ಡೆಪ್ಯುಟಿ ಸ್ಪೀಕರ್ ಹುದ್ದೆ: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಸಿದ ಅವಧೇಶ್ ಇಂಡಿಯಾ ಕೂಟದ ಅಭ್ಯರ್ಥಿ
ಉಪ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದರೆ ರಾಮಮಂದಿರ ಇರುವ ಅಯೋಧ್ಯೆಯಿಂದ ಲೋಕಸಭೆಗೆ ಆಯ್ಕೆಯಾದ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರನ್ನುಇಂಡಿಯಾ ಮೈತ್ರಿಕೂಟ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.
![Lok Sabha Deputy Speaker Election Ayodhya MP Awadhesh prasad will be India alliances candidate defeats who Defeat BJP in Ayodhya akb Lok Sabha Deputy Speaker Election Ayodhya MP Awadhesh prasad will be India alliances candidate defeats who Defeat BJP in Ayodhya akb](https://static-ai.asianetnews.com/images/01j1paep00e3rv60wzd2asaz47/capture_363x203xt.jpg)
ನವದೆಹಲಿ: ಇತ್ತೀಚೆಗೆ ಲೋಕಸಭೆಯ ಸ್ಪೀಕರ್ ಹುದ್ದೆಗೆ ಲೋಕಸಭೆಯ ಅತಿ ಹಿರಿಯ ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ನಿಲ್ಲಿಸಿ ಸಾಂಕೇತಿಕ ಹೋರಾಟ ತೋರಿಸಿದ್ದ ವಿಪಕ್ಷ ಇಂಡಿಯಾ ಮೈತ್ರಿಕೂಟ, ಉಪ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದರೆ ರಾಮಮಂದಿರ ಇರುವ ಅಯೋಧ್ಯೆಯಿಂದ ಲೋಕಸಭೆಗೆ ಆಯ್ಕೆಯಾದ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.
ಕಳೆದ ಲೋಕಸಭೆಯ ಅವಧಿಯಲ್ಲಿ ಎನ್ಡಿಎ ಮೈತ್ರಿಕೂಟ ಉಪಸ್ಪೀಕರ್ ಹುದ್ದೆಯನ್ನೇ ಭರ್ತಿ ಮಾಡಿರಲಿಲ್ಲ. ಸಾಂವಿಧಾನಿಕ ಹುದ್ದೆಯನ್ನು ಹೀಗೆ ಖಾಲಿ ಬಿಡುವುದು ಸರಿಯಲ್ಲ. ಹಿಂದಿನ ಸಂಪ್ರದಾಯದಂತೆ ಈ ಹುದ್ದೆಯನ್ನು ನಮಗೆ ಬಿಟ್ಟುಕೊಡಿ ಎಂದು ವಿಪಕ್ಷಗಳು ಸರ್ಕಾರವನ್ನು ಕೋರಿವೆ. ಆದರೆ ಇಂಥ ಯಾವುದೇ ಬೇಡಿಕೆಯನ್ನು ಈಡೇರಿಸುವ ಉದ್ದೇಶದಲ್ಲಿ ಎನ್ಡಿಎ ಕೂಟ ಇಲ್ಲ. ಜೊತೆಗೆ ಚುನಾವಣಾ ನಡೆಸುವ ಸಾಧ್ಯತೆ ಬಗ್ಗೆ ಕೂಡಾ ಅದು ಎಲ್ಲೂ ಮಾತನಾಡಿಲ್ಲ.
ಆಯೋಧ್ಯೆ ಮಾತ್ರವಲ್ಲ, ರಾಮಮಂದಿರ ಕಟ್ಟಿದ ಅಧಿಕಾರಿ ಪುತ್ರನಿಗೂ ಸೋಲುಣಿಸಿದ ಯುಪಿ!
ಹೀಗಾಗಿ ಒಂದು ವೇಳೆ ಚುನಾವಣೆ ನಡೆಸಿದರೆ, ಬಿಜೆಪಿಗೆ ಸಾಕಷ್ಟು ಮುಖಭಂಗ ಉಂಟುಮಾಡಿದ, ಅಯೋಧ್ಯಾ ನಗರಿ ಬರುವ ಫೈಜಾಬಾದ್ನಿಂದ ಗೆದ್ದಿರುವ ಅವಧೇಶ್ ಅವರನ್ನೇ ಕಣಕ್ಕೆ ಇಳಿಸಿ ಸಾಂಕೇತಿಕವಾಗಿ ಹೋರಾಟ ನಡೆಸುವ ಮತ್ತು ಬಿಜೆಪಿಗೆ ಇರಸುಮುರಸು ಉಂಟುಮಾಡುವ ಗುರಿಯನ್ನು ಇಂಡಿಯಾ ಕೂಟ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಎಸ್ಪಿ, ಕಾಂಗ್ರೆಸ್, ಟಿಎಂಸಿ ನಾಯಕರ ನಡುವೆ ನಡೆದ ಅನೌಪಚಾರಿಕ ಮಾತುಕತೆ ವೇಳೆ ಅವಧೇಶ್ ಹೆಸರನ್ನು ಸ್ವತಃ ಮಮತಾ ಬ್ಯಾನರ್ಜಿ ಅವರೇ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಅಯೋಧ್ಯೆಯಲ್ಲಿ ಬಿಜೆಪಿಯ ಲಲ್ಲುಸಿಂಗ್ ವಿರುದ್ಧ ಅವಧೇಶ್ 54567 ಮತಗಳ ಅಂತರದಿಂದ ಗೆದ್ದಿದ್ದರು.
ಏನೆಲ್ಲಾ ಅಭಿವೃದ್ಧಿ ಮಾಡಿದ್ರೂ ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಸ್ಥಳೀಯರು ಹೇಳೋದೇನು?