ಸಂಬಂಧಿಕರ ಮನೆಗೆ ಹೋದ ತಂದೆ ಮಗನಿಗೆ ನೈಸ್ ರೋಡ್ ನಲ್ಲಿ ಕಾದಿತ್ತು ಸಿಡಿಲಿನ ಮೃತ್ಯು!
* ಬೆಂಗಳೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು...
* ಬೆಂಗಳೂರಿನ ನೈಸ್ ರೋಡ್ ನಲ್ಲಿ ದಾರುಣ ಘಟನೆ
* ತಿಪ್ಪೇಸ್ವಾಮಿ (46) ಮೃತ ವ್ಯಕ್ತಿ, ತಿಪ್ಪೇಸ್ವಾಮಿ ಮಗ ಚಿದಾನಂದನಿಗೂ ತಾಗಿದ ಸಿಡಲು
* ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಬೆಂಗಳೂರು(ಅ. 10) ಬೆಂಗಳೂರಿನ ನೈಸ್ ರಸ್ತೆಯಲ್ಲಿ ದಾರುಣ ಘಟನೆ ನಡೆದಿದೆ. ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಅವರ ಪುತ್ರನಿಗೂ ಸಿಡಿಲು ಬಡಿದಿದೆ. ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಂದೆ ತಿಪ್ಪೆಸ್ವಾಮಿ ಮೃತಪಟ್ಟಿದ್ದು ಪುತ್ರ ಚಿದಾನಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ತಂದೆ ಮಗ ತೆರಳಿದ್ದರು. ಟಿ ದಾಸರಹಳ್ಳಿಯಲ್ಲಿರು ಮನೆಗೆ ವಾಪಾಸ್ ಬರುತ್ತಿರುವಾಗ ಸಾವು ಕಾದಿತ್ತು.
ಮಳೆ ಬಂದ ಕಾರಣ ನೈಸ್ ರೋಡ್ ನಲ್ಲಿರುವ ಮರದ ಕೆಳಗೆ ನಿಂತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ ಮೂಲತಃ ತುಮಕೂರು ಮೂಲದವರಾಗಿದ್ದು ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮದುವೆ ಸಮಾರಂಭಕ್ಕೆ ಸಿಡಿಲು ಬಡಿದು ಹದಿನಾರು ಜನ ಸಾವು
ಸಿಡಿಲಿನಿಂದ ರಕ್ಷಣೆ ಹೇಗೆ? ಬಯಲು ಪ್ರದೇಶದಲ್ಲಿದ್ದರೆ ತಕ್ಷ ಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಒದ್ದೆ ನೆಲದೊಂದಿಗೆ ನಿಮ್ಮ ಇಡೀ ದೇಹಕ್ಕೆ ಸಂಪರ್ಕವಿರಬಾರದು. ಕುಕ್ಕರುಗಾಲಿನಲ್ಲಿ ಕುಳಿತು, ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ ಎಂದು ಸಂಶೋಧನೆ ಹೇಳುತ್ತದೆ.
ಮರಗಳಿಂದ ದೂರವಿದ್ದು ಸಣ್ಣ ಗಿಡಗಳ ಆಶ್ರಯ ಪಡೆದುಕೊಳ್ಳುವುದು ಒಳ್ಳೆಯದು. ದೊಡ್ಡ ಮರಗಳಿಗೆ ಸಿಡಿಲು ಬಡಿಯುವುದು ಜಾಸ್ತಿ. ಲೋಹದ ವಸ್ತುಗಳಿಂದ ದೂರ ಇರಿ, ಈಜುವುದು, ನೀರಿನಲ್ಲಿ ಆಡುವ ದುಸ್ಸಾಹಸ ಬೇಡ. ತಂತಿ ಬೇಲಿಗಳಿಂದ ದೂರ ಇರಿ. ಪೋನ್ ಮಾಡುವ ಸಾಹಸವೂ ಬೇಡ.. ಮೊಬೈಲ್ ಸ್ವಿಚ್ ಆಫ್ ಮಾಡಿದರೆ ಒಳಿತು. ಯಾವುದಕ್ಕೂ ತಾಗಿಕೊಂಡು ಇರದೇ ಮಧ್ಯದಲ್ಲಿ ಇರುವುದು ಉತ್ತಮ.
"