ಸೋಂಕು ನಿಯಂತ್ರಣಕ್ಕೆ ಬಂದು ಸಹಜ ಸ್ಥಿತಿ ಮರಳುತ್ತಿದೆ ಎನ್ನುವ ಹಂತದಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ 2ನೇ ಅಲೆ ಹೊಸ ಆತಂಕ ಹುಟ್ಟುಹಾಕಿದೆ.

ಮುಂಬೈ (ಫೆ.19): ರಾಜ್ಯದಲ್ಲಿ ಹೊಸ ಕೊರೋನಾ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಬೆನ್ನಲ್ಲೇ, ಆಯ್ದ ನಗರಗಳಲ್ಲಿ ಸೆಮಿ ಲಾಕ್ಡೌನ್‌ಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇನ್ನೇನು ಸೋಂಕು ನಿಯಂತ್ರಣಕ್ಕೆ ಬಂದು ಸಹಜ ಸ್ಥಿತಿ ಮರಳುತ್ತಿದೆ ಎನ್ನುವ ಹಂತದಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ 2ನೇ ಅಲೆ ಹೊಸ ಆತಂಕ ಹುಟ್ಟುಹಾಕಿದೆ. ಜೊತೆಗೆ ಮಹಾರಾಷ್ಟ್ರದ ಈ ಬೆಳವಣಿಗೆ ನೆರೆಯ ಕರ್ನಾಟಕಕ್ಕೂ ಎಚ್ಚರಿಕೆಯ ಸಂದೇಶ ರವಾನಿಸಿದೆ.

Add Asianetnews Kannada as a Preferred SourcegooglePreferred

ಕಳೆದ ಒಂದೂವರೆ ತಿಂಗಳನಿಂದ ಹಂತಹಂತವಾಗಿ ಇಳಿಕೆ ದಾಖಲಿಸುತ್ತಿದ್ದ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಹೊಸ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ದಾಖಲಾಗಿದೆ. ಜೊತೆಗೆ ಕೇರಳ ಹಿಂದಿಕ್ಕಿ ರಾಜ್ಯ ಮತ್ತೆ ಮೊದಲ ಸ್ಥಾನಕ್ಕೇರಿದೆ. ಬುಧವಾರ ರಾಜ್ಯದಲ್ಲಿ 4787 ಹೊಸ ಪ್ರಕರಣ ದಾಖಲಾಗಿದ್ದು, ಇದು ಈ ವರ್ಷದ ಗರಿಷ್ಠ ದೈನಂದಿನ ಪ್ರಮಾಣವಾಗಿತ್ತು.

10 ದಿನ ಬಂದ್‌:  ಯವತ್ಮಾಲ್‌ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಂದಲೇ ಜಾರಿಗೆ ಬರುವಂತೆ 10 ದಿನಗಳ ಲಾಕ್ಡೌನ್‌ ಘೋಷಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಶಾಲಾ,ಕಾಲೇಜು, ಕೋಚಿಂಗ್‌ ಸೆಂಟರ್‌ ಮುಚ್ಚಿರಲಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ವಿವಾಹಕ್ಕೆ ಗರಿಷ್ಠ 50 ಜನರ ಮಿತಿ ವಿಧಿಸಲಾಗಿದೆ. ಆದರೆ ಅಗತ್ಯ ವಸ್ತುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಶ್ವಾಸಕೋಶದ ಮೇಲೆ ಕೊರೋನಾ ಎಫೆಕ್ಟ್ ಪತ್ತೆಗೆ IISC ತಂತ್ರಾಂಶ ...

ವಾರಾಂತ್ಯದ ನಿರ್ಬಂಧ: ಇನ್ನು ಪಕ್ಕದ ಅಮರಾವತಿಯಲ್ಲಿ ವಾರಾಂತ್ಯದ ಲಾಕ್ಡೌನ್‌ ಪ್ರಕಟಿಸಲಾಗಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಲಾಕ್ಡೌನ್‌ ಜಾರಿಯಲ್ಲಿರಲಿದೆ. ಮಾಲ್‌, ಹೋಟೆಲ್‌, ರೆಸ್ಟೋರೆಂಟ್‌ಗಳ ತೆರೆದಿರಬಹುದಾದ ಅವಧಿಯನ್ನು ರಾತ್ರಿ 10ರ ಬದಲಾಗಿ 8ಕ್ಕೆ ಇಳಿಸಲಾಗಿದೆ. ಈಜುಕೊಳ, ಒಳಾಂಗಣ ಕ್ರೀಡೆಗೂ ನಿಷೇಧ ಇರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗರಿಷ್ಠ 5 ಜನ ಭಾಗವಹಿಸಬಹುದು.

ಕಠಿಣ ನಿಯಮ: ರಾಜಧಾನಿ ಮುಂಬೈನಲ್ಲಿ ಎಲ್ಲಾ ಸಾರ್ವಜನಿಕ ಸ್ಥಳ, ಕಚೇರಿಗಳಲ್ಲಿ ಮಾಸ್ಕ್‌ ಧಾರಣೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್‌ ಧರಿಸದೇ ಇದ್ದರೆ ಸ್ಥಳದಲ್ಲೇ 200 ರು. ದಂಡ ವಿಧಿಸಲಾಗುವುದು ಎಂದು ಬೃಹನ್ಮುಂಬೈ ಪಾಲಿಕೆ ಪ್ರಕಟಿಸಿದೆ.

ಜನರು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂಥ ನಿಯಮ ಪಾಲಿಸದೇ ಹೋದಲ್ಲಿ ರಾಜ್ಯದ ಜನತೆ ಮತ್ತೆ ಲಾಕ್ಡೌನ್‌ ಎದುರಿಸಬೇಕಾಗಿ ಬರುತ್ತದೆ ಎಂದು ಮುಖಮಂತ್ರಿ ಉದ್ಧವ್‌ ಠಾಕ್ರೆ ಮಂಗಳವಾರ ಎಚ್ಚರಿಕೆ ನೀಡಿದ್ದರು. ಮತ್ತೊಂದೆಡೆ ಸ್ಥಳೀಯ ರೈಲು ಸೇವೆ ಆರಂಭವಾದ ಬಳಿಕ ರಾಜಧಾನಿ ಮುಂಬೈನಲ್ಲೂ ಹೊಸ ಪ್ರಕರಣಗಳಲ್ಲಿ ಗಣನೀಯ ಏರಿಕೆ ದಾಖಲಾಗುತ್ತಿದ್ದು, ಸೀಮಿತ ಲಾಕ್ಡೌನ್‌ ಜಾರಿ ಬಗ್ಗೆ ಬೃಹನ್ಮುಂಬೈ ಪಾಲಿಕೆ ಮೇಯರ್‌ ಮಂಗಳವಾರ ಸುಳಿವು ನೀಡಿದ್ದರು.