ಪಾಕಿಸ್ತಾನದ ನಾಯಕರು ಕಾಂಗ್ರೆಸ್ ನ ಶೆಹಜಾದಾ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಪಲಾಮು (ಜಾರ್ಖಂಡ್‌) (ಮೇ.05): ‘ನಮ್ಮ ದೇಶದ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯಿಂದ ನೆರೆಯ ರಾಷ್ಟ್ರ ಭಯಗೊಂಡಿದೆ. ಹೀಗಾಗಿ ಪಾಕಿಸ್ತಾನದ ನಾಯಕರು ಕಾಂಗ್ರೆಸ್ ನ ಶೆಹಜಾದಾ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ‘ಭಯೋತ್ಪಾದಕ ದಾಳಿಯ ನಂತರ, ಕಾಂಗ್ರೆಸ್‌ನ ಹೇಡಿ ಸರ್ಕಾರವು ಜಾಗತಿಕ ವೇದಿಕೆಯಲ್ಲಿ ಅಳುತ್ತಿತ್ತು. ಆದರೆ ಈಗ ಭಾರತವು ಜಾಗತಿಕ ವೇದಿಕೆಯಲ್ಲಿ ಅಳುತ್ತಿದ್ದ ಸಮಯ ಕಳೆದುಹೋಗಿದೆ. 

Add Asianetnews Kannada as a Preferred SourcegooglePreferred

ಈಗ ಪಾಕಿಸ್ತಾನವು ಅಳುತ್ತಿದೆ ಮತ್ತು ಸಹಾಯಕ್ಕಾಗಿ ಕಿರುಚುತ್ತಿದೆ’ ಎಂದು ಮೋದಿ ವಿಶ್ಲೇಷಿಸಿದ್ದಾರೆ. ಜಾರ್ಖಂಡ್ ನ ಪಲಾಮುದಲ್ಲಿ ಶನಿವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ , ‘ಭಾರತ ಮಾತೆಗೆ ಅವಮಾನ ಮಾಡಿದರೆ ಎಂದಿಗೂ ಸಹಿಸುವುದಕ್ಕೆ ಆಗುವುದಿಲ್ಲ. ನವಭಾರತದಲ್ಲಿ ಸರ್ಜಿಕಲ್ ಸ್ಟ್ರೈಕ್‌ ಮತ್ತು ವೈಮಾನಿಕ ದಾಳಿಗೆ ಪಾಕ್ ಬೆಚ್ಚಿ ಬಿದ್ದಿದೆ. ಕಾಂಗ್ರೆಸ್ ಹಿಂದಿನಿಂದಲೂ ಭಯೋತ್ಪಾದನೆಯನ್ನು ಬೆಂಬಲಿಸಿಕೊಂಡು ಬರುತ್ತಿದೆ. 

ಹೀಗಾಗಿ ನೆರೆ ರಾಷ್ಟ್ರಗಳು ಅವರು ಪ್ರಧಾನಿಯಾಗಲಿ ಎಂದು ಬಯಸುತ್ತಿವೆ. ಆದರೆ ಭಾರತದ ಜನರು ಮಾತ್ರ ಸದೃಢ ಪ್ರಧಾನಿ ಹೊಂದಿರುವ ಬಲಿಷ್ಠ ದೇಶ ಬಯಸುತ್ತಿದೆ’ ಎಂದರು. ಇದೇ ಸಂದರ್ಭದಲ್ಲಿ ‘ಮುಸ್ಲಿಮರಿಗೆ ಮೀಸಲಾತಿ ನೀಡುವುದಕ್ಕಾಗಿ ಕಾಂಗ್ರೆಸ್ ಬದಲಿಸುವ ಸಂವಿಧಾನಕ್ಕೆ ನಾವು ಆಸ್ಪದ ನೀಡುವುದಿಲ್ಲ. 500 ವರ್ಷಗಳ ಹೋರಾಟದ ಫಲವಾಗಿರುವ ರಾಮ ಮಂದಿರ ಕೊಡುಗೆ ನೀಡಲಾಗಿದೆ. ಜೊತೆಗೆ 370 ವಿಧಿ ರದ್ದತಿ ಮಾಡಲಾಗಿದೆ. ಇದಕ್ಕಾಗಿ ನಮಗೆ ಮತ ನೀಡಿ’ ಎಂದರು.

ಪ್ರಜ್ವಲ್ ರೇವಣ್ಣ ಕೈ ಹಿಡಿದು ಮತಯಾಚಿಸಿದ್ದಕ್ಕೆ ಮೋದಿ ಪ್ರಶ್ನೆ ಮಾಡುತ್ತೇವೆ: ಡಿ.ಕೆ.ಶಿವಕುಮಾರ್‌

ಭ್ರಷ್ಟರ ಮೇಲೆ 5 ವರ್ಷದಲ್ಲಿ ಕಾನೂನು ಕ್ರಮ: ‘ನಾನು ಪ್ರಧಾನಿ ಹಾಗೂ ಮುಖ್ಯಮಂತ್ರಿ ಪಿಎಂ ಆಗಿದ್ದಾಗಲೂ ಯಾವುದೇ ಭ್ರಷ್ಟಚಾರ ಮಾಡಿಲ್ಲ. ಇಂದಿಗೂ ನನಗೆ ಸ್ವಂತ ಮನೆ ಇಲ್ಲ. ನನ್ನ ಬಳಿ ಸೈಕಲ್‌ ಕೂಡ ಇಲ್ಲ. ಆದರೆ ಭ್ರಷ್ಟ ಜೆಎಂಎಂ ಮತ್ತು ಕಾಂಗ್ರೆಸ್‌ನವರು ನಮ್ಮ ಮಕ್ಕಳಿಗಾಗಿ ಅಪಾರ ಸಂಪತ್ತು ಮಾಡಿದ್ದಾರೆ. ಇವರು ಇಂದು ಜೈಲು ಕೂಡ ಸೇರಿದ್ದಾರೆ.’ ಎಂದು ವಿಪಕ್ಷಗಳ ವಿರುದ್ಧ ಮೋದಿ ಹರಿಹಾಯ್ದರು. ‘ಹೀಗಾಗಿ ಜೈಲು ಸೇರಿದವರ ಪರ ಇಂದು ಇಂಡಿಯಾ ಕೂಟ ರ್‍ಯಾಲಿ ನಡೆಸುತ್ತಿದೆ. ಆದರೆ ನಮ್ಮ ಮುಂದಿನ 5 ವರ್ಷ ಅವಧಿಯಲ್ಲಿ ಇನ್ನಷ್ಟು ಭ್ರಷ್ಟರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಮೋದಿ ಎಚ್ಚರಿಸಿದರು.