Scary Video: ವ್ಯಕ್ತಿಗೆ ಸಿಡಿಲು ಬಡಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಡಿದ ಸಿಡಿಲು
- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಇಂಡೋನೇಷಿಯಾ(ಡಿ.29): ಇಂಡೋನೇಷ್ಯಾ (Indonesia)ದ ಜಕಾರ್ತದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬನಿಗೆ ಸಿಡಿಲು ಬಡಿದ ದೃಶ್ಯವೊಂದು ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಘಟನೆಯ ಭಯಾನಕ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಡಿಲು ಬಡಿತಕ್ಕೊಳಗಾದ ವ್ಯಕ್ತಿಗೆ ಸುಟ್ಟ ಗಾಯಗಳಾಗಿದ್ದು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಇಂಡೋನೇಷಿಯಾದ ಜಕಾರ್ತಾದಲ್ಲಿ ಈ ಘಟನೆ ನಡೆದಿದೆ. ಕಳೆದ ವಾರದ ಆರಂಭದಲ್ಲಿ ಈ ಘಟನೆ ನಡೆದಿದ್ದು, ಸಿಡಿಲು ಬಡಿತಕ್ಕೊಳಗಾದ 35 ವರ್ಷದ ವ್ಯಕ್ತಿಯನ್ನು ಅಬ್ದುಲ್ ರೋಸಿದ್ ಎಂದು ಗುರುತಿಸಲಾಗಿದೆ.
ಸಿಡಿಲು ಬಡಿತಕ್ಕೊಳಗಾದ ವ್ಯಕ್ತಿ ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. ಈ ಸಂದರ್ಭದಲ್ಲಿ ರಭಸವಾದ ಮಳೆಯೂ ಬರುತ್ತಿದ್ದು, ಮಳೆಗೆ ಕೊಡೆಯನ್ನು ಹಿಡಿದುಕೊಂಡು ಬೃಹತ್ ಟ್ರಕ್ಗಳಿರುವ ಕಾರ್ಖಾನೆಯ ಪಾರ್ಕಿಂಗ್ ಸ್ಥಳದ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ ಸಿಡಿಲು ಇವರ ಕೊಡೆಗೆ ಬಡಿದು ಇವರ ಮೇಲೆರಗಿದೆ, ಸ್ಥಳದಲ್ಲೇ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿಗೆ ಧಾವಿಸಿದ ಉಳಿದ ಸೆಕ್ಯೂರಿಟಿ ಗಾರ್ಡ್ಗಳು ತಕ್ಷಣವೇ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದರ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗಾಬರಿ ಮೂಡಿಸುವಂತಿದೆ. ಉತ್ತರ ಜಕಾರ್ತಾ (North Jakarta) ಕರಾವಳಿ ಪಟ್ಟಣವಾದ ಸಿಲಿನ್ಸಿಂಗ್ (Cilincing)ನಲ್ಲಿ ಈ ಘಟನೆ ನಡೆದಿದೆ. ಸಿಡಿಲಿನ ಹೊಡೆತಕ್ಕೊಳಗಾದರೂ ಅಬ್ದುಲ್ ರೋಸಿದ್ ಅವರ ಕೈಗಳಿಗೆ ಮಾತ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ನಾಲ್ಕು ದಿನ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಲಿಂಸಿಂಗ್ ಪೊಲೀಸ್ ಕಮಿಷನರ್ ಆರ್. ಮನುರುಂಗ್ (R.Manurung) ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾನ್ಸೂನ್ ಸಮಯದಲ್ಲಿ ಛತ್ರಿಗಳು ಅತ್ಯಗತ್ಯವಾದರೂ, ಗುಡುಗು ಸಹಿತ ಮಳೆಯ ಸಮಯದಲ್ಲಿ ಅವುಗಳನ್ನು ಹಿಡಿದುಕೊಂಡಿರುವುದು ಎಷ್ಟು ಸುರಕ್ಷಿತ ಎಂಬ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಸಂಬಂಧಿಕರ ಮನೆಗೆ ಹೋದ ತಂದೆ ಮಗನಿಗೆ ನೈಸ್ ರೋಡ್ ನಲ್ಲಿ ಕಾದಿತ್ತು ಸಿಡಿಲಿನ ಮೃತ್ಯು!
ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿದ್ದ ವಾಕಿಟಾಕಿಯಿಂದಾಗಿ ಸಿಡಿಲು ಆತನಿಗೆ ಬಡಿದಿದೆ ಎನ್ನಲಾಗುತ್ತಿದ್ದು, ಮಳೆಯಲ್ಲಿ ನಡೆಯುವಾಗ ರೇಡಿಯೋ ಮತ್ತು ಮೊಬೈಲ್ ಫೋನ್ ಬಳಸದಂತೆ ಸ್ಥಳೀಯ ಪತ್ರಿಕೆಗಳು ಜನರಿಗೆ ಎಚ್ಚರಿಕೆ ನೀಡಿವೆ. ಕಳೆದ ಮಾರ್ಚ್ನಲ್ಲಿ ಗುರುಗ್ರಾಮದ (Gurugram) ನಾಲ್ವರು ತೋಟಗಾರಿಕೆ (horticulture) ಸಿಬ್ಬಂದಿ ಮೇಲೆ ಸಿಡಿಲು ಬಡಿದಿತ್ತು. ಘಟನೆಯಲ್ಲಿ ನಾಲ್ವರು ಕೂಡ ಬದುಕುಳಿದಿದ್ದರು. ಮಳೆಯನ್ನು ತಪ್ಪಿಸಲು, ನಾಲ್ಕು ಜನರು ಮರದ ಕೆಳಗೆ ಆಶ್ರಯ ಪಡೆಯಲು ಪ್ರಯತ್ನಿಸುತ್ತಿರುವಾಗ ಅವರ ಪಾದದ ಮೇಲೆ ಸಿಡಿಲು ಬಿದ್ದಿತು. ಕೂಡಲೇ ಮೂವರು ಕೆಳಗೆ ಬಿದ್ದಿದ್ದರು. ಸಿಡಿಲು ಬಡಿದ ವ್ಯಕ್ತಿಗಳು ಬದುಕುಳಿಯುವುದು ಕಡಿಮೆಯಂತೆ ಆದರೆ ಅದೃಷ್ಟವಶಾತ್ ಈ ಮೂವರು ಬದುಕುಳಿದಿದ್ದರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮದುವೆ ಸಮಾರಂಭಕ್ಕೆ ಬಡಿದ ಸಿಡಿಲು, 16 ಸಾವು, ವರನಿಗೆ ಗಾಯ!