಗೆ ಉತ್ತರಾಖಂಡದ ಉತ್ತರಕಾಶಿ ಪ್ರದೇಶದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಗಲಾಟೆ ನಡೆದಿತ್ತು. ಅಂದಿನಿಂದ ಮತಾಂತರದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಇದೇ ವೇಳೆ ಮಹಾರಾಷ್ಟ್ರದ ಶಾಲೆಗಳಲ್ಲಿ ಆಜಾನ್ ಕಲಿಸುವ ವಿಷಯ ಈ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ.
ಅಜಾನ್ ಸದ್ದು ಕೇಳುತ್ತಲೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಡು ಹೇಳೋದನ್ನ ನಿಲ್ಲಿಸಿದ ಶೆಹನಾಜ್!