1988ರಿಂದ ಶಾರದ ದೇವಸ್ಥಾನ ಸಮಿತಿಯಲ್ಲಿದ್ದ ಇಬ್ಬರು ಮುಸ್ಲಿಮರು ಔಟ್, ಹೊಸ ಆದೇಶ ಜಾರಿ!
ಮೈಹರ್ ಶಾರಾದ ದೇವಸ್ಥಾನ ಅತ್ಯಂತ ಪ್ರಸಿದ್ಧ ಭಕ್ತಿ ಕೇಂದ್ರ. ಆದರೆ ಕಳೆದ 35 ವರ್ಷಗಳಿಂದ ಶಾರಾದ ದೇವಸ್ಥಾನ ಸಮಿತಿಯಲ್ಲಿ ಇಬ್ಬರು ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಇದೀಗ ಈ ನಿಯಮ ಬದಲಿಸಲಾಗಿದೆ. ಹಿಂದೂ ದೇವಾಲಯ ಸಮಿತಿಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ
ಮೈಹರ್(ಏ.19): ಮಧ್ಯ ಪ್ರದೇಶದ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಮೈಹರ್ ಪಟ್ಟಣದಲ್ಲಿರುವ ಶಾರದ ದೇವಸ್ಥಾನ ಸಮಿತಿಯಲ್ಲಿ ಕಳೆದ 35 ವರ್ಷಗಳಿಂದ ಇದ್ದ ನಿಯಮ ಬದಲಿಸಲಾಗಿದೆ. ಸಮಿತಿಯಲ್ಲಿ ಇಬ್ಬರು ಮುಸ್ಲಿಮರಿಗೆ ಕಳೆದ 35 ವರ್ಷಗಳಿಂದ ಅವಕಾಶ ನೀಡಲಾಗಿತ್ತು. ಇದೀಗ ಮಧ್ಯಪ್ರದೇಶ ಸರ್ಕಾರ, ಹಿಂದೂ ದೇವಾಲಯ ಸಮಿತಿಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡುವ ಪದ್ದತಿಗೆ ಬ್ರೇಕ್ ಹಾಕಿದೆ. ಹೊಸ ಆದೇಶ ಹೊರಡಿಸಿರುವ ಸರ್ಕಾರ, ಇಬ್ಬರು ಮುಸ್ಲಿಮರ ಹುದ್ದೆಯನ್ನು ತೆಗೆದುಹಾಕಿದೆ. ಮಧ್ಯಪ್ರದೇಶ ಧಾರ್ಮಿಕ ಇಲಾಖೆ ಕಾರ್ಯದರ್ಶಿ ಪುಷ್ಪಾ ಕಲೇಶ್ ಆದೇಶ ಹೊರಡಿಸಿದ್ದಾರೆ.
ಮೈಹರ್ ಪಟ್ಟಣದಲ್ಲಿರುವ ಮಾ ಶಾರದ ಮಂದಿರ ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದ ಸಮಿತಿಯಲ್ಲಿ 1988ರಲ್ಲಿ ಇಬ್ಬರು ಮುಸ್ಲಿಮರಿಗೆ ಅವಕಾಶ ನೀಡಲಾಗಿತ್ತು. ಮೈಹರ್ ಪಟ್ಟಣದಲ್ಲಿ ಮುಸ್ಲಿಮ್ ಸಮುದಾಯ ಪ್ರಾಬಲ್ಯವೂ ಹೆಚ್ಚಿದೆ. ಹೀಗಾಗಿ 1988ರಲ್ಲಿ ಸೌಹಾರ್ಧತೆ ಹಾಗೂ ಇತರ ಕಾರಣಗಳಿಂದ ದೇವಾಲಯ ಸಮಿತಿ ಇಬ್ಬರು ಮುಸ್ಲಿಮವರಿಗೆ ಕೆಲಸ ನೀಡಿತ್ತು. ಈ ಸಂಪ್ರದಾಯ ಬಳಿಕ ಮುಂದುವರಿದಿತ್ತು. ಇದು ಸರ್ಕಾರಿ ಆದೇಶವಾಗಿ ಸೇರಿಕೊಂಡಿತ್ತು.
ಈ ದೇವಾಲಯದಲ್ಲಿ ದುರ್ಗೆಗೆ ನಿತ್ಯ ಪೂಜಿಸುವುದು ಮುಸ್ಲಿಂ ಅರ್ಚಕ!
ಕಳೆದೊಂದು ವರ್ಷದಿಂದ ಈ ಕುರಿತು ವಿಶ್ವಹಿಂದೂ ಪರಿಷತ್, ಬಜರಂಗದಳ ಸತತ ಪ್ರತಿಭಟನೆ ಮಾಡಿತ್ತು. ಹಿಂದೂ ದೇವಲಾಯದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿರುವುದು ವಿರೋಧಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿತ್ತು. ಹೀಗಾಗಿ ಜನವರಿ ತಿಂಗಳಲ್ಲಿ ಧಾರ್ಮಿಕ ಇಲಾಖೆ ಸಚಿವೆ ಉಶಾ ಸಿಂಗ್ ಠಾಕೂರ್ ಸಮಿತಿ ರಚಿಸಿ ವರದಿ ಸೂಚಿಸಿದ್ದರು.
ದೇವಸ್ಥಾನ ಸಮಿತಿಯ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿ ಅನುರಾಗ್ ವರ್ಮಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 1988ಕ್ಕೂ ಮೊದಲು ಮಾ ಶಾರಾದ ದೇವಿ ಮಂದಿರ ಸಮಿತಿಯಲ್ಲಿ ಮುಸ್ಲಿಮರಿಗೆ ಅವಕಾಶ ಇರಲಿಲ್ಲ. 1988ರ ಬಳಿಕವೇ ಈ ಪದ್ದತಿ ಬಂದಿದೆ. ಇದೀಗ ಕಾನೂನು ಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಮಾ ಶಾರದ ಮಂದಿರದ ಸಮಿತಿಯಲ್ಲಿ ಇಬ್ಬರು ಮುಸ್ಲಿಮರಿಗೆ ಅವಕಾಶ ನೀಡಲು ಒಂದು ಕಾರಣವಿದೆ. ಮೈಹರ್ ಪಟ್ಟಣ ಎರಡು ವಿಚಾರಗಳಿಂದ ಬಾರಿ ಪ್ರಸಿದ್ಧಿಯಾಗಿದೆ. ಒಂದು ಶಾರದ ಮಂದಿರ, ಇನ್ನೊಂದು ಮೈಹರ್ ಘರನಾ ಕ್ಲಾಸಿಕಲ್ ಮ್ಯೂಸಿಕ್. ಬಾಬಾ ಅಲ್ಲಾವುದ್ದೀನ್ ಖಾನ್ ಹುಟ್ಟುಹಾಕಿದ ಮೈಹರ್ ಘರನಾ ಭಾರತದಲ್ಲಿ ಮಾತ್ರವಲ್ಲ ವಿಶ್ವಪ್ರಸಿದ್ಧ ಕ್ಲಾಸಿಕಲ್ ಮ್ಯೂಸಿಕ್.
ಈ ಇಡೀ ನಗರದಲ್ಲಿ ಮಾಂಸಾಹಾರಕ್ಕಿದೆ ನಿಷೇಧ, ಜಗತ್ತಿನ ಏಕೈಕ ಸಸ್ಯಾಹಾರ ನಗರ ಎಲ್ಲಿದೆ ಬಲ್ಲಿರಾ?
ಹಲವು ರಾಗಗಳ ಸಂಯೋಜಕರಾಗಿರುವ ಅಬ್ದುಲ್ ಅಲ್ಲಾವುದ್ದೀನ್ ಖಾನ್, ಸಂಗೀತ ಕ್ಷೇತ್ರದಲ್ಲಿ ಅದ್ಭುತ ಕೊಡುಗೆ ನೀಡಿದ್ದಾರೆ. ಪಂಡಿತ್ ರವಿ ಶಂಕರ್ ಅವರ ಗುರುಗಳಾಗಿರುವ ಮೈಹರ್ ಅಲ್ಲಾವುದ್ದೀನ್ ಖಾನ್, ಇದೇ ಮಾ ಶಾರದ ಮಂದಿರದ 1,063 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನಕ್ಕೆ ತೆರಳಿ ಪ್ರತಿ ದಿನ ಶಾರಾದ ದೇವಿ ಕುರಿತು ಭಜನೆ ಹಾಗೂ ಹಾಡು ಹಾಡುತ್ತಿದ್ದರು. ಅಲ್ಲಾವುದ್ದೀನ್ ಖಾನ್ ಮನೆಯಲ್ಲಿ ಕಾಳಿ ಮಾತೆ, ಶ್ರೀಕೃಷ್ಣ ಹಾಗೂ ಜೀಸಸ್ ಫೋಟೋಗಳನ್ನು ಹಾಕಿದ್ದರು. ಮೈಹರ್ ಅಲ್ಲಾವುದ್ದೀನ್ ಖಾನ್ ಶಾರದ ಮಂದಿರ ಹಾಗೂ ಹಿಂದೂ ಧರ್ಮಕ್ಕೆ ಸಲ್ಲಿಸಿರುವ ಅನನ್ಯ ಕೊಡುಗೆ ಪರಿಗಣಿಸಿ ಇಬ್ಬರು ಮುಸ್ಲಿಮರಿಗೆ ಈ ದೇವಸ್ಥಾನದ ಸಮಿತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು.
ಈ ಅವಕಾಶ ಈಗ ಅಪ್ರಸ್ತುತ. ಮಹೈರ್ ಅಲ್ಲಾವುದ್ದೀನ್ ಖಾನ್ ಕೊಡುಗೆ ಹಾಗೂ ಸೇವೆಯನ್ನು ಗೌರವಿಸುತ್ತೇವೆ. ಆದರೆ ಇಬ್ಬರು ಮುಸ್ಲಿಮರಿಗೆ ಸದ್ಯ ದೇವಸ್ಥಾನದ ಸಮಿತಿಯಲ್ಲಿ ಸೇರಿಸಿ ಅವರಿಗೆ ವೇತನ ನೀಡುವ ಅವಶ್ಯಕತೆ ಇಲ್ಲ ಎಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವಾದಿಸಿತ್ತು. ವಾದ ವಿವಾದ ಬಳಿಕ ಸರ್ಕಾರ ಇದೀಗ ಖಡಕ್ ಆದೇಶ ಹೊರಡಿಸಿದೆ.