ಮಧ್ಯ ಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್, ಪುತ್ರ ನಕುಲ್ ಬಿಜೆಪಿ ಸೇರ್ಪಡೆ ಸಾಧ್ಯತೆ!
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಿಷ್ಠಾವಂತ ನಾಯಕ ಕಮಲ್ ನಾಥ್ ಪುತ್ರ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರ? ಅನ್ನೋ ಚರ್ಚೆ ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ಕಮಲ್ ನಾಥ್ ಪುತ್ರನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಾಂಗ್ರೆಸ್ ಪಕ್ಷದ ಹೆಸರು, ಚಿಹ್ನೆ ಮಾಯವಾಗಿದೆ.
ಭೋಪಾಲ್(ಫೆ.17) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿ ಜೊತೆಗೆ ಕಾಂಗ್ರೆಸ್ ಕೂಡ ಭಾರಿ ಸಂಕಷ್ಟ ಎದುರಿಸುತ್ತಿದೆ. ಕಾಂಗ್ರೆಸ್ನ ಪ್ರಮುಖ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಸುದೀರ್ಘ ದಿನಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದ ನಾಯಕರು ಇದೀಗ ಬಿಜೆಪಿ ಸೇರಿದಂತೆ ಇತರ ಪಕ್ಷ ಸೇರುತ್ತಿದ್ದಾರೆ. ಇದೀಗ ಕಾಂಗ್ರೆಸ್ನಿಂದ ಮತ್ತೊಂದು ವಿಕೆಟ್ ಪತನವಾಗುವ ಸಾಧ್ಯತೆ ಕಾಣಿಸುತ್ತಿದೆ. ಮಧ್ಯಪ್ರದೇಶ ಮಾಜಿ ಮಖ್ಯಮಂತ್ರಿ, ಕಾಂಗ್ರೆಸ್ ನಿಷ್ಠಾವಂತ ನಾಯಕ ಕಮಲ್ ನಾಥ್ ಪುತ್ರ ಸಂಸದ ನಕುಲ್ ಕಮಲ್ ನಾಥ್ ಬಿಜೆಪಿ ಸೇರ್ಪಡೆ ಸಾಧ್ಯತೆಗಳು ಕಾಣಿಸುತ್ತಿದೆ.
ಚಿಂದ್ವಾರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದನಾಗಿರುವ ನಕುಲ್ ಕಮಲ್ ನಾಥ್ ಇದೀಗ ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ನಕುಲ್ ಕಮಲ್ ನಾಥ್ ಸಾಮಾಜಿಕ ಮಾಧ್ಯಮಗಳ ಖಾತೆಯಿಂದ ಕಾಂಗ್ರೆಸ್ ಪಕ್ಷದ ಚಿಹ್ನೆ, ಹೆಸರು ಮಾಯವಾಗಿದೆ. ನಕುಲ್ ಕಮಲ್ ನಾಥ್, ಚಿಂದ್ವಾರ ಸಂಸದ ಅನ್ನೋ ಮಾಹಿತಿ ಮಾತ್ರ ಹಾಕಿದ್ದಾರೆ.
ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಸಿಎಂ ಅಶೋಕ್ ಚವಾಣ್
ಕೆಲ ವರದಿಗಳ ಪ್ರಕಾರ ನಕುಲ್ ಕಮಲ್ ನಾಥ್ ಜೊತೆ ಕಮಲ್ ನಾಥ್ ಕೂಡ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಆದರೆ ಇದು ಅಧಿಕೃತವಲ್ಲ. ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಮಧ್ಯಪ್ರದೇಶ ಪ್ರವೇಶ ಪಡೆಯುತ್ತಿದ್ದಂತೆ ನಕುಲ್ ಕಮಲ್ ನಾಥ್ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತಿದೆ.
ನಕುಲ್ ಕಮಲ್ನಾತ್ಗೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶಗಳು ಸಿಕ್ಕಿಲ್ಲ, ಮಾದಿ ಸಿಎಂ ಪುತ್ರ, ಕಾಂಗ್ರೆಸ್ ಹೈಕಮಾಂಡ್ ಜೊತೆ ಆತ್ಮೀಯತೆ ಹೊಂದಿರುವ ಕಮಲ್ ನಾಥ್ ಪುತ್ರ ಇದುವರೆಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಅಸಮಾಧಾನಗೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇತ್ತ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಮಲನಾಥ್ ಸಂಪರ್ಕಿಸದೆ ಗ್ವಾಲಿಯರ್ ಚಂಪಾಲ್ ನಾಯಕ ಅಶೋಕ್ ಸಿಂಗ್ಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಕಮಲನಾಥ್ ಅಸಮಾಧಾನಗೊಂಡಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತಿದೆ. ಹೀಗಾಗಿ ಕಮಲ್ ನಾಥ್ ಕೂಡ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
RLD ಮೈತ್ರಿ ಮುರಿದ ಬೆನ್ನಲ್ಲೇ ರಾಹುಲ್ ಯಾತ್ರೆ ಮಾರ್ಗ ಬದಲಾವಣೆ, ಪಶ್ಚಿಮ ಯುಪಿಗಿಲ್ಲ ಜೋಡೋ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ನಾಯಕ ದಿಗ್ವಿಜಯ ಸಿಂಗ್ ನೆಹರೂ ಗಾಂಧಿ ಕುಟುಂಬದ ರಾಜಕೀಯ ಆರಂಭಿಸಿದ ಕಮಲ್ ನಾಥ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆಯಲ್ಲ ಎಂದಿದ್ದಾರೆ. ಇಂದಿರಾ ಗಾಂಧಿಯವರಿಗೆ ಕಮಲ್ ನಾಥ್ ಆಪ್ತರಾಗಿದ್ದರು. ಕಮಲ್ ನಾಥ್ ಎಂದಿಗೂ ಕಾಂಗ್ರೆಸ್ ತೊರೆಯಲ್ಲ ಎಂದು ದಿಗ್ವಿಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.